ಬೆಂಗಳೂರು: ಧರ್ಮಸ್ಥಳದ ಕೇಸ್ ಇಡೀ ರಾಜ್ಯಕ್ಕೆ ಗೊತ್ತಿರುವ ವಿಚಾರ. ಆ ವ್ಯಕ್ತಿಯು ನಾನು ಎಲ್ಲವನ್ನೂ ಹೇಳ್ತೇನೆ ಅಂತ ಮುಂದೆ ಬಂದಿದ್ದಾನೆ. ಸರ್ಕಾರವೂ ಎಸ್ಐಟಿ ತನಿಖೆಗೆ ಒಪ್ಪಿಗೆ ನೀಡಿದೆ. ಇಂದಿನಿಂದ ತನಿಖೆ ಶುರುವಾಗಲಿದ್ದು, ಹೆಚ್ಚುವರಿಯಾಗಿ 20 ಮಂದಿ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಹಿರಿಯ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತಂಡ ಈ ತನಿಖೆಯನ್ನ ನಡೆಸಲಿದೆ. ಅದರ ಭಾಗವಾಗಿ ಮೊದಲು ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಇಂದೇ ಧರ್ಮಸ್ಥಳಕ್ಕೆ ತಂಡ ಭೇಟಿ ನೀಡುತ್ತಿದೆ.
ಎಸ್ಐಟಿ ತಂಡ ಮೊದಲಿಗೆ ಧರ್ಮಸ್ಥಳದ ಪೊಲೀಸ್ ಠಾಣೆಗೆ ಹೋಗಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಎಸ್ಪು, ಧರ್ಮಸ್ಥಳ ಪೊಲೀಸ್ ಇನ್ಸ್ಪೆಕ್ಟರ್ ಜೊತೆಗೆ ಪ್ರಕರಣದ ಮಾಹಿತಿಯನ್ನ ಪಡೆಯಲಿದ್ದಾರೆ. ಬಳಿಕ ಅಧಿಕೃತವಾಗಿ ಪ್ರಕರಣ ಎಸ್ಐಟಿ ತಂಡಕ್ಕೆ ವರ್ಗಾವಣೆ ಮಾಡಲಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ನೀಡಿದ ಹೇಳಿಕೆಯ ಮೇರೆಗೆ ಈ ಕೇಸ್ ನ ವಿಚಾರಣೆ ಶುರುವಾಗಲಿದೆ.
ಈ ವಿಚಾರಣೆ, ತನಿಖೆಯ ಹಾದಿ ಅಷ್ಟು ಸುಲಭವಾಗಿಲ್ಲ ಅನ್ನೋದು ಎಸ್ಐಟಿ ತಂಡಕ್ಕೂ ಗೊತ್ತಿದೆ. ಯಾಕಂದ್ರೆ ಇದು ನಿನ್ನೆ ಮೊನ್ನೆಯ ಕೇಸ್ ಅಲ್ಲ. ಸವಾಲಿನ ಕೆಲಸವಾದರೂ ಎಸ್ಐಟಿ ತಂಡ ರಚನೆ ಮಾಡಿಕೊಂಡು ತನಿಖೆಗೆ ಮುನ್ನುಡಿ ಬರೆಯುತ್ತಿದೆ. ಹೀಗಾಗಿಯೇ ತಂಡಕ್ಕೆ ಹೆಚ್ಚುವರಿಯಾಗಿ 20 ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದೆ. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದ ಪೊಲೀಸ್ ಅಧಿಕಾರಿಗಳು ಇದ್ದಾರೆ. ಎಂಟು ಮಂದಿ ಸಬ್ ಇನ್ಸ್ಪೆಕ್ಟರ್ ಇದ್ದಾರೆ. ಐವರು ಐಪಿಎಸ್, ಇಬ್ಬರು ಡಿಎಸ್ಪಿ, ಆರು ಜನ ಇನ್ಸ್ಪೆಕ್ಟರ್ ತಂಡದಲ್ಲಿ ಇದ್ದಾರೆ.

