ಸುದ್ದಿಒನ್, ಹಿರಿಯೂರು, ನವೆಂಬರ್ . 25 : ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕನು ಸಹ ಕಾನೂನಿನ ಜ್ಞಾನ ತಿಳಿದುಕೊಂಡರೆ ಅಪರಾಧಗಳ ಸಂಖ್ಯೆ ತಡೆಗಟ್ಟಲು ಸಾಧ್ಯ ಎಂದು ಚಿತ್ರದುರ್ಗ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣಾ ಆವರಣದಲ್ಲಿ ಮಂಗಳವಾರ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಅಂಗವಾಗಿ ಆಯೋಜಿಸಿದ್ದ ಜನಸಂಪರ್ಕ ಸಭೆ ಹಾಗೂ ಹೆಲ್ಮೆಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಅಪರಾಧಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗುತ್ತದೆ.
ಸಣ್ಣಪುಟ್ಟ ಸಮಸ್ಯೆಗಳನ್ನು ರಾಜಿ ಮಾಡಬೇಕೇ ಹೊರತು, ಗ್ರಾಮದ ಮುಖಂಡರುಗಳು ಗಂಭೀರ ಪ್ರಕರಣಗಳನ್ನು ರಾಜಿ ಮಾಡುವ ಪ್ರವೃತ್ತಿಯನ್ನು ಪ್ರೋತ್ಸಾಹಿಸಬಾರದು. ಸಮಸ್ಯೆಗಳು ತಮ್ಮಲ್ಲೇ ಬಗೆಹರಿಸಿಕೊಳ್ಳದೇ ಕಾನೂನಾತ್ಮಕವಾಗಿ ನೊಂದವರಿಗೆ ಪರಿಹಾರ ದೊರಕಿಸಿಕೊಡಬೇಕು. ಮದ್ಯಪಾನ, ಮಟ್ಕ, ಜೂಜಾಟ ಮುಂತಾದ ಅಕ್ರಮ ಚಟುವಟಿಕೆಗಳು ಕಂಡುಬoದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು. ಈ ಠಾಣೆಯು ಗಡಿಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಯಾವುದೇ ಮಾಹಿತಿ ಮುಚ್ಚಿಡಬಾರದು ಎಂದರು.
ಐಮoಗಲ ವೃತ್ತ ನಿರೀಕ್ಷಕ ಗುಡ್ಡಪ್ಪ ಮಾತನಾಡಿ ಸೈಬರ್ ಅಪರಾಧಗಳಿಗೆ ಸಂಬoಧ ಪಟ್ಟಂತೆ ಏನಾದರೂ ದೂರುಗಳು ಇದ್ದರೆ ಸಮೀಪದ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಬೇಕು.ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ಅಬಕಾರಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಧರ್ಮಪುರ ಗ್ರಾಮದ ಮುಖಂಡ ಶಿವಣ್ಣ ಮಾತನಾಡಿ ಧರ್ಮಪುರ ಹೋಬಳಿ ಕೇಂದ್ರವಾಗಿದ್ದು ಅಲ್ಲಿರುವ ತಾತ್ಕಾಲಿಕ ಉಪಠಾಣೆಗೆ ಸಿಬ್ಬಂದಿ ನಿಯೋಜಿಸುವಂತೆ ಮನವಿ ಮಾಡಿದರು.
ಖಂಡೇನಹಳ್ಳಿ ಶಿವು ಮಾತನಾಡಿ ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದರ ಬಗ್ಗೆ ಸೂಕ್ಷ್ಮವಾಗಿ ನಿಗಾ ಇಡುವಂತೆ ಮನವಿ ಮಾಡಿದರು.
ಗೊಲ್ಲಹಳ್ಳಿ ಪರಮೇಶ್ ಮಾತನಾಡಿ ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಿಗೆ ಸಂಚಾರ ನಿಯಮ ಹಾಗೂ ಕಾನೂನು ಅರಿವು ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ ಎಂದರು.
ಸಾರ್ವಜನಿಕರಿಗೆ ಆಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದ ಧರ್ಮಪುರ ಶಿವಣ್ಣ, ಗೂಳ್ಯ ಅನಿಲ್, ಹೂವಿನಹೊಳೆ ಹೇಮಂತ್ಗೌಡ, ಬ್ಯಾಡರಹಳ್ಳಿ ಶ್ರೀನಿವಾಸ್, ಅರಳೀಕೆರೆ ರಾಜೇಂದ್ರ ಪ್ರಸಾದ್, ಚಿಲ್ಲಹಳ್ಳಿ ದಾದಾಪೀರ್ ಅವರಿಗೆ ಹೆಲ್ಮೆಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಿಎಸ್ಐಗಳಾದ ದೇವರಾಜ್, ದೀಪಾ, ಹುಸೇನ್ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಠಾಣಾ ವ್ಯಾಪ್ತಿಯ ಸಾರ್ವಜನಿಕರು ಇದ್ದರು.
