ಕಲಬುರಗಿ: ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದು ಮೂರು ವರ್ಷಗಳಾಗ್ತಾ ಇದೆ. ಆದರೆ ಸಿಎಂ ಬದಲಾವಣೆಯ ಗೊಂದಲ ಈಗಲೇ ಬಗೆಹರಿಯುವಂತೆ ಕಾಣಿಸ್ತಾ ಇಲ್ಲ. ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ಕಾಯುವಿಕೆಯಲ್ಲಿಯೇ ಇದ್ದಾರೆ. ಇದೀಗ ಸಿಎಂ ಬದಲಾವಣೆ ವಿಚಾರಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಹೀಗಾಗಿ ಬದಲಾವಣೆಯ ವಿಚಾರವೇ ಬರುವುದಿಲ್ಲ. ಒಂದು ವೇಳೆ ಅಂತಹ ಸಂದರ್ಭ ಬಂದರೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಬಳಿ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ. ಸಿಎಂ ಬದಲಾವಣೆಗೆ ಇನ್ನು ಬಹಳ ಸಮಯವಿದೆ. ಆ ಕಾಲ ಬಂದಾಗ ನೋಡೋಣಾ. ಆದರೆ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇನ್ನು ರಾಷ್ಟ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಬರ್ತಾರೆ. ಈ ಬಾರಿ ಅವರಿಗೆ ಸಿಎಂ ಸ್ಥಾನ ಕೊಡ್ತಾರೆ ಎಂಬ ಮಾತಿಗೆ ಉತ್ತರಿಸಿದ ಖರ್ಗೆ, ಈ ಬಗ್ಗೆ ಗೊಂದಲಗಳು ಇರುವುದು ನಿಜ. ಆದರೆ ಅದನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ನಾನು ಸಿಎಂ ಆಗಬೇಕು ಎಂದು ಹಲವರು ಹೇಳುತ್ತಾರೆ. ನೀವೂ ಹೇಳುತ್ತೀರಿ. ಆದರೆ ನಮ್ಮ ಪಕ್ಷದಲ್ಲಿ ಸಿದ್ಧಾಂತ ಮತ್ತು ದಶಕಗಳು ದುಡಿಮೆ ಮುಖ್ಯ. ನಮ್ಮ ನಿರ್ಧಾರಗಳನ್ನು ಹೆಚ್ಚಾಗಿ ಸೋನಿಯಾ ಗಾಂಧಿಯವರೇ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ನಮ್ಮ ನಾಯಕರು ಸಿಎಂ ಆಗ್ತಾರೆ ಅಂತ ಕಾಯುತ್ತಿದ್ದ ಡಿಕೆ ಶಿವಕುಮಾರ್ ಅಭಿಮಾನಿಗಳಿಗೆ ಬೇಸರ ತರಿಸಿದೆ. ಮೇ 15ಕ್ಕೆ ಡಿಕೆ ಶಿವಕುಮಾರ್ ಅವರ ಹುಟ್ಟುಹಬ್ಬ ಇದೆ. ಆ ಸಮಯಕ್ಕೆ ಸಿಹಿ ಸುದ್ದಿ ಸಿಗಲಿದೆ ಎಂದು ಕಾಯ್ತಾ ಇದ್ದರು. ಈಗ ನೋಡಿದ್ರೆ ಹೈಕಮಾಂಡ್ ನಾಯಕರೇ ಈ ರೀತಿ ಹೇಳಿರೋದು ಸಿಎಂ ಬದಲಾವಣೆ ವಿಚಾರಕ್ಕೆ ಬ್ರೇಕ್ ಬಿದ್ದಂಗ್ ಆಯ್ತಾ ಎಂಬ ಪ್ರಶ್ನೆ ಕಾಡುತ್ತಿದೆ.



















