ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ಖಾಸಗಿ ಇಂಧನ ಮಾರಾಟ ಸಂಸ್ಥೆಯಾದ ‘ನಯಾರಾ ಎನರ್ಜಿ’ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ಬುಧವಾರದಿಂದ ಜಾರಿಗೆ ಬರುವಂತೆ ಕಂಪನಿಯು ಪ್ರತಿ ಲೀಟರ್ ಪೆಟ್ರೋಲ್ ದರವನ್ನು 5 ರೂಪಾಯಿ ಹಾಗೂ ಡೀಸೆಲ್ ದರವನ್ನು 3 ರೂಪಾಯಿ ಕಡಿತಗೊಳಿಸಿದೆ.
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿದ್ದ ಯುದ್ಧದ ವಾತಾವರಣ ತಿಳಿಗೊಂಡಿರುವುದು ಹಾಗೂ ಪ್ರಮುಖ ಸಮುದ್ರ ಮಾರ್ಗಗಳು ಪುನಃ ಮುಕ್ತವಾಗಿರುವುದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ (LNG) ಪೂರೈಕೆ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿರುವುದರಿಂದ ಜಾಗತಿಕವಾಗಿ ತೈಲ ಬೆಲೆಗಳು ಇಳಿಕೆಯ ಹಾದಿ ಹಿಡಿದಿವೆ. ಕಳೆದ ಎರಡು ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಇಂಧನ ಚಿಲ್ಲರೆ ಮಾರಾಟ ಕಂಪನಿಯೊಂದು ಬೆಲೆ ಕಡಿತ ಮಾಡಿರುವುದು ಇದೇ ಮೊದಲ ಬಾರಿಯಾಗಿದೆ.
ದೇಶಾದ್ಯಂತ ಇರುವ ನಯಾರಾ ಸಂಸ್ಥೆಯ 7,000ಕ್ಕೂ ಅಧಿಕ ಇಂಧನ ಕೇಂದ್ರಗಳಲ್ಲಿ ಈ ಪರಿಷ್ಕೃತ ದರಗಳು ಈಗಾಗಲೇ ಜಾರಿಗೆ ಬಂದಿವೆ. ಆದರೆ, ವಿವಿಧ ರಾಜ್ಯಗಳಲ್ಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಸ್ಥಳೀಯ ಸುಂಕಗಳಿಗೆ ಅನುಗುಣವಾಗಿ ಅಂತಿಮ ಗ್ರಾಹಕ ಬೆಲೆಯಲ್ಲಿ ವ್ಯತ್ಯಾಸವಿರಲಿದೆ.
ಸರ್ಕಾರಿ ಕಂಪನಿಗಳಿಂದ ಇಲ್ಲ ಬದಲಾವಣೆ:
ಖಾಸಗಿ ವಲಯದಲ್ಲಿ ಬೆಲೆ ಇಳಿಕೆಯಾಗಿದ್ದರೂ, ದೇಶದ ಶೇಕಡಾ 90 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರುವ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಸಂಸ್ಥೆಗಳು ಸದ್ಯಕ್ಕೆ ಇಂಧನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಳೆಯ ದರದಂತೆಯೇ ಪ್ರತಿ ಲೀಟರ್ ಪೆಟ್ರೋಲ್ ₹102.12 ಹಾಗೂ ಡೀಸೆಲ್ ₹95.20 ಗೆ ಮಾರಾಟವಾಗುತ್ತಿದೆ.
ಈ ಹಿಂದೆ ಇರಾನ್ ಸಂಘರ್ಷದ ಸಂದರ್ಭದಲ್ಲಿ ಜಾಗತಿಕ ತೈಲ ಬೆಲೆ ಏರಿಕೆಯಾದಾಗ, ನಯಾರಾ ಎನರ್ಜಿ ಮಾರ್ಚ್ 26 ರಂದು ಪೆಟ್ರೋಲ್ ಮೇಲೆ ₹5 ಮತ್ತು ಡೀಸೆಲ್ ಮೇಲೆ ₹3 ಹೆಚ್ಚಿಸಿತ್ತು. ಅದಾದ ಬಳಿಕ ಮೇ ತಿಂಗಳ ದ್ವಿತೀಯಾರ್ಧದಲ್ಲಿ ಸರ್ಕಾರಿ ತೈಲ ಕಂಪನಿಗಳು ಸಹ ಸರಣಿ ಪರಿಷ್ಕರಣೆ ನಡೆಸಿ ಎರಡೂ ಇಂಧನಗಳ ಬೆಲೆಯನ್ನು ತಲಾ 7.50 ರೂಪಾಯಿಯಷ್ಟು ದುಬಾರಿ ಮಾಡಿದ್ದವು. ಇದೀಗ ಜಾಗತಿಕ ಮಾರುಕಟ್ಟೆ ತಣ್ಣಗಾಗುತ್ತಿದ್ದಂತೆ ಖಾಸಗಿ ಕಂಪನಿ ಬೆಲೆ ಇಳಿಕೆಯ ಹೆಜ್ಜೆ ಇಟ್ಟಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.





















