ಬೆಂಗಳೂರು; ರಾಜ್ಯದಲ್ಲಿ ಅವಧಿಗೂ ಮುನ್ನವೇ ಜೋರು ಮಳೆಯಾಗುತ್ತಿದೆ. ಕರಾವಳಿ, ಮಲೆನಾಡು ಭಾಗ ಸೇರಿದಂತೆ ಹಲವೆಡೆ ಮಳೆಯ ಅಬ್ಬರ ಹೆಚ್ಚಾಗಿದೆ. ಚಳಿ, ಗಾಳಿಯ ಜೊತೆಗೆ ಮಳೆಯೂ ಹೆಚ್ಚಾಗಿದೆ. ಇದರಿಂದ ಜನ ಹೊರಗೆ ಹೋಗುವುದಕ್ಕೂ ಹಿಂಸೆಯಾಗುತ್ತಿದೆ. ಕೆಲಸಕ್ಕೆಂದು ಹೋಗುವವರು, ಶಾಲೆಗೆಂದು ಹೋಗುವವರಿಗೆ ತಾಪತ್ರಯ ಉಂಟಾಗಿದೆ. ಹವಮಾನ ಇಲಾಖೆಯ ವರದಿಯ ಪ್ರಕಾರ ಮಳೆ ಹೀಗೆ ಮುಂದುವರೆಯಲಿದೆ ಎನ್ನಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಇಂದು ಮತ್ತು ನಾಳೆ ಶಾಲೆ ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪ್ರವಾಹದ ಆತಂಕ ಮುಂದುವರೆದಿದ್ದು, ಜಿಲ್ಲಾಧಿಕಾರಿಗಳು ಈ ನಿರ್ಧಾರವನ್ನ ಕೈಗೊಂಡಿದ್ದಾರೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಮಳೆಯ ಅಬ್ಬರ ಜೋರಾಗಿದ್ದು, ಪ್ರವಾಸಕ್ಕೆಂದು ಹೋಗುವವರಿಗೆ ಎಚ್ಚರಿಕೆಯ ಸಂದೇಶವನ್ನ ರವಾನಿಸಲಾಗಿದೆ. ಒಂದು ಕಡೆ ಮಳೆಯ ತುಂತುರು ಹನಿ, ಮತ್ತೊಂದು ಕಡೆ ಚುಮುಚುಮು ಚಳಿ. ಈ ಕ್ಲೈಮೇಟ್ ಗೆ ಪ್ರವಾಸ ಹೋಗುವವರ ಸಂಖ್ಯೆ ಜಾಸ್ತಿ. ಆದರೆ ಎಚ್ವರಿಕೆ ಬಹಳ ಮುಖ್ಯವಾಗಿರುತ್ತದೆ.
ಅತ್ತ ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ದಾಳಿಂಬೆ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ದಾಳಿಂಬೆ ಗಿಡಗಳು ಹೂಗಳು ಉದುರುತ್ತಿವೆ. ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಪರದಾಡುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆಯಾಗಿದೆ. ಕಾರವಾರದಲ್ಲೂ ರೆಡ್ ಅಲರ್ಟ್ ಘೋಷಣೆಯಾಗಿದೆ. ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಮಳೆ ಹೀಗೆ ಮುಂದುವರೆಯಲಿದ್ದು, ಜನ ಜಾಗೃತಿಯಿಂದ ಇರಬೇಕಾಗಿದೆ. ಹೊರಗೆ ಹೋಗುವವರು ಎಚ್ಚರಿಕೆಯಿಂದ ಇರಬೇಕಾಗಿರುತ್ತದೆ. ಸಿಡಿಲಿನಿಂದ ಕೂಡ ಜಾಗೃತಿಯಿಂದ ಇರಬೇಕಾಗಿದೆ.










