ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿಯಾಗಿ ದಸರಾ ಗಿಫ್ಟ್ ಅನ್ನು ನೀಡಲಾಗಿತ್ತು. ಆ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರು ಕೂಡ ನಿರೀಕ್ಷೆ ಹೆಚ್ಚಾಗಿತ್ತು. ಇದೀಗ ಆ ಖುಷಿಯನ್ನ ಸರ್ಕಾರ ಹೆಚ್ಚಿಸಿದೆ. ದೀಪಾವಳಿ ಗಿಫ್ಟ್ ನೀಡಿದ್ದು, ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ಶೇಕಡ 2 ರಷ್ಟು ಭತ್ಯೆಯನ್ನ ಹೆಚ್ಚಳ ಮಾಡಿದೆ.
ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜುಲೈ 2025ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 12.25 ರಿಂದ ಶೇಕಡ 14.25 ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರವೂ ತನ್ನ ನೌಕರರಿಗೆ ತುಟ್ಟಿ ಭತ್ಯೆ ಘೋಷಿಸಿದ ಬೆನ್ನಲ್ಲೇ ಸಾಮಾನ್ಯವಾಗಿ ಸರ್ಕಾರವೂ ಏರಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಹೆಚ್ಚುವರಿ 3% ತುಟ್ಟಿ ಭತ್ಯೆ ನೀಡಲು ಒಪ್ಪಿಗೆ ನೀಡಿತ್ತು.
2025ರ ಜುಲೈ 1 ರಿಂದಾನೇ ಪೂರ್ವಾನ್ವಯವಾಗುವಂತೆ ಶೇಕಡ 2 ರಷ್ಟು ತುಟ್ಟಿಭತ್ಯೆ ಹೆಚ್ಚಿಸಬೇಕೆಂದು ನೌಕರರ ಸಂಘ ಮಾಡಿದ್ದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು, ಶೇಕಡಾ 2 ರಷ್ಟು ತುಟ್ಟಿಭತ್ಯೆ ಹೆಚ್ಚಿಸಬೇಕೆಂಬ ಪ್ರಸ್ತಾಪ ಹೊಂದಿದ್ದ ಕಡತಕ್ಕೆ ಅವರು ಸಹಿ ಹಾಕಿದ್ದಾರೆ. ಅಖಿಲ ಭಾರತ ಬೆಲೆ ಸೂಚ್ಯಂಕವನ್ನು ಆಧರಿಸಿ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳಕ್ಕೆ ಮಂಜೂರು ಮಾಡಿದ ದಿನಾಂಕದಿಂದಲೇ ರಾಜ್ಯ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸುವುದು ಈವರೆಗಿನ ಸಂಪ್ರದಾಯವಾಗಿದೆ. ಈ ಬಾರಿಯೂ ಅದೇ ರೀತಿ ಡಿಎ ಹೆಚ್ಚಿಗೆಯಾಗಿದೆ. ಈ ಮೂಲಕ ರಾಜ್ಯ ಸರ್ಕಾರಿ ನೌಕರರು ದೀಪಾವಳಿ ಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡುವಂತಾಗಿದೆ.





