Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಿರಿಯೂರು: ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧನ; 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ!

---Advertisement---

 

ಸುದ್ದಿಒನ್, ಹಿರಿಯೂರು, ಜುಲೈ. 04 : ನಗರದ ವೇದಾವತಿ ನಗರದ ಮನೆಯೊಂದರ ಬೀಗ ಮುರಿದು ಕಳವು ಮಾಡಿದ್ದ ಇಬ್ಬರು ಅಂತರಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಹಿರಿಯೂರು ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ 138 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಣೆಬೆನ್ನೂರು ನಗರ ನಿವಾಸಿ ಪರಶುರಾಮ ಚಂದಳ್ಳಿ ಅಲಿಯಾಸ್ ಪರಸ (34) ಹಾಗೂ ಶಿವಮೊಗ್ಗದ ನಿವಾಸಿ ಸಚಿನ್ (27) ಬಂಧಿತ ಆರೋಪಿಗಳಾಗಿದ್ದಾರೆ.
ದಿನಾಂಕ 24.06.2026ರ ರಾತ್ರಿ ಹಿರಿಯೂರು ಟೌನ್ ವೇದಾವತಿ ನಗರದ ನಿವಾಸಿ ರತ್ನಮ್ಮ ಎಂಬುವವರ ಮನೆಯ ಬೀಗ ಮುರಿದಿದ್ದ ಕಳ್ಳರು, ಒಳನುಗ್ಗಿ 10 ಗ್ರಾಂ ಚಿನ್ನಾಭರಣ ಹಾಗೂ 48 ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ರತ್ನಮ್ಮ ಅವರು ನೀಡಿದ ದೂರಿನನ್ವಯ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಆರ್. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಹಿರಿಯೂರು ಉಪ ವಿಭಾಗದ ಡಿವೈಎಸ್ಪಿ ಟಿ.ಎಂ. ಶಿವಕುಮಾರ್ ನೇತೃತ್ವದಲ್ಲಿ, ಪಿಐ ಮಹಮ್ಮದ್ ಸಿರಾಜ್, ಬೆರಳು ಮುದ್ರೆ ಘಟಕದ ಪಿಐ ವಿಶ್ವನಾಥ್, ಪಿಎಸ್ಐ ಭೀಮನಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಚೇತನ್, ಮಂಜುನಾಥ್ (ಬೆರಳು ಮುದ್ರೆ ಘಟಕ), ದೇವೇಂದ್ರಪ್ಪ (HC-1341), ಸುರೇಶ್ ನಾಯ್ಡ್ (HC-1336), ಹೆಚ್. ಸಿದ್ದಲಿಂಗೇಶ್ವರ ಯಳವಟ್ಟಿ (PC-2106), ಸುದರ್ಶನ್ ಗೌಡ (PC-2186), ಶಿವಪ್ಪ (PC-2187), ನಾಗನಾಯ್ಡ್ (APC) ಮತ್ತು ಶರಣಬಸಪ್ಪ (PC-2709) ಅವರನ್ನೊಳಗೊಂಡ ತಂಡವು ಜುಲೈ 2 ರಂದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಗಳಿಂದ ಕಳವು ಮಾಡಲಾಗಿದ್ದ ಒಟ್ಟು 138 ಗ್ರಾಂ ತೂಕದ, ಅಂದಾಜು 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಕ್ಷತೆಯಿಂದ ಕಾರ್ಯನಿರ್ವಹಿಸಿ ಕಳ್ಳರನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಕಾರ್ಯವನ್ನು ಚಿತ್ರದುರ್ಗ ಎಸ್ ಪಿ ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now