ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಆ. 17 : ದೆಹಲಿಯ ನಡೆದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ, ಅವರು ದೇಶದ ಜನತೆಯ ಕ್ಷಮೆಯಾಚಿಸದಿದ್ದರೆ ಕಾಂಗ್ರೆಸ್ ಪಕ್ಷದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಭಾರತೀಯ ಜನತಾ ಪಾರ್ಟಿ ಮುಖಂಡರು ಎಚ್ಚರಿಸಿದ್ದಾರೆ.

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿ ಭಾನುವಾರ ಸಂಜೆ ಭಾರತಿಯ ಜನತಾ ಪಾರ್ಟಿಯ ಯುವ ಮೋರ್ಚಾದವತಿಯಿಂದ ಹಮ್ಮಿಕೊಂಡಿದ್ದ ವಂದೇ ಮಾತರಂ ಗೀತೆ ಹಾಡುವಾಗ ಅಡ್ಡಿಪಡಿಸಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರ ವಿರುದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ವಂದೇ ಮಾತರಂ’ ಗೀತೆ ರಚನೆಯಾಗಿ 150 ವರ್ಷಗಳಾಗಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಇಡೀ ದೇಶವನ್ನು ಒಂದಗೂಡಿಸಿದ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಬಹುದೊಡ್ಡ ಪ್ರೇರಣೆ ನೀಡಿದ ಪವಿತ್ರ ಗೀತೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಇದೇ ಗೀತೆಯನ್ನು ಹಾಡುತ್ತಾ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ವಂದೇ ಮಾತರಂ’ ಗೀತೆ ಹೇಳುವ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಗೀತೆಗೆ ಅಗೌರವ ತೋರಿದ್ದಾರೆ ಮತ್ತು ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ವಂದೇ ಮಾತರಂ ಗೀತೆಯನ್ನು ವಿರೋಧಿಸುವುದು ಹೊಸದೇನಲ್ಲ. ತಮ್ಮ ಹಿಂದಿನ ಆಡಳಿತದ ಅವಧಿಯಲ್ಲೂ ಅವರು ಈ ಗೀತೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಈಗಲೂ ಅದೇ ಮನಸ್ಥಿತಿಯನ್ನು ಮುಂದುವರಿಸಿದ್ದಾರೆ. ದೇಶದ ಜನರೆಲ್ಲರೂ ಒಂದೇ ತಾಯಿಯ ಮಕ್ಕಳು ಎಂಬ ಭಾವನೆಗೆ ಈ ನಡೆ ಧಕ್ಕೆ ತಂದಿದ್ದು, ಇಡೀ ಭಾರತೀಯ ಜನಾಂಗಕ್ಕೆ ಎಸಗಿದ ಅಪಮಾನವಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಕ್ಷಣವೇ ತಮ್ಮ ಈ ನಡಾವಳಿಗಾಗಿ ದೇಶದ ಸಮಸ್ತ ಜನರ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅವರ ಈ ಧೋರಣೆಯ ವಿರುದ್ಧ ಭಾರತೀಯ ಜನತಾ ಪಾರ್ಟಿಯು ದೇಶಾದ್ಯಂತ ಉಗ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ ಎಚ್ಚರಿಸಿದರು.
ಭಾರತಿಯ ಜನತಾ ಪಾರ್ಟಿಯ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾಧ ಅರುಣ್ ಮಾತನಾಡಿ, ದೆಹಲಿಯಲ್ಲಿ ಧ್ವಜಾರೋಹಣ ಸಂದರ್ಭದಲ್ಲಿ ‘ವಂದೇ ಮಾತರಂ’ ಗೀತೆ ಪ್ರಸಾರವಾಗುತ್ತಿದ್ದಾಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಕೈಸನ್ನೆ ಮೂಲಕ ಗೀತೆಯನ್ನು ನಿಲ್ಲಿಸುವಂತೆ ಸೂಚಿಸಿ ಅಪಮಾನ ಮಾಡಿದ್ದಾರೆ ಬಂಕಿಮಚಂದ್ರ ಚಟೋಪಾಧ್ಯಾಯರು ರಚಿಸಿದ ಹಾಗೂ ರವೀಂದ್ರನಾಥ ಠಾಗೋರ್ ಅವರಿಂದ ಬೆಂಬಲಿಸಲ್ಪಟ್ಟ ಈ ಐತಿಹಾಸಿಕ ಗೀತೆಗೆ ಕಾಂಗ್ರೆಸ್ ನಾಯಕರು ಗೌರವ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಲಿನ ನೋವಿದ್ದ ಕಾರಣ ಗೀತೆ ನಿಲ್ಲಿಸಲು ಸೂಚಿಸಲಾಯಿತು ಎಂದು ಕಾಂಗ್ರೆಸ್ ನೀಡುತ್ತಿರುವ ಸಮಜಾಯಿಸಿಯನ್ನು ತಿರಸ್ಕರಿಸಿದ ತಪ್ಪು ಮಾಡಿ ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದ ನೂತನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಅವರು ತಮಗೆ ಧ್ವಜಾರೋಹಣ ಮಾಡಲು ಸಮಯವಿಲ್ಲ, ತಾವು ಕೆಲಸದಲ್ಲಿ ಕಾರ್ಯನಿರತರಾಗಿದ್ದೇವೆ ಎಂಬ ನೆಪ ಒಡ್ಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದನ್ನು ಖಂಡಿಸಿ ರಾಷ್ಟ್ರಧ್ವಜಕ್ಕೆ ಗೌರವ ನೀಡದ ಇಂತಹ ನಡವಳಿಕೆ ದೇಶಪ್ರೇಮದ ಅಭಾವವನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಜನತೆಯಲ್ಲಿ ತಕ್ಷಣವೇ ಕ್ಷಮಾಪಣೆ ಕೇಳಬೇಕು ಬರುವ ದಿನಗಳಲ್ಲಿ ರಾಷ್ಟ್ರಪ್ರೇಮವಿಲ್ಲದ ಇಂತಹ ಸರ್ಕಾರ ಹಾಗೂ ನಾಯಕರನ್ನು ಅಧಿಕಾರದಿಂದ ದೂರವಿಟ್ಟು, ರಾಷ್ಟ್ರಪ್ರೇಮ ಮತ್ತು ಎಲ್ಲ ವರ್ಗಗಳ ಜನರಿಗೆ ಬೆಂಬಲ ನೀಡುವ ನಾಯಕತ್ವವನ್ನು ತರಬೇಕೆಂದು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್, ಯುವ ಮೋರ್ಚಾದ ನಗರಾದ್ಯಕ್ಷ ವಸಂತ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಪ್ರತಾಪ್, ಸಿ.ಎಲ್. ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜು, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ನಗರ ಪ್ರಧಾನ ಕಾರ್ಯದರ್ಶಿ ಬಸವೇಶ್, ಎಸ್.ಸಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತನ, ಬಸಮ್ಮ, ಸುಮ, ನಾಗರಾಜ್, ಸತೀಶ್, ಆಕಾಶ್, ಪಾಪು, ರವಿ, ಮಹಂತೇಶ್, ಚಂದ್ರಶೇಖರ್, ಧನಂಜಯ, ಆಕಿಲೇಶ್, ಬಾಲಾಜಿ ಚಂದ, ಧನುಷು ವಿನಯ್ ವಿಜಯ್ ಕೀರ್ತಿ, ಅರುಣ್ ಪ್ರಸಾದ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಅಜಾತಶತ್ರು, ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿ ರವರ 8ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಭಾನುವಾರ ಸಂಜೆ ಚಿತ್ರದುರ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಟಿ ಕುಮಾರಸ್ವಾಮಿ, ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ನಾಗರಾಜ್ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ಭಾರ್ಗವಿ ದ್ರಾವಿಡ್, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಅರುಣ್ ಮಾಧ್ಯಮ ವಕ್ತಾಯರಾದ ನಾಗರಾಜ್ ಬೇದ್ರೆ, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಸವೇಶ್ ಹಿರಿಯ ಮುಖಂಡರಾದ ಬಸಮ್ಮ , ಜಿಲ್ಲಾ ಪದಾಧಿಕಾರಿಗಳು, ನಗರ ಪದಾಧಿಕಾರಿಗಳು, ಗ್ರಾಮಾಂತರ ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.










