ಚಿತ್ರದುರ್ಗದ ಜೋಗಿಮಟ್ಟಿ ಹಾಗೂ ಮಾರಿಕಣಿವೆ ಮೀಸಲು ಅರಣ್ಯ ಪ್ರದೇಶದಲ್ಲಿ ಪವನ ವಿದ್ಯುತ್ ಘಟಕ ಸ್ಥಾಪನೆಗೆ ನಿಯಮ ಉಲ್ಲಂಘಿಸಿ ಹೆಚ್ಚುವರಿ ಭೂಮಿ ಬಳಸಿರುವ ಪ್ರಕರಣದಲ್ಲಿ ಖಾಸಗಿ ವಿದ್ಯುತ್ ಕಂಪನಿಗಳಿಂದ ಕರ್ನಾಟಕ ಅರಣ್ಯ ಇಲಾಖೆ ದಂಡ ವಸೂಲಿ ಪ್ರಕ್ರಿಯೆ ಆರಂಭಿಸಿದೆ.
ದಂಡ ವಸೂಲಿ ಮಾಡುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದ ಬೆನ್ನಲ್ಲೇ ವಸೂಲಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಬೆಟ್ಟ–ಗುಡ್ಡಗಳ ಸಾಲು ಇರುವ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪವನ ವಿದ್ಯುತ್ ಉತ್ಪಾದನೆಗೆ ಅನುಮತಿ ನೀಡಲಾಗಿದ್ದು, ದಶಕಗಳಿಂದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಎರಡು ಕಡೆ ಮೀಸಲು ಅರಣ್ಯ ಪ್ರದೇಶದಲ್ಲಿ ಅನುಮತಿ ನೀಡಿದ್ದಕ್ಕಿಂತ ಹೆಚ್ಚುವರಿ ಅರಣ್ಯ ಪ್ರದೇಶವನ್ನು ಪವನ ವಿದ್ಯುತ್ ಘಟಕಗಳಿಗೆ ಬಳಕೆ ಮಾಡಿಕೊಳ್ಳಲಾಗಿತ್ತು. ಪವನ ವಿದ್ಯುತ್ ಘಟಕಗಳ ಸ್ಥಳ ಪರಿಶೀಲನೆ ನಡೆಸಿದಾಗ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚುವರಿ ಅರಣ್ಯ ಬಳಕೆಯಾಗಿರು ವುದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ವೈಪರಿತ್ಯ ಸಚಿವಾಲಯದ ತಜ್ಞರ ತಂಡದ ಗಮನಕ್ಕೆ ಬಂದಿತ್ತು. ಜೋಗಿಮಟ್ಟಿ ಹಾಗೂ ಮಾರಿಕಣಿವೆ ಭಾಗದಲ್ಲಿ 548.07 ಎಕರೆ ಅರಣ್ಯ ಪ್ರದೇಶವನ್ನು ಪವನ ವಿದ್ಯುತ್ ಘಟಕಕ್ಕೆ ಬಳಸಲು ಎನೆರ್ ಕಾನ್ ಸಂಸ್ಥೆಗೆ ಅನುಮತಿ ನೀಡಿತ್ತು.
ಅರಣ್ಯ ಭೂಮಿ ಬಳಕೆ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂದು ವಿಸ್ತೃತವಾಗಿ ಸಮಿತಿ ಚರ್ಚಿಸಿತ್ತು. ಈ ರೀತಿ ನಿಗದಿತ ಪ್ರದೇಶಕ್ಕಿಂತ ಹೆಚ್ಚಿನ ಅರಣ್ಯ ಭೂಮಿ ಪಡೆಯುವುದು ಸ್ಪಷ್ಟ ನಿಯಮ ಉಲ್ಲಂಘನೆ. ಕಳೆದ ವರ್ಷವೇ ಅರಣ್ಯ ಪಡೆಗಳ ಮುಖ್ಯಸ್ಥರು ದಂಡ ವಸೂಲಿಗೆ ಚಿತ್ರದುರ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ನಿರ್ದೇಶನ ನೀಡಿದ್ದರು. ಹೆಚ್ಚುವರಿ ಭೂಮಿ ಬಳಸಿ ನಿಯಮ ಉಲ್ಲಂಘಿಸಿದ್ದ ಸಂಸ್ಥೆಗಳು ದಂಡವನ್ನು ನಾಲ್ಕೈದು ವರ್ಷವಾದರೂ ಪಾವತಿಸಿರಲಿಲ್ಲ. ಯೋಜನೆ ರದ್ದುಪಡಿಸುವ ನೋಟಿಸ್ ಅನ್ನು ಜಾರಿಗೊಳಿಸಿತ್ತು. ಸಂಸ್ಥೆಗಳು ದಂಡ ಪಾವತಿಸದೇ ಇದ್ದರೆ ಹೆಚ್ಚುವರಿ ಶೇ 100ರಷ್ಟು ದಂಡ ವಿಧಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮದ ಎಚ್ಚರಿಕೆ ನೀಡಿದ ನಂತರ ಈಗ ವಸೂಲಿ ಪ್ರಕ್ರಿಯೆ ಚುರುಕುಗೊಂಡಿದೆ.


