ಬೆಂಗಳೂರು.ಸೆಪ್ಟೆಂಬರ್.13: ಹಿಂದೂ ಧರ್ಮೀಯರ ಪ್ರಮುಖ ಹಾಗೂ ಸಂಭ್ರಮದ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಗೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ವರ್ಷದಂತೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ವಿಘ್ನನಿವಾರಕ ಗಣೇಶನನ್ನು ಮನೆ-ಮನಗಳಲ್ಲಿ, ಸಾರ್ವಜನಿಕ ಮಂಡಳಿಗಳಲ್ಲಿ ಪ್ರತಿಷ್ಠಾಪಿಸಿ ಅತ್ಯಂತ ಭಕ್ತಿ-ಶ್ರದ್ಧೆಯಿಂದ ಪೂಜಿಸಲಾಗುತ್ತದೆ.
ಶುಭ ಮುಹೂರ್ತ ಮತ್ತು ತಿಥಿ ವಿವರ
ಪಂಚಾಂಗದ ಪ್ರಕಾರ, 2026ರ ಗಣೇಶ ಚತುರ್ಥಿಯ ಪ್ರಮುಖ ಸಮಯಗಳು ಈ ಕೆಳಗಿನಂತಿವೆ
ಹಬ್ಬದ ದಿನಾಂಕ: 2026ರ ಸೆಪ್ಟೆಂಬರ್ 14, ಸೋಮವಾರ
ಚತುರ್ಥಿ ತಿಥಿ ಆರಂಭ: ಸೆಪ್ಟೆಂಬರ್ 14ರ ಬೆಳಗ್ಗೆ 7:06 ರಿಂದ
ಚತುರ್ಥಿ ತಿಥಿ ಮುಕ್ತಾಯ: ಸೆಪ್ಟೆಂಬರ್ 15, ಮಂಗಳವಾರ ಬೆಳಗ್ಗೆ 7:44 ರವರೆಗೆ
ವಿಗ್ರಹ ಪ್ರತಿಷ್ಠಾಪನೆಗೆ ಶುಭ ಮುಹೂರ್ತ: ಸೆಪ್ಟೆಂಬರ್ 14ರ ಬೆಳಗ್ಗೆ 11:20 ರಿಂದ ಮಧ್ಯಾಹ್ನ 1:48 ರವರೆಗೆ (ಒಟ್ಟು 2 ಗಂಟೆ 28 ನಿಮಿಷಗಳು)
ಅನಂತ ಚತುರ್ದಶಿ (ವಿಸರ್ಜನೆ): 2026ರ ಸೆಪ್ಟೆಂಬರ್ 25, ಶುಕ್ರವಾರ
ಪೂಜಾ ವಿಧಾನದ ಸಂಕ್ಷಿಪ್ತ ಹಂತಗಳು
ಶುದ್ಧೀಕರಣ: ದೇವರ ಕೋಣೆ ಅಥವಾ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ, ಮರದ ಮಣೆ/ಪೀಠದ ಮೇಲೆ ಕೆಂಪು ಅಥವಾ ಹಳದಿ ಬಟ್ಟೆ ಹಾಸಿ ಅಕ್ಷತೆ ಇಡಬೇಕು.
ಪ್ರಾಣ ಪ್ರತಿಷ್ಠಾಪನೆ: ಪೀಠದ ಮೇಲೆ ಗಣಪತಿಯ ಮೂರ್ತಿಯನ್ನು ಇರಿಸಿ, ದೀಪ-ಧೂಪ ಬೆಳಗಿಸಿ “ಓಂ ಗಂ ಗಣಪತಯೇ ನಮಃ” ಮಂತ್ರದೊಂದಿಗೆ ಪ್ರಾಣಪ್ರತಿಷ್ಠಾಪನೆ ಮಾಡಬೇಕು.
ಅಲಂಕಾರ ಮತ್ತು ಉಪಚಾರ: ಗಣೇಶನಿಗೆ ಅರಿಶಿನ, ಕುಂಕುಮ, ಗಂಧ, ಜನಿವಾರ ಮತ್ತು ಕೆಂಪು ಹೂವಿನ ಹಾರವನ್ನು ಅರ್ಪಿಸಬೇಕು.
ನೈವೇದ್ಯ: ಗಣೇಶನಿಗೆ ಅತ್ಯಂತ ಪ್ರಿಯವಾದ 21 ಗರಿಕೆ (ದುರ್ವಾ) ಹುಲ್ಲಿನ ಗಂಟುಗಳು, ಮೋದಕ ಹಾಗೂ ಲಡ್ಡುಗಳನ್ನು ನೈವೇದ್ಯವಾಗಿ ಅರ್ಪಿಸಬೇಕು.
ಮಂಗಳಾರತಿ: ಕುಟುಂಬ ಸಮೇತರಾಗಿ ಭಕ್ತಿಯಿಂದ ಮಂಗಳಾರತಿ ಬೆಳಗಿ, ತಪ್ಪು-ಒಪ್ಪುಗಳಿಗೆ ಕ್ಷಮೆ ಕೋರಿ ಸುಖ-ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಬೇಕು.














