ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 25 : ರಾಜಕೀಯವಾಗಿ ಮುನ್ನಡೆಯಲು ಅವಕಾಶ ವಂಚಿತರಾಗಿರುವ ಹೋರಾಟದ ಮನಸ್ಸುಳ್ಳವರ ಪರವಾಗಿ ಆಂಧ್ರದ ಜನಸೇನಾ ಪಾರ್ಟಿ ಕರ್ನಾಟಕದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ ಎಂದು ಆಂಧ್ರಪ್ರದೇಶದ ವಿಧಾನಪರಿಷತ್ ಸದಸ್ಯ ನಾಗಬಾಬು ಭರವಸೆ ನೀಡಿದರು.
ಚಳ್ಳಕೆರೆ ರಸ್ತೆಯಲ್ಲಿರುವ ಎಸ್.ಜಿ.ಕನ್ವೆಂಷನ್ ಹಾಲ್ನಲ್ಲಿ ಶನಿವಾರ ನಡೆದ ಜನಸೇನಾ ಪಾರ್ಟಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸಾರಥ್ಯದ ಜನಸೇನಾ ಪಾರ್ಟಿ ಕರ್ನಾಟಕ, ತಮಿಳುನಾಡು, ಕೇರಳ, ಒರಿಸ್ಸಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ವಿಸ್ತರಿಸಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ರಾಜ್ಯದಲ್ಲಿಯೂ ಕಚೇರಿಯನ್ನು ಆರಂಭಿಸಲಾಗುವುದು. ಆಂಧ್ರದಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ. ಜೊತೆ ಜನಸೇನಾ ಪಾರ್ಟಿ ಕೆಲಸ ಮಾಡುತ್ತಿರುವುದರಿಂದ ಕರ್ನಾಟಕದಲ್ಲಿಯೂ ರಾಜಕೀಯ ಕಾರ್ಯಕಲಾಪಗಳನ್ನು ಚುರುಕುಗೊಳಿಸಲಾಗುವುದು. ಮುಂದಿನ ದಿನಗಳಲ್ಲಿ ಅಧ್ಯಕ್ಷರ ಜೊತೆ ಚರ್ಚಿಸಿ ಕರ್ನಾಟಕದ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಶ್ರೀಕೃಷ್ಣದೇವರಾಯ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಕೊಂಡಿಯಿದ್ದಂತೆ. ಕರ್ನಾಟಕದಲ್ಲಿ ಕನ್ನಡಿಗರು ಜನಸೇನಾ ಪಾರ್ಟಿ ಬಗ್ಗೆ ಅಭಿಮಾನವಿಟ್ಟು ಸದಸ್ಯತ್ವ ನೊಂದಣಿಗೆ ಮುಂದೆ ಬರುತ್ತಿದ್ದಾರೆ. ಗಂಡು ಮೆಟ್ಟಿನ ನಾಡು ಮದಕರಿನಾಯಕ ಆಳಿದ ಐತಿಹಾಸಿಕ ಚಿತ್ರದುರ್ಗದಲ್ಲಿ ಸದಸ್ಯತ್ವ ನೊಂದಣಿಗೆ ಯುವ ಜನಾಂಗ ಉತ್ಸುಕರಾಗಿರುವುದು ಮನಸ್ಸಿಗೆ ಖುಷಿ ಎನಿಸುತ್ತದೆ. ಯುವಕರು, ಸಮಾನ ಮನಸ್ಕರ ಆಶಯ ಆಶೋತ್ತರಗಳಿಗೆ ಜನಸೇನಾ ಪಾರ್ಟಿ ಬೆಂಬಲವಾಗಿ ನಿಲ್ಲುತ್ತದೆ. ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಅನುಮೋದನೆಗೆ ಕಾಂಗ್ರೆಸ್ನವರು ರಾಜಕೀಯ ದುರುದ್ದೇಶದಿಂದ ಬೆಂಬಲ ನೀಡಲಿಲ್ಲ. ಇದರಿಂದ ರಾಜಕೀಯ ಪಕ್ಷಗಳಿಗೆ ನಷ್ಟವಿಲ್ಲದಿದ್ದರು ಸಾಮಾನ್ಯ ವ್ಯಕ್ತಿಗಳಿಗೆ ಹಾನಿಯಾಗುತ್ತದೆ ಎಂದರು. ಜನಸೇನಾ ಪಾರ್ಟಿಯ ಆಂಧ್ರದ ಪ್ರಧಾನ ಕಾರ್ಯದರ್ಶಿ ರಾಂತಲ್ಲೂರಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಡಿ.ಬಸವರಾಜ್ ಇವರುಗಳು ಈ ಸಂದರ್ಭದಲ್ಲಿದ್ದರು.





















