in ,

ರಾಜ್ಯದ ಭ್ರಷ್ಟಾಚಾರದಲ್ಲಿ ಹೊಳಲ್ಕೆರೆ ಕ್ಷೇತ್ರದ ಶಾಸಕರೇ ನಂ.1 : ಮಾಜಿ ಸಚಿವ ಎಚ್.ಆಂಜನೇಯ

suddione whatsapp group join

ಹೊಳಲ್ಕೆರೆ, (ಏ. 26): ರಾಜ್ಯದ ವಿವಿಧೆಡೆ ಬಿಜೆಪಿ ಶಾಸಕರು ನಲವತ್ತು ಪಸೆಂಟ್ ಪಡೆಯುತ್ತಿದ್ದರೆ, ಹೊಳಲ್ಕೆರೆ ಕ್ಷೇತ್ರದ ಶಾಸಕರು ಶೇ.60ಕ್ಕೂ ಹೆಚ್ಚು ಪರ್ಸೆಂಟ್ ಪಡೆಯುವ ಮೂಲಕ ರಾಜ್ಯದಲ್ಲಿಯೇ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನ ಗಳಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಪಟ್ಟಣ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷೇತರ ಪುರಸಭಾ ಸದಸ್ಯ ಸೇರಿದಂತೆ ಅನೇಕ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಎಂ.ಚಂದ್ರಪ್ಪ ಬಾಯಿಬಿಟ್ಟರೆ 300 ಕೆರೆ ಅಭಿವೃದ್ಧಿಗೊಳಿಸಿದ್ದು, ಈ ಕುರಿತು ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳುತ್ತಿದ್ದರು. ಆದರೆ, ಇಲ್ಲಿಯವರೆಗೂ ಶ್ವೇತಪತ್ರ ಇರಲಿ, ಕೆರೆ ಹೂಳು ಎತ್ತುವುದು, ಅಭಿವೃದ್ಧಿಯಲ್ಲಿ ಆಗಿರುವ ಲೆಕ್ಕಪತ್ರ ಜನರ ಮುಂದೆ ಮಂಡಿಸುವ ಧೈರ್ಯ ಮಾಡಿಲ್ಲ. ಆದ್ದರಿಂದಲೇ ಕೆರೆ ಹೂಳೆತ್ತುವುದರಲ್ಲಿ ಆಗಿರುವ ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಲಿಖಿತವಾಗಿ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ ಎಂದರು.

ಶೈಕ್ಷಣಿಕ ಕ್ಷೇತ್ರ ಪ್ರಗತಿಗಾಗಿ 800 ಕೋಟಿ ರೂ. ಅನುದಾನ ನೀಡಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ. ಈ ಕುರಿತು ಸ್ಪಷ್ಟನೆ ಕೇಳಿದರೆ ಉಡಾಫೆಯಾಗಿ ಮಾತನಾಡುತ್ತಾರೆ. ಕ್ಷೇತ್ರದಲ್ಲಿ ಸರ್ಕಾರದ ಅನುದಾನ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತನಿಖೆ ಒಳಡಿಸಿ, ಭ್ರಷ್ಚರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲಿಕಿದ್ದು, ಎಲ್ಲೆಡೆ ಜನಾಕ್ರೋಶ ತೀವ್ರಗೊಂಡಿದೆ.ಮತದಾನದ ದಿನಕ್ಕಾಗಿ ಕಾಯುತ್ತಿದ್ದಾರೆ.ಕ್ಷೇತ್ರದಲ್ಲಿ ಯಾವುದೇ ಗ್ರಾಮಕ್ಕೆ ಹೋದಲ್ಲಿ, ಬಿಜೆಪಿ ಕಾರ್ಯಕರ್ತರು, ಮುಖಂಡರು ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಇವರ್ಯಾರು ಕೂಡ ಯಾವುದೇ ಆಮಿಷಕ್ಕೆ ಒಳಗಾಗದೇ, ಷರತ್ತು ವಿಧಿಸದೆ ಪಕ್ಷ ಸೇರುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ದುರಾಹಂಕಾರಿ ಚಂದ್ರಪ್ಪನನ್ನು ಸೋಲಿಸಬೇಕು ಎಂಬುದು.ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವ ಎಲ್ಲರನ್ನೂ ಪಕ್ಷ ಬರಮಾಡಿಕೊಳ್ಳಲಿದೆ. ಅವರೆಲ್ಲರನ್ನೂ ಗೌರವದಿಂದ ನಡೆಸಿಕೊಳ್ಳಲಿದೆ ಎಂದರು.

ಪುರಸಭೆ ಸದಸ್ಯ ವಿಜಯಸಿಂಹ ಖಾಟ್ರೋತ್ ಮಾತನಾಡಿ, ಬಿಜೆಪಿ ಪಕ್ಷವನ್ನು 30 ವರ್ಷದಿಂದ ಕಟ್ಟಿ ಬೆಳೆಸಿದ ಅನೇಕ ಕಾರ್ಯಕರ್ತರು, ಮುಖಂಡರನ್ನು ಶಾಸಕ ಚಂದ್ರಪ್ಪ ಅಗೌರವದಿಂದ ನಡೆಸಿಕೊಂಡಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಆಂಜನೇಯ ಅವಧಿ ಕೆಲಸಗಳನ್ನೇ ನಾನು ಮಾಡಿದ್ದು ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ದೂರಿದರು.

ಶೈಕ್ಷಣಿಕ ಪ್ರಗತಿಗೆ 800 ಕೋಟಿ ರೂ. ಶಾಸಕರ ಅನುದಾನ ನೀಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರು ತಮ್ಮ ಹೇಳಿಕೆ ಸಾಬೀತು ಪಡಿಸಿದರೆ ನನ್ನ ಪುರಸಭೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡ ಬಸವರಾಜ್ ಮಾತನಾಡಿ, ಸಾಮಾನ್ಯ ಕಾರ್ಯನಾಗಿದ್ದ ನನ್ನನ್ನು ಪಕ್ಷದ ವರಿಷ್ಠರು ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿ ಗೌರವಿಸಿದರು. ಆದರೆ, ಕ್ಷೇತ್ರದ ಶಾಸಕರು ನಮ್ಮನ್ನು ಕಾಲ ಕಸಕ್ಕಿಂತ ಕಡೆಯಾಗಿ ನಡೆಸಿಕೊಂಡರು. ಎಲ್ಲದಕ್ಕಿಂತಲೂ ಬೇಸರದ ಸಂಗತಿ ಎಂದರೆ ಅವರು ಬಾಯಿ ತೆರೆದರೆ ಅವಾಚ್ಯ ಶಬ್ಧ ಬಳಸುವುದು ಎಂದು ಹೇಳಿದರು.

ಶಾಸಕರ ಉಡಾಫೆ, ಕೆಟ್ಟ ಪದ ಬಳಕೆ, ಅಹಂಕಾರದಿಂದ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಮ್ಮಂತವರು ಮೂಲೆಗುಂಪು ಆಗಿದ್ದೇವೆ. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯದಿಂದ ಜನರಿಗೆ ಉತ್ತರ ಕೊಡಲು ಆಗದಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾವುದೇ ಊರಿಗೆ ಹೋದರೂ ನಿಮ್ಮ ಬಿಜೆಪಿ ಶಾಸಕ ಬಹಳ ಅಹಂಕಾರಿ ಎನ್ನುತ್ತಾರೆ. ಇದರಿಂದ ಕಾರ್ಯಕರ್ತರು ಬಹಳ ಮನನೊಂದಿದ್ದಾರೆ ಎಂದರು.

ಕ್ಷೇತ್ರದಲ್ಲಿ ಎಚ್.ಆಂಜನೇಯ ಸಚಿವರಾಗಿದ್ದ ಸಂದರ್ಭ ಪಕ್ಷಾತೀತ, ಜಾತ್ಯತೀತವಾಗಿ ಅನುದಾನ ಹಂಚಿಕೆ ಮಾಡಿ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದರು. ಆದರೆ, ಈಗಿನ ಶಾಸಕರು, ನಿಮ್ಮೂರಲ್ಲಿ ನನಗೆ ಮತ ಕಡಿಮೆ ಬಂದಿವೆ ಎಂದು ಕೆಲ ಹಳ್ಳಿಗಳನ್ನೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದರು.

ದುಷ್ಟನ ಸಂಹಾರಕ್ಕೆ ಆಂಜನೇಯ :

ಮೇ 10 ಬುಧವಾರ ಮತದಾನ. ಕ್ಷೇತ್ರದ ಬುದ್ಧಿವಂತ ಮತದಾರರು ಚಂದ್ರಪ್ಪನ ಅಹಂಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಮೇ 13 ಶನಿವಾರ ಆಂಜನೇಯನ ವಾರ ವಿಧಾನಸಭಾ ಫಲಿತಾಂಶ ಪ್ರಕಟಗೊಳ್ಳಲಿದೆ. ಅಂದು ಚಂದ್ರಪ್ಪ ಸೋತು, ಆಂಜನೇಯ ಗೆಲುವು ಸಾಧಿಸುವ ಮೂಲಕ  ದುಷ್ಟನ ಸಂಹಾರ ಆಂಜನೇಯ ನಡೆಸಲಿದ್ದಾರೆ ಎಂದು ಬಿಜೆಪಿ ತೊರೆದ ಹಿರಿಯ ಮುಖಂಡ ಚನ್ನಬಸಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಉಪಾಧ್ಯಕ್ಷ ಮುರುಘೇಂದ್ರಪ್ಪ, ಬಿದರಕೆರೆ ಗ್ರಾಪಂ ಮಲ್ಲಪ್ಪ, ಮುಖಂಡರಾದ ರಂಗಾಪುರ ರಾಜಶೇಖರ್, ಕುನಗಲಿ ಕುಬೇರಪ್ಪ, ತುಪ್ಪದಹಳ್ಳಿ ದಿನೇಶ್, ಯೋಗಮೂರ್ತಿನಾಯ್ಕ್ ಗುಂಡಿಮಡು ಲಿಂಗರಾಜ್, ವೇದಮೂರ್ತಿ ಉಪಸ್ಥಿತರಿದ್ದರು

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಬಾಗೂರಿನಲ್ಲಿ ಹೆಚ್ಚು ಮಳೆ

ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆ ಹಂಚಿಕೆ