ಬೆಂಗಳೂರು: ಮೊದಲೇ ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆಯ ಚರ್ಚೆ ಜೋರಾಗಿರುವಾಗಲೇ ದಲಿತ ಸಿಎಂ ವಿಚಾರವೂ ಚರ್ಚೆಗೆ ಬಂದಿದೆ. ದಲಿತ ಸಿಎಂ ಚರ್ಚೆ ಇಂದು ನಿನ್ನೆಯದ್ದಲ್ಲ. ಪದೇ ಪದೇ ದಲಿತ ಸಿಎಂ ಬಗ್ಗೆ ಸುದ್ದಿ ಬಂದು ಹಾಗೇ ತಣ್ಣಗಾಗುತ್ತೆ. ಈ ಬಾರಿಯೂ ದಲಿತ ಸಿಎಂ ವಿಚಾರ ಜೋರಾಗಿದ್ದು, ಗೃಹ ಸಚಿವ ಜಿ.ಪರಮೇಶ್ವರ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಲಿತ ಸಿಎಂ ಆಗಬೇಕು ಎಂಬುದರಲ್ಲಿ ತಪ್ಪಿದೆಯಾ..? ತಪ್ಪಿದೆ ಅಂತ ಹೇಳಿದ್ರೆ ಅದಕ್ಕೆ ಉತ್ತರ ಕೊಡ್ತೇನೆ. ಅವರವರ ಅಭಿಪ್ರಾಯಗಳನ್ನ ಹೇಳ್ತಾ ಇದ್ದಾರಲ್ಲ. ಅದೇ ಥರ ಅವರು ಹೇಳಿದ್ದಾರೆ. ಬಹಳ ಜನ ಸಮರ್ಥರಿದ್ದಾರೆ ನಮ್ಮ ಪಾರ್ಟಿಯಲ್ಲಿ. ಕಾಂಗ್ರೆಸ್ ಪಾರ್ಟಿ ಈ ದೇಶಕ್ಕೆ ಎಷ್ಟು ಜನ ಮುಖಂಡರನ್ನ ಹುಟ್ಟು ಹಾಕಿದೆ ಹೇಳಿ. ಇಲ್ಲಿ ಬೆಳೆದವರೆಲ್ಲ ಬೇರೆ ಬೇರೆ ಪಕ್ಷಕ್ಕೆ ಹೋಗಿ ದೊಡ್ಡವರಾಗಿ ಬಿಟ್ರು. ಕಾಂಗ್ರೆಸ್ ಪಕ್ಷ ಒಂಥರ ಟ್ರೈನಿಂಗ್ ಸೆಂಟರ್ ಇದ್ದಂಗೆ. ಎಲ್ಲಾ ಪಕ್ಷದವರಿಗೂ ಟ್ರೈನಿಂಗ್ ಮಾಡಿ ಕಳುಹಿಸುತ್ತಾ ಇದ್ದಾರೆ.
ಯಾರನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಹೈಕಮಾಂಡ್ ಗೆ ಬಿಟ್ಟಿದ್ದು. ಒಂದು ವೇಳೆ ಅಂತಹ ಸಂದರ್ಭ ಬಂದರೆ, ಸದ್ಯಕ್ಕೆ ನನಗೆ ತಿಳಿದಂತೆ ಆ ಸಂದರ್ಭ ಇಲ್ವೆ ಇಲ್ಲ. ಸಿಎಂ ಹೇಳಿದ್ದರಲ್ಲಿ ತಪ್ಪೇನಿದೆ. ನಾವೂ ಸಿಎಲ್ಪಿ ನಾಯಕರನ್ನು ಆಯ್ಕೆ ಮಾಡಿದಾಗ ಎಲ್ಲಾ ಶಾಸಕರನ್ನು ಕರೆದು ಆಯ್ಕೆ ಮಾಡಿದ್ರು. ಅವತ್ತು ಹೈಕಮಾಂಡ್ ನಾಯಕರು ಕೂಡ ಸಮಯ ನಿಗದಿ ಮಾಡಿರಲಿಲ್ಲ. ಈಗ ನಡುವೆ ಈ ಬೆಳವಣಿಗೆ ಬಗ್ಗೆ ನಮಗೆ ಗೊತ್ತಿಲ್ಲ. ಹೀಗಾಗಿ ಅಂದು ಸಿಎಲ್ಪಿ ಆಯ್ಕೆ ಮಾಡುವಾಗ ಸಿದ್ದರಾಮಯ್ಯ ಅವರೇ ಸಿಎಂ ಅಂತ ಆಯ್ಕೆ ಮಾಡಿದ್ದೇವೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರು ಬದ್ಧವಾಗಿದ್ದೇವೆ ಎಂದಿದ್ದಾರೆ.


