ಚಿತ್ರದುರ್ಗ,ಏಪ್ರಿಲ್ .25: ಸರ್ಕಾರದ ವಿವಿಧ ಯೋಜನೆಗಳಡಿ ವಿತರಿಸಬೇಕಾದ ಪಡಿತರ ಅಕ್ಕಿ, ಗೋಧಿ, ರಾಗಿ ಹಾಗೂ ಅಂಗನವಾಡಿ ಕೇಂದ್ರಗಳ ಪುಷ್ಠಿ ಮತ್ತು ಮಿಲೆಟ್ ಲಡ್ಡುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಡ್ಡೆಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿ, ದೊಡ್ಡ ಪ್ರಮಾಣದ ಆಹಾರ ಧಾನ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಹಳೇ ಬೆಂಗಳೂರು ರಸ್ತೆಯ ಇಂಡಸ್ಟ್ರಿಯಲ್ ಏರಿಯಾದ ಶ್ರೀ ಸಾಯಿ ಏಜೆನ್ಸಿ ಎದುರಿನ ಶೆಡ್ವೊಂದರಲ್ಲಿ ಪಡಿತರ ಧಾನ್ಯಗಳನ್ನು ಶೇಖರಿಸಿರುವ ಬಗ್ಗೆ ಅಪರಿಚಿತ ವ್ಯಕ್ತಿ ಬಡಾವಣೆ ಪೊಲೀಸ್ ಠಾಣೆ ಅಧಿಕಾರಿಗಳಿಗೆ ದೂರು ನೀಡಿದ್ದರ ಮೇರೆಗೆ ಚಿತ್ರದುರ್ಗ ಅನೌಪಚಾರಿಕ ಪಡಿತರ ಪ್ರದೇಶದ ಆಹಾರ ನಿರೀಕ್ಷಕರಾದ ಎಂ. ರಜನಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ವೇಳೆ ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ವಿತರಿಸುವ ಅಕ್ಕಿ, ರಾಗಿ, ಗೋದಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಪುಷ್ಠಿ ಮತ್ತು ಮಿಲೆಟ್ ಲಡ್ಡುಗಳು ಇರುವುದು ಪತ್ತೆಯಾಗಿದೆ. ಈ ಕುರಿತು ಸಾರ್ವಜನಿಕರಿಗೆ ವಿಚಾರಣೆ ನಡೆಸಿದಾಗ ಈ ಮಾಲು ಸೈಯದ್ ಮುಜ್ಜು ಎಂಬುವವರಿಗೆ ಸೇರಿದ್ದೆಂದು ತಿಳಿದುಬಂದಿದೆ.
ದಾಳಿಯ ವೇಳೆ ಒಟ್ಟು 105.60 ಕ್ವಿಂಟಾಲ್ ಅಕ್ಕಿ, 71.60 ಕ್ವಿಂಟಾಲ್ ಗೋಧಿ, 26.70 ಕ್ವಿಂಟಾಲ್ ರಾಗಿ ಹಾಗೂ 4 ಪ್ಯಾಕೆಟ್ ಮಿಲೆಟ್ ಲಡ್ಡು ಮತ್ತು 7 ಪ್ಯಾಕೆಟ್ ಪುಷ್ಟಿ ಆಹಾರವನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.



















