ಬೆಂಗಳೂರು.ಸೆಪ್ಟೆಂಬರ್.16: ಆಧುನಿಕ ಭಾರತ ಹಾಗೂ ಮೈಸೂರು ರಾಜ್ಯದ ನಿರ್ಮಾತೃ, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆಪ್ಟೆಂಬರ್ 15 ಅನ್ನು ಅಧಿಕೃತವಾಗಿ ‘ಇಂಜಿನಿಯರ್ಸ್ ದಿನ’ವಾಗಿ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ರಾಜ್ಯದ ಇಂಜಿನಿಯರ್ಗಳು ತಮ್ಮ ಹೆಸರಿನ ಪೂರ್ವದಲ್ಲಿ ‘Er’ (ಇಂಜಿನಿಯರ್-ಅಭಿಯಂತರರು) ಎಂಬ ಶೀರ್ಷಿಕೆಯನ್ನು ಬಳಸಿಕೊಳ್ಳಲು ಅಧಿಕೃತ ಅನುಮತಿ ನೀಡಲಾಗಿದೆ.
ಸರ್ ಎಂ. ವಿಶ್ವೇಶ್ವರಯ್ಯನವರು ರಾಜ್ಯ ಮತ್ತು ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ನೀಡಿದ ಅಪ್ರತಿಮ ಕೊಡುಗೆಗಳನ್ನು ಗೌರವಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೆ.ಆರ್.ಎಸ್ ಅಣೆಕಟ್ಟು ನಿರ್ಮಾಣ, ಪ್ರವಾಹ ನಿಯಂತ್ರಣಕ್ಕೆ ಸ್ವಯಂಚಾಲಿತ ಫ್ಲಡ್ ಗೇಟ್ಗಳ ಆವಿಷ್ಕಾರ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಸಾಬೂನು ಮತ್ತು ಶ್ರೀಗಂಧದ ಎಣ್ಣೆ ಕಾರ್ಖಾನೆಗಳು, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪನೆ ಸೇರಿದಂತೆ ಕೈಗಾರಿಕೀಕರಣ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯನವರು ನೀಡಿದ ಮಹತ್ವದ ಕೊಡುಗೆಗಳನ್ನು ಸರ್ಕಾರ ಆದೇಶದ ಪ್ರಸ್ತಾವನೆಯಲ್ಲಿ ಸ್ಮರಿಸಿದೆ.
ದೇಶದ ಆರ್ಥಿಕ ಪ್ರಗತಿ ಮತ್ತು ಆಧುನಿಕ ಜಗತ್ತಿನ ಸೃಷ್ಟಿಯಲ್ಲಿ ಅಭಿಯಂತರರ ಪಾತ್ರ ಮಹತ್ವದ್ದಾಗಿದ್ದು, ಅವರ ಜ್ಞಾನ ಮತ್ತು ಶ್ರಮವನ್ನು ಗುರುತಿಸಲು ಈ ನಿರ್ಧಾರ ಪ್ರಕಟಿಸಲಾಗಿದೆ. ಇಂಜಿನಿಯರ್ಗಳು ತಮ್ಮ ಹೆಸರಿನ ಮುಂದೆ ಬಳಸುವ ‘Er’ ಎಂಬ ಪದ ಕೇವಲ ಎರಡಕ್ಷರಗಳ ಸಂಕೇತವಾಗಿರದೆ, ಅವರ ಜೀವಿತಾವಧಿಯ ವೃತ್ತಿಪರ ಸೇವೆ ಮತ್ತು ಅರ್ಪಣಾ ಮನೋಭಾವದ ಪ್ರತೀಕವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ರಾಜ್ಯಪಾಲರ ಆದೇಶಾನುಸಾರ ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿದೆ.












