ಬೆಂಗಳೂರು: ಸದ್ಯಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತೆ ಇದೆ. ಮುಂದೊಂದು ದಿನ ಡಿಕೆ ಶಿವಕುಮಾರ್ ಸಿಎಂ ಕುರ್ಚಿಯನ್ನ ಹಿಡಿಯುತ್ತಾರೆ ಎಂಬ ಭರವಸೆಯಿಂದಾನೆ ಡಿಕೆಶಿ ಬಣ ಇದೆ. ಇದರ ನಡುವೆ ಇದೀಗ ರಾಜಣ್ಣ ಒಂದು ಹೇಳಿಕೆಯನ್ನ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಡಿಕೆಶಿ ಸಂಪುಟದಲ್ಲಿ ಸಚಿವ ಆಗುವುದಿಲ್ಲ ಎಂದು.
ಸಿದ್ದರಾಮಯ್ಯ ಹಾಗೂ ರಾಜಣ್ಣ ಬಹಳ ಆತ್ಮೀಯ ಸ್ನೇಹಿತರು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ರಾಜಣ್ಣ ಸಹಕಾರಿ ಸಚಿವರಾಗಿದ್ದರು. ಆದರೆ ಪಕ್ಷದ ಬಗ್ಗೆ ಮಾತನಾಡಿದ್ದಕ್ಕೆ ತನ್ನ ಸಚಿವ ಸ್ಥಾನವನ್ನೇ ಕಳೆದುಕೊಂಡಿದ್ದಾರೆ. ಈಗ ಸಂಪುಟ ಪುನರ್ ರಚನೆ ಆಗಲಿದೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದು, ರಾಜಣ್ಣ ಅವರು ಡಿಕೆಶಿ ಬಣಕ್ಕೆ ಬರಲ್ಲ ಎಂದಿದ್ದಾರೆ. ಹಾಗಾದ್ರೆ ರಾಜಣ್ಣ ಹೇಳಿದ್ದೇನು ಇಲ್ಲಿದೆ ನೋಡಿ.
ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಡಿಕೆ ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಕೊಟ್ಟರೆ ನನಗೆ ಬೇಡವೇ ಬೇಡ. ಸಚಿವ ಸ್ಥಾನ ಬೇಡ ಮತ್ತೊಬ್ಬರಿಗೆ ಅವಕಾಶ ಕೊಡಲಿ. ಹಾಗಂತ ಡಿಕೆ ಸಿಎಂ ಆಗ್ತಾರೆ ಅಂತ ನಾನು ಹೇಳುತ್ತಿಲ್ಲ. ಅದೇನು ಸಿಎಂ ಆಗಿಯೇ ಬಿಡುತ್ತಾರೆ ಎಂದುಕೊಂಡಿದ್ದೀರಾ..? ನನಗೆ ಅಧಿಕಾರದ ದಾಹವೂ ಇಲ್ಲ. ನಾನು ಮೊದಲೇ ಹೇಳಿದ್ದೀನಿ ಡಿಕೆ ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ಸಚಿವನಾಗುವುದಿಲ್ಲ ಎಂದು ತಿಳಿಸಿದ್ದೀನಿ. ಈಗಲೂ ಅದಕ್ಕೆ ಬದ್ಧನಾಗಿದ್ದೇನೆ ಎಂದು ಕೆ ಎನ್ ರಾಜಣ್ಣ ಹೇಳಿದ್ದಾರೆ.
ಕೆ.ಎನ್.ರಾಜಣ್ಣ ಕಳೆದ ಕೆಲವು ತಿಂಗಳುಗಳಿಂದ ಕ್ರಾಂತಿಯ ವಿಚಾರವಾಗಿನೇ ಸಾಕಷ್ಟು ಸದ್ದು ಮಾಡಿದವರು. ಸೆಪ್ಟೆಂಬರ್ ಕ್ರಾಂತಿ, ನವೆಂಬರ್ ಕ್ರಾಂತಿ ಅಂತ. ಈಗ ಪರೋಕ್ಷವಾಗಿ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತ ಹೇಳಿದ್ರಾ ಎಂಬ ಚರ್ಚೆ ಹುಟ್ಟಿಕೊಂಡಿದೆ.

