ಚಿತ್ರದುರ್ಗ. ಆಗಸ್ಟ್ 05: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಗಸ್ಟ್ 15 ರಿಂದ ಎಂಡೋಸ್ಕೋಫಿ ಮತ್ತು ಸ್ತನ ಕ್ಯಾನ್ಸರ್ ಚಿಕಿತ್ಸೆ ಘಟಕಗಳು ಆರಂಭವಾಗಲಿವೆ. ಈಗಾಗಲೇ ಎಂಡೋಸ್ಕೋಫಿ ಉಪಕರಣಗಳು ಬಂದಿದ್ದು, ಇವುಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪನೆಯಾಗಿದ್ದು, ತಜ್ಞ ವೈದ್ಯರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾಹಿತಿ ನೀಡಿದರು.
ಮಂಗಳವಾರ ಜಿಲ್ಲಾ ಆಸ್ಪತ್ರೆಯ ಆವರಣದ ಬಿ.ಸಿ. ರಾಯ್ ಸಭಾಂಗಣದಲ್ಲಿ 2024-25ನೇ ಸಾಲಿನ ಜಿಲ್ಲಾ ಆಸ್ಪತ್ರೆಯ ಕಾರ್ಯಸಾಧನೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಹುಬಳ್ಳಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ 15 ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿಯೇ ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರತರವಾದ ಉಸಿರಾಟ ತೊಂದರೆ ಇರುವ ರೋಗಿಗಳ ಚಿಕಿತ್ಸೆಗಾಗಿ 10 ಬೆಡ್ಗಳ ವೆಂಟಿಲೇಟರ್ ಸೇವೆಯನ್ನು ಆರಂಭಿಸಲಾಗಿದೆ. ಅಪಘಾತ ಮತ್ತು ತುರ್ತು ಸಂದರ್ಭದಲ್ಲಿ ಉನ್ನತ ಚಿಕಿತ್ಸೆ ನೀಡಲು ಅನುವಾಗುವಂತೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ತಲಾ 50 ಹಾಸಿಗೆ ಸಾಮಥ್ರ್ಯವುಳ್ಳ ಕ್ರಿಟಿಕಲ್ ಕೇರ್ ಯುನಿಟ್ ಮತ್ತು ಟ್ರಾಮಾ ಕೇರ್ ಸೆಂಟರ್ ಸ್ಥಾಪನೆ ಮಾಡುವುದಾಗಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿದೆ. ಇದರೊಂದಿಗೆ ಕೆ.ಎಮ್.ಇ.ಆರ್.ಸಿ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ) ಅನುದಾನದಲ್ಲಿ 180 ಹಾಸಿಗೆ ಸಾಮಥ್ರ್ಯವುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಡಾ. ರವೀಂದ್ರ ಮಾಹಿತಿ ನೀಡಿದರು.
2024 ಏಪ್ರಿಲ್ ನಿಂದ 2025 ಮಾರ್ಚ್ ವರೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 3,99,763 ಹೊರ ರೋಗಿಗಳು ಹಾಗೂ 58,352 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ ಎ.ಬಿ.ಆರ್.ಕೆ (ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ) ಅಡಿ 31,270 ಒಳರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಲಾಗಿದೆ. 1,911 ಜನರಲ್ ಸರ್ಜರಿ, 1,280 ಮೂಳೆ, 1,300 ಹೃದಯ ಸಂಬಂಧಿ, 1,045 ಕಣ್ಣಿನ ಪೆÇರೆ ಮತ್ತು ಇತರೆ ಕಣ್ಣಿನ ಶಸ್ತ್ರಚಿಕಿತ್ಸೆ, 465 ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಜಿಲ್ಲಾ ಆಸ್ಪತ್ರೆಯ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ 6,645 ಹೆರಿಗೆಗಳನ್ನು ಮಾಡಿಸಲಾಗಿದೆ. ಇದರಲ್ಲಿ 2,044 ಸಹಜ ಹೆರಿಗೆ 4,061 ಸಿಜೇರಿಯನ್ ಹೆರಿಗೆಗಳನ್ನು ಮಾಡಲಾಗಿದೆ. 412 ಹಾವು ಕಡಿತ, 2736 ರಸ್ತೆ ಅಪಘಾತ ಮತ್ತು ಗಾಯದ ಪ್ರಕರಣಗಳು, 53 ಸುಟ್ಟಗಾಯಗಳ ಪ್ರಕರಣಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಶಸ್ತ್ರಚಿಕಿತ್ಸಕರು ಹಾಗೂ ವೈದ್ಯರು ಬೇರೆಡೆಗೆ ರೋಗಿಗಳನ್ನು ಶಿಫಾರಸ್ಸು ಮಾಡುವುದನ್ನು ತಡೆಗಟ್ಟಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಅವಧಿ ಮುನ್ನ, ಕಡಿಮೆ ತೂಕ ಸೇರಿದಂತೆ ಹಲವು ತೊಂದರೆಗಳಿರುವ 2,391 ನವಜಾತ ಶಿಶುಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಪೌಷ್ಠಿಕ ಮಕ್ಕಳ ಆರೈಕೆಗೆ 10 ಬೆಡ್ಗಳ ಎನ್ಆರ್ಸಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಪ್ರಸಕ್ತ ವರ್ಷದಲ್ಲಿ 250 ಮಕ್ಕಳಿಗೆ ವಿಶೇಷ ಆರೈಕೆಯನ್ನು ನೀಡಲಾಗಿದೆ. ಕಿಡ್ನಿ ವೈಪಲ್ಯಗೊಂಡ 100 ರಿಂದ 120 ರೋಗಿಗಳಿಗೆ ಉಚಿತವಾಗಿ ಡಯಾಲಿಸ್ ಮಾಡಲಾಗುತ್ತಿದೆ. ಡಯಾಲಿಸಿಸ್ ಕೇಂದ್ರದ ಕಾರ್ಯಕ್ಷಮತೆಯನ್ನು ದ್ವಿಗುಣಗೊಳಿಸಲಾಗಿದೆ. ವರ್ಷದಲ್ಲಿ 9,810 ಸೈಕಲ್ನಷ್ಟು ಡಯಾಲಿಸಿಸ್ ಮಾಡಲಾಗಿದೆ. ಏಕ ಬಳಕೆಯ ಡಯಾಲಿಸರ್ಗಳನ್ನು ಬಳಸುತ್ತಿದ್ದು, ರೋಗಿಗಳ ಆರೋಗ್ಯದ ಕಾಳಜಿ ವಹಿಸಲಾಗುತ್ತಿದೆ. ರಕ್ತದಾನ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನಿಗಳ ನೆರವಿನಿಂದ ರಕ್ತ ನಿಧಿ ಕೇಂದ್ರದಲ್ಲಿ 8,024 ಯನಿಟ್ ರಕ್ತ ಸಂಗ್ರಹಸಿ ಅಗತ್ಯವಿರುವ ರೋಗಿಗಳಿಗೆ ಬಳಸಲಾಗಿದೆ ಎಂದು ಡಾ.ರವೀಂದ್ರ ಮಾಹಿತಿ ನೀಡಿದರು.
ಕೇಂದ್ರಿಕೃತ ಸಾರ್ವಜನಿಕ ಲ್ಯಾಬ್ ಆರಂಭ:
ಜಿಲ್ಲಾ ಆಸ್ಪತ್ರೆಯ ವಿವಿಧ ಸ್ಥಳಗಳಲ್ಲಿ ಲ್ಯಾಬ್, ಎಕ್ಸ್ರೇ, ಸ್ಕ್ಯಾನಿಂಗ್ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಇತಿಶ್ರೀ ಹಾಡಿ, ಶೀಘ್ರದಲ್ಲೇ ಜಿಲ್ಲಾ ಕೇಂದ್ರಿಕೃತ ಸಾರ್ವಜನಿಕ ಲ್ಯಾಬ್ ಸ್ಥಾಪನೆ ಮಾಡಲಾಗುವುದು. ಜಿಲ್ಲಾ ಆಸ್ಪತ್ರೆಯ ಎಕ್ಸ್ ರೇ ವಿಭಾಗದಿಂದ ಪ್ರತಿದಿನ ನೂರಾರು ರೋಗಿಗಳಿಗೆ ಉಚಿತವಾಗಿ ಎಕ್ಸ್ ರೇ ಸೌಲಭ್ಯ ಒದಗಿಸಲಾಗುತ್ತಿದೆ. ಪ್ರತಿ ತಿಂಗಳು 50,000 ಕ್ಕೂ ಹೆಚ್ಚು ರಕ್ತ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. 2024-25ನೇ ಸಾಲಿನಲ್ಲಿ 20,925 ಎಂಆರ್ಐ 21,600 ಅಲ್ಟ್ರಾ ಸೌಂಡ್, 6,224 ಸಿ.ಟಿ. ಸ್ಕ್ಯಾನ್ ಮಾಡಲಾಗಿದೆ.
ಜಿಲ್ಲಾ ಆಸ್ಪತ್ರೆ ಚಿತ್ರದುರ್ಗ ಮೆಡಿಕಲ್ ಕಾಲೇಜಿನೊಂದಿಗೆ ಸಂಯೋಜನೆ ಹೊಂದಿದ್ದು, ಪ್ರತಿ ವಿಭಾಗಕ್ಕೂ 3 ರಿಂದ 4 ತಜ್ಞ ವೈದ್ಯರನ್ನು ನೇಮಿಸಲಾಗಿದೆ. ಮೆಡಿಕಲ್ ಕಾಲೇಜಿನಿಂದ 3 ಫಿಜಿಶಿಯನ್, 3 ಮೆಡಿಸನ್ 4 ಸರ್ಜರಿ, 2 ಓಟಿ, 2 ಅರವಳಿಕೆ ತಜ್ಞರು ಸೇರಿದಂತೆ, ತಲಾ ಒಂದು ಇಎನ್ಟಿ, ದಂತ, ಚರ್ಮ, ಕಣ್ಣು, ಓಬಿಜಿ, ಮಕ್ಕಳು, ಫೋರೆನ್ಸಿಕ್ ತಜ್ಞರು ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್.ಹೆಚ್.ಎಮ್ ಅಡಿ 3 ತಜ್ಞ ವೈದ್ಯರು ಹಾಗೂ ಓರ್ವ ರೇಡಿಯೋಲಾಜಿಸ್ಟ್ ನೇಮಕ ಮಾಡಲಾಗಿದೆ. ತುರ್ತು ಚಿಕಿತ್ಸಾ ವಿಭಾಗಕ್ಕೆ 4 ವೈದ್ಯರನ್ನು ಗುತ್ತಿಗೆ ಆಧಾರ ಮೇಲೆ ನೇಮಿಸಲಾಗಿದೆ.
ಸಾರ್ವತ್ರಿಕ ವರ್ಗಾವಣೆಯಲ್ಲಿ ಜಿಲ್ಲಾ ಆಸ್ಪತ್ರೆಯಿಂದ 9 ವೈದ್ಯರು ವರ್ಗಾವಣೆಗೊಂಡಿದ್ದರೆ, 5 ವೈದ್ಯರು ಬೇರೆಯಡೆಯಿಂದ ವರ್ಗಾವಣೆಯಾಗಿ ಬಂದಿದ್ದಾರೆ. 25 ವರ್ಷಗಳಿಂದಲೂ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ 37 ಶುಶ್ರೂಷಕ ಸಿಬ್ಬಂದಿಯನ್ನು ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಡಾ.ರವೀಂದ್ರ ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಹಲವಾರು ಸುಧಾರಣೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಸೇವೆ ನೀಡಲಾಗುತ್ತಿದೆ. ರೋಗಿಗಳು ಆಸ್ಪತ್ರೆಗೆ ಆಗಮಿಸುವಾಗ ತಪ್ಪದೇ ಆಧಾರ್ ಹಾಗೂ ಪಡಿತರ ಚೀಟಿಯನ್ನು ತರಬೇಕು. ಗರ್ಭಿಣಿಯರ ಸ್ಕ್ಯಾನಿಂಗ್ ಗೆ ಬರುವಾಗ ವಯೋಧೃಡೀಕರಣಕ್ಕಾಗಿ ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆಸ್ಪತ್ರೆ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ಸಾರ್ವಜನಿಕರು ಹಣವನ್ನು ನೀಡಬಾರದು. ಯಾವುದೇ ತೊಂದರೆಯಾದಲ್ಲಿ ದೂರವಾಣಿ ಸಂಖ್ಯೆ 9449843163 ಕರೆ ಮಾಡುವಂತೆ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಮನವಿ ಮಾಡಿದರು.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.







