ಇಂದು ಭಾರತ ವರ್ಸಸ್ ಪಾಕ್ ಪಂದ್ಯ ನಡೆಯಲಿದೆ. ಸಾಂಪ್ರಾದಾಯಿಕ ವೈರಿಗಳನ್ನು ಕಟ್ಟಿ ಹಾಕಲು ಭಾರತ ತಂಡ ಸಜ್ಜಾಗಿದೆ. ಈ ಪಂದ್ಯವನ್ನ ಕಣ್ತುಂಬಿಕೊಳ್ಳಲು ಇಡೀ ಭಾರತ ಕಾತುರದಿಂದ ಕಾಯುತ್ತಿದೆ. ಅಭಿಮಾನಿಗಳು, ಸೆಲೆಬ್ರೆಟಿಗಳು ಎಲ್ಲರೂ ಭಾರತ ತಂಡಕ್ಕೆ ವಿಶ್ ಮಾಡಿದ್ದಾರೆ. ಗೆದ್ದು ಬಾ ಇಂಡಿಯಾ ಎಂದು ಶುಭ ಹಾರೈಸಿದ್ದಾರೆ.
ಅಷ್ಟೇ ಅಲ್ಲ ಕ್ರಿಕೆಟ್ ಅಭಿಮಾನಿಗಳು ಭಾರತ ತಂಡದ ಗೆಲುವಿಗಾಗಿ ಪೂಜೆ ಸಲ್ಲಿಸಿದ್ದಾರೆ. ಚಾಮರಾಜನಗರದ ರಾಮಸಮುದ್ರದ ಬಳಿ ಇರುವ ಶ್ರೀ ಜನಾರ್ಧನ ಸ್ವಾಮಿ ಮಂದಿರದಲ್ಲಿ ಭಾರತ ತಂಡದ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭಾರತ ತಂಡದ ಆಟಗಾರರ ಮನಸ್ಸು ಕುಗ್ಗದೆ ಇರಲಿ, ಹಿನ್ನಡೆಯಾಗದೆ ಇರಲಿ ಎಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ಅಭಿಮಾನಿಗಳು ಅರ್ಚನೆಯನ್ನು ಮಾಡಿಸಿದ್ದಾರೆ.
ಇದು ಅಭಿಮಾನಿಗಳ ಹರಕೆ ಪೂಜೆ ಒಂದು ಕಡೆಯಾದರೆ ನಮ್ಮ ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳು ವಿಶ್ ಮಾಡಿದ್ದಾರೆ. ಶ್ರೀಮುರುಳಿ, ಕಾರುಣ್ಯ ರಾಮ್, ಶರಣ್ ಹೀಗೆ ಎಲ್ಲರೂ ನಮ್ಮ ಟೀಂ ಇಂಡಿಯಾವೇ ಗೆಲ್ಲಬೇಕು ಎಂದು ಮನಸ್ಪೂರ್ತಿಯಾಗಿ ಹಾರೈಸಿದ್ದಾರೆ. 2017ರ ರಿವೇಂಜ್ ಅನ್ನು ಈ ಬಾರಿ ಟೀಂ ಇಂಡಿಯಾ, ಪಾಕಿಸ್ತಾನದ ಮೇಲೆ ತೀರಿಸಿಕೊಳ್ಳಲಿದೆ ಎಂಬ ದೊಡ್ಡ ಮಟ್ಟದ ನಿರೀಕ್ಷೆ ಎಲ್ಲರಿಗೂ ಇದೆ. ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಭರವಸೆ ಇದೆ. ಪಾಕಿಸ್ತಾನದ ಮೇಲಿನ ಮ್ಯಾಚ್ ಎಂದರೆ ಕೊಹ್ಲಿಗೆ ಇನ್ನಿಲ್ಲದ ಉತ್ಸಾಹ. ಹೀಗಾಗಿ ನಮ್ಮ ಬಲಿಷ್ಠ ಟೀಂ ಇಂಡಿಯಾ ಈ ಬಾರಿ ಪಾಕಿಸ್ತಾನವನ್ನು ಸದೆ ಬಡಿಯಲಿದೆ ಎಂದು ಎಲ್ಲರೂ ಕಾಯುತ್ತಿದ್ದಾರೆ. ಮ್ಯಾಚ್ ಶುರುವಾಗುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ.










