ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಎಸ್ಸಿ/ಎಸ್ಟಿ ಸಮುದಾಯದ ಒಳ ಮೀಸಲಾತಿಯನ್ನು ಜಾರಿಗೆ ತರುವ ವಿಚಾರವಾಗಿ ಇತ್ತಿಚೆಗಷ್ಟೇ ಮಾತನಾಡಿದ್ದರು. 101 ಜಾತಿಗಳಿಗೆ ಒಳ ಮೀಸಲಾತಿ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದ್ದರು. ಈ ವಿಚಾರ ಬಂದ ಬಳಿಕ ಬಂಜಾರ ಸಮುದಾಯ ರೊಚ್ಚಿಗೆದ್ದಿದೆ. ಶಿಕಾರಿಪುರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸುವಷ್ಟು ದಂಗೆ ಎದ್ದಿದ್ದಾರೆ. ಅದಕ್ಕೆಲ್ಲಾ ಕಾರಣ ಏನು ಎಂಬುದು ಇಲ್ಲಿದೆ ನೋಡಿ.
ಸದ್ಯ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ.15ರಷ್ಟು ಮೀಸಲಾತಿ ಇದೆ. ಇದನ್ನು 15ರಿಂದ 17ಕ್ಕೆ ಏರಿಕೆ ಮಾಡಿ, ನಾಲ್ಕು ಗುಂಪುಗಳಿಗೆ ಜನಸಂಖ್ಯೆಯ ಆಧಾರದ ಮೇಲೆ ಹಂಚಿಕೆ ಮಾಡಲು ಸಂಪುಟ ತೀರ್ಮಾನ ಮಾಡಿದೆ. ಉಪಸಮಿತಿ ಇದನ್ನು ಶಿಫಾರಸ್ಸು ಮಾಡಿತ್ತು. ಪರಿಶಿಷ್ಟ ಜಾತಿಯ ಮೊದಲ ಗುಂಪು ಅಂದ್ರೆ ಎಡಗೈ ಸಮುದಾಯಕ್ಕೆ ಶೇ.6 ರಷ್ಟು ಮೀಸಲಾತಿ, ಬಲಗೈ ಹಾಗೂ ಉಳಿದ ಸಮುದಾಯಗಳು ಎರಡನೇ ಗುಂಪಿಗೆ ಸೇರ್ಪಡೆಯಾಗುತ್ತವೆ. ಅವಕ್ಕೆ ಶೇ. 5.5 ಮೀಸಲಾತಿ. ಮೂರನೇ ಗುಂಪು ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಕ್ಕೆ 4.5 ಮೀಸಲಾತಿಯನ್ನು ನೀಡಲು ತೀರ್ಮಾನಿಸಲಾಗಿದೆ.
ಈಗ ಬಂಜಾರ ಸಮುದಾಗ ಇಷ್ಟೊಂದು ದಂಗೆ ಏಳಲು ಕಾರಣವೇ ಇದು. ಯಾಕಂದ್ರೆ ಈ ಮೊದಲು ಪರಿಶಿಷ್ಟ ಜಾತಿಗೆ ಸಿಗುತ್ತಾ ಇದ್ದಂತ ಶೇಕಡ 15 ರಷ್ಟು ಮೀಸಲಾತಿಯಲ್ಲಿ ಬಂಜಾರ ಸಮುದಾಯ ಬಹುಪಾಲು ಮೀಸಲಾತಿಯನ್ನು ಪಡೆಯುತ್ತಿದ್ದರು. ಈಗ ಶೇಕಡ 4.5 ರಷ್ಟು ಮೀಸಲಾತಿಯಲ್ಲಿಯೇ ನಾಲ್ಕು ಜಾತಿಗಳು ಹಂಚಿಕೆ ಮಾಡಿಕೊಳ್ಳಬೇಕಾಗಿದೆ. ಇದರಿಂದ ಆಕ್ರೋಶಗೊಂಡು ಬಂಜಾರ ಸಮುದಾಯ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.