ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 10 : ಇತ್ತೀಚಿಗೆ ಚಿತ್ರದುರ್ಗ ಜಿಲ್ಲಾ ಖಾಸಗಿ ದಂತವೈದ್ಯರ ಸಂಘ(ರಿ.)ದಿಂದ ವೈದ್ಯ -ನ್ಯಾಯಿಕ ಅಂಶಗಳ ಬಗ್ಗೆ ವಿಶೇಷ ಕಾರ್ಯಾಗಾರವು ನಗರದ ಆರ್.ಟಿ.ಓ. ಕಚೇರಿ ಬಳಿಯಿರುವ ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ಜರುಗಿತು.
ಚಿತ್ರದುರ್ಗ ಜಿಲ್ಲಾ ಖಾಸಗಿ ದಂತ ವೈದ್ಯರ ಸಂಘದ (ರಿ) ವತಿಯಿಂದ ದಂತವೈದ್ಯರ ಮಾಸಿಕ ಸಭೆ ಹಾಗೂ ವೈದ್ಯ- ನ್ಯಾಯಿಕ ಅಂಶಗಳ ಒಂದು ದಿನದ ವಿಶೇಷ ಕಾರ್ಯಾಗಾರದಲ್ಲಿ ಈ ಕುರಿತು ಚಿತ್ರದುರ್ಗದ ಸರಸ್ವತಿ ಕಾನೂನು ಮಹಾವಿದ್ಯಾಲಯದ ಡಾ. ಎನ್.ಡಿ. ಗೌಡ ಹಾಗೂ ಖ್ಯಾತ ವಕೀಲರಾದ ಪ್ರಸನ್ನಕುಮಾರ್ ರೆಡ್ಡಿ ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಕಾರ್ಯಾಗಾರ ಜರುಗಿತು.
ಉಪನ್ಯಾಸದಲ್ಲಿ ವೈದ್ಯ ಕ್ಷೇತ್ರದಲ್ಲಿ ವೈದ್ಯರಿಗೆ ಇರಬೇಕಾದ
ಕಾನೂನಿನ ಜವಾಬ್ದಾರಿ, ಹೊಣೆಗಾರಿಕೆಗಳು ಹಾಗೂ ಸವಾಲುಗಳು’ ಹಾಗೂ ದಂತ ವೈದ್ಯರಿಗೆ ಸೇವಾ ಕ್ಷೇತ್ರದಲ್ಲಿ ಆಗಬಹುದಾದ ಹಾಗೂ ಸಂಭವನೀಯ ಕಾನೂನು ತೊಡಕುಗಳು ಹಾಗೂ ಅದರ ನಿವಾರಣೋಪಾಯಗಳ ಬಗ್ಗೆ ದಂತ ವೈದ್ಯರಿಗೆ ಮಾಹಿತಿ ನೀಡಿ ಮಾತನಾಡಿದ ಸರಸ್ವತಿ ಮಹಾವಿದ್ಯಾಲಯದ ಡಾ. ಎನ್. ಡಿ.ಗೌಡ ರವರು ಪ್ರತಿ ವೈದ್ಯರಿಗೂ ಸಾಮಾಜಿಕ ಹೊಣೆಗಾರಿಕೆ ಹಾಗೂ ಕಾನೂನಿನ ಅರಿವು ಅತ್ಯಗತ್ಯವಾಗಿದ್ದು ವೈದ್ಯಕೀಯ ಕ್ಷೇತ್ರವು ಕೂಡ ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವ ಕಾರಣ ವೈದ್ಯರು ಕಾನೂನು ವ್ಯಾಪ್ತಿಯಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರತಿ ರೋಗಿಯ ಮಾಹಿತಿ, ದಾಖಲೀಕರಣ ಅದರ ಸಂರಕ್ಷಣೆ ಹಾಗೂ kpme ಕಾಯ್ದೆಯಲ್ಲಿ ವೈದ್ಯರನ್ನು ನೋಂದಾಯಿಸುವ ಬಗ್ಗೆ, ಗ್ರಾಹಕ ಹಿತ ರಕ್ಷಣಾ ಕಾಯ್ದೆಯ ಬಗ್ಗೆ ಸಂವಾದ ಹಾಗೂ ವೈದ್ಯರಿಗೆ ವಿಮೆ ರಕ್ಷಣೆಯ ಅಗತ್ಯತೆ ಬಗ್ಗೆ ಮಾಹಿತಿಯನ್ನು ಖ್ಯಾತ ವಕೀಲರಾದ ಪ್ರಸನ್ನಕುಮಾರ್ ರೆಡ್ಡಿ ನೀಡಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ದಂತ ವೈದ್ಯ ಸಂಘ(ರಿ.)ದ ಜಿಲ್ಲಾ ಅಧ್ಯಕ್ಷರಾದ ಡಾ. ಮಹಾಂತೇಶ ಗಿಡ್ಡೋಬನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ 16 ದಂತ ವೈದ್ಯರು ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಡಾ.ಸುನಿಲ್ ವಡವಡಗಿ ಹಾಗೂ ಖಜಾಂಚಿ ಡಾ.ಗೋವರ್ಧನ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಜೆ. ಬಿ. ಫಾರ್ಮಸಿಟಿಕಲ್ ಕಂಪನಿ ವಹಿಸಿತ್ತು.










