ಬೆಂಗಳೂರು: ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಅನ್ನೋದು ವಿದ್ಯಾರ್ಥಿಗಳ ಬದುಕಲ್ಲಿ ಬಹಳ ಪ್ರಮುಖವಾದ ಘಟ್ಟವಾಗಿರುತ್ತದೆ. ಅಲ್ಲಿ ಶ್ರಮವಹಿಸಿ ಅಂಕಗಳನ್ನ ತೆಗೆದರೆ ಮುಂದಿನ ಭವಿಷ್ಯ ಅಚ್ಚುಕಟ್ಟಾಗಿರುತ್ತದೆ. ಇಷ್ಟು ವರ್ಷ ಪಾಸಾಗುವುದಕ್ಕೆ 35% ಇದ್ದರೆ ಜಸ್ಟ್ ಪಾಸಾಗ್ತಾ ಇದ್ದರು. ಆದ್ರೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನ ನೀಡಿದೆ. ಅದು 2% ಇಳಿಕೆ ಮಾಡಿದೆ.
ಇನ್ಮುಂದೆ ಎಸ್ಎಸ್ಎಲ್ಸಿಯಲ್ಲಿ 33% ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ವರ್ಷದಿಂದಲೇ ಖಾಸಗಿ ಶಾಲೆಗಳಿಗೂ ಇದು ಅನ್ವಯ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಪ್ರಸಕ್ತ ವರ್ಷದಿಂದ 33% ಅಂಕ ಪಡೆದರೆ ಎಸ್ಎಸ್ಎಲ್ಸಿ ಪಾಸ್ ಎಂದು ಘೋಷಿಸಲಾಗುವುದು. ಅಲ್ಲಿಗೆ 625ಕ್ಕೆ 206 ಅಂಕ ಪಡೆದರೆ ವಿದ್ಯಾರ್ಥಿಗಳು ಉತ್ತೀರ್ಣ ಆಗಲಿದ್ದಾರೆ. ಆಂತರಿಕ ಅಂಕ, ಬಾಹ್ಯ ಅಂಕ ಎರಡು ಸೇರಿ 33% ಪಡೆಯಬೇಕಾಗುತ್ತದೆ ಎಂದು ಸಚಿವರು ಮಾಹಿತಿ ತಿಳಿಸಿದ್ದಾರೆ. 2025-26ನೇ ಸಾಲಿನಿಂದ ಈ ನಿಯಮ ಜಾರಿಗೆ ಬರಲಿದೆ. ಈ ವರ್ಷ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು, ರಿಪೀಟರ್ಸ್, ಖಾಸಗಿ ಅಭ್ಯರ್ಥಿಗಳಿಗೂ ಈ ನಿಯಮ ಜಾರಿಯಾಗಲಿದೆ.
ಜೊತೆಗೆ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ 3 ಪರೀಕ್ಷೆ ವ್ಯವಸ್ಥೆ ಜಾರಿ ಮಾಡಿದ್ದೇವೆ. ಪಾರದರ್ಶಕವಾಗಿ ಇರಲಿ ಅಂತ ವೆಬ್ ಕಾಸ್ಟ್ ಮಾಡಿದ್ವಿ. ಪರೀಕ್ಷೆಗಳು ಉತ್ತಮವಾಗಿ ನಡೆದವು. ವೆಬ್ ಕಾಸ್ಟಿಂಗ್ ನಿಂದ ಕಡಿಮೆ ಅಂಕ ಬಂದಾಗ ಶಿಕ್ಷಕರು, ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಿದ್ರು. ವಿಶೇಷವಾಗಿ ತರಬೇತಿಗಳನ್ನು ತೆಗೆದುಕೊಂಡು ಉತ್ತಮವಾಗಿ ಕೆಲಸ ಮಾಡಿದ್ದಾರೆಂದು ಸಚಿವ ಮಧು ಬಂಗಾರಪ್ಪ ಶ್ಲಾಘಿಸಿದರು.
