ಬೆಂಗಳೂರು: ಈಗಂತು ಎಲ್ಲೆಲ್ಲೂ ಹಕ್ಕಿಜ್ವರದ್ದೇ ಟೆನ್ಶನ್ ಶುರುವಾಗಿದೆ. ಇದರಿಂದ ಅದೆಷ್ಟೋ ಚಿಕನ್ ಪ್ರಿಯರು ಆತಂಕ ಪಟ್ಟುಕೊಳ್ಳುತ್ತಿದ್ದಾರೆ. ಚಿಕನ್ ಅಂದ್ರೆ ಮೂರೊತ್ತು ಕೊಟ್ಟರು ತಿನ್ನುತ್ತೀವಿ ಎನ್ನುತ್ತಿದ್ದವರು, ಇದೀಗ ಚಿಕನ್ ಬೇಡಪ್ಪ ಎನ್ನುತ್ತಿದ್ದಾರೆ. ಈಗಾಗಲೇ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಹಕ್ಕಿಜ್ವರ ಆತಂಕ ಉಂಟು ಮಾಡಿದ್ದು, ಕರ್ನಾಟಕಕ್ಕೂ ಕಾಲಿಟ್ಟಿದೆ. ಆಂಧ್ರಪ್ರದೇಶದಿಂದ ಕೋಳಿಗಳು ಕರ್ನಾಟಕಕ್ಕೂ ಸರಬರಾಜು ಆಗುತ್ತಿದ್ದ ಕಾರಣ ಹಕ್ಕಿ ಜ್ವರ ಹೆಚ್ಚಾಗಿತ್ತು. ಸದ್ಯ ಕೋಳಿ ಸಾಗಾಟವನ್ನು ನಿಲ್ಲಿಸಲಾಗಿದೆ. ಈ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒಂದಷ್ಟು ಸಲಹೆಗಳನ್ನ ನೀಡಿದ್ದಾರೆ.

ಹಕ್ಕಿಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿವೆ. ಹಕ್ಕಿ ಜ್ವರ ಸಾಂಕ್ರಾಮಿಕ ರೋಗವಾದರೂ ಅದು ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಕಡಿಮೆ. ಹಾಗಾಗಿ ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ. ಆದರೂ ಮೊಟ್ಟೆ ಮತ್ತು ಕೋಳಿಮಾಂಸ ಸೇವಿಸುವಾಗ ಕೊಂಚ ಎಚ್ಚರಿಕೆಯನ್ನು ಪಾಲಿಸಬೇಕು. ಮೊಟ್ಟೆ ಮತ್ತು ಮಾಂಸವನ್ನ 70 ಡಿಗ್ರಿ ಸೆಲ್ಸಿಯಸ್ ಅರ್ಧ ಗಂಟೆಗೂ ಹೆಚ್ಚಿನ ಸಮಯ ಬೇಯಿಸಬೇಕು. ಸೋಂಕು ಪೀಡಿತ ಕೋಳಿ ಫಾರಂ, ಮೃತ ಹಕ್ಕಿ ಅಥವಾ ಕೋಳಿಗಳ ಸಮೀಪಕ್ಕೆ ಹೋಗದೆ ಎಚ್ಚರಿಕೆ ವಹಿಸಿ ಎಂದು ಸಲಹೆಯನ್ನ ನೀಡಿದ್ದಾರೆ.

ಹಕ್ಕಿ ಜ್ವರ ಪಕ್ಷಿಗಳಿಗೆ ಮಾತ್ರವಲ್ಲದೆ ಮನುಷ್ಯರಿಗೂ ಹರಡುತ್ತದೆ. ತೀವ್ರ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಮೂಗಿನಲ್ಲಿ ಸೋರುವಿಕೆ, ತಲೆನೋವು, ಸ್ನಾಯುಗಳ ನೋವು, ಗಂಟಲಿನಲ್ಲಿ ಊತ ಕಾಣೀಸಿಕೊಳ್ಳುತ್ತದೆ. ವಾಕರಿಕೆ ಬರುವುದು, ವಾಂತಿಯಾಗುವುದು ಕೂಡ ಲಕ್ಷಣಗಳೇ ಆಗಿವೆ. ಲಕ್ಷಣಗಳು ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆದರೆ ಅಪಾಯದಿಂದ ಪಾರಾಗಬಹುದು.


