ಧಾರವಾಡ: ಈ ಬಾರಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಖಾಯಂ ಕುಲಪತಿಯನ್ನು ನೇಮಕ ಮಾಡಲಾಗಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಮಣೆ ಹಾಕಿದ್ದು, ಎ.ಎಂ.ಖಾನ್ ಅವರಿಗೆ ವಿವಿ ಕುಲಪತಿಯಾಗಿ ಅಧಿಕಾರ ನೀಡಲಾಗಿದೆ. ಆದರೆ ನೇಮಕಾತಿಯಲ್ಲಿ ಮೆರಿಟ್ ಹಾಗೂ ಸಾಮಾಜಿಕ ನ್ಯಾಯ ಪಾಲನೆ ಆಗಿಲ್ಲವೆಂಬ ಆರೋಪ ಕೂಡ ಕೇಳಿ ಬಂದಿದೆ. ಈ ಹಿನ್ನೆಲೆ ಕುಲಪತಿ ಸ್ಥಾನದ ಪ್ರಬಲ ಆಕಾಂಕ್ಷಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಿವಿ ಕುಲಪತಿ ನೇಮಕಕ್ಕೆ ತಡೆಯಾಜ್ಞೆಯನ್ನ ತಂದಿದ್ದಾರೆ. ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಖಾಲಿಯಾಗಿ 9 ತಿಂಗಳಾಗಿತ್ತು. ಇಷ್ಟು ದಿನಗಳ ಕಾಲ ಪ್ರಭಾರಿ ಕುಲಪತಿಗಳೆ ಎಲ್ಲವನ್ನು ನೋಡಿಕೊಳ್ಳುತ್ತಿದ್ದರು. ಈಗ ಖಾಯಂ ಕುಲಪತಿಯನ್ನ ಸರ್ಕಾರ ನೇಮಕ ಮಾಡಿದೆ. ಸರ್ಕಾರದಿಂದ ಆದೇಶ ಬಂದ ಕೂಡಲೇ ಎ.ಎಂ.ಖಾನ್ ಕೂಡ ವಿವಿ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡು, ಕೆಲಸ ಶುರು ಮಾಡಿದ್ದರು.
ಆದರೆ ಈ ನೇಮಕಾತಿಯನ್ನು ಪ್ರಶ್ನಿಸಿ, ಡಾ.ಮಹದೇವಪ್ಪ ಕರಿದುರಗನವರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇವರ ರಿಟ್ ಅರ್ಜಿಯನ್ನು ಪರಿಗಣಿಸಿರುವ ಕೋರ್ಟ್ ನೇಮಕಾತಿ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕಾರ್ಯಗತಗೊಳಿಸದಂತೆ ಮಧ್ಯಂತರ ಆದೇಶವನ್ನು ನೀಡಲಾಗಿದೆ. ಅಧಿಕಾರ ವಹಿಸಿಕೊಂಡಿದ್ದ ಖಾನ್ ಅವರು ಈಗ ಅಧಿಕಾರದಿಂದ ಕೆಲಸ ಮಾಡುವಂತಿಲ್ಲ. ಧಾರವಾಡ ವಿವಿಯ ಪರಿಸ್ಥಿತಿ ಈಗ ತ್ರಿಶಂಕು ಸ್ಥಿತಿಗೆ ತಲುಪಿದಂತಾಗಿದೆ. ಇಷ್ಟು ದಿನ ಅಂದ್ರೆ ಕಳೆದ 9 ತಿಂಗಳಿನಿಂದ ಕುಲಪತಿಗಳಿಲ್ಲದೆ ನಡೆಯುತ್ತಿದ್ದ ಧಾರವಾಡದ ವಿವಿಗೆ ಈಗ ಖಾಯಂ ಆಗಿ ಕುಲಪತಿಯನ್ನು ನೇಮಕ ಮಾಡಲಾಗಿತ್ತು, ಆದರೆ ಈಗ ಅದಕ್ಕರ ತಡೆಯಾಜ್ಞೆಯನ್ನ ತಂದಿದ್ದು, ಸದ್ಯಕ್ಕೆ ಮತ್ತೆ ವಿವಿಗೆ ಕುಲಪತಿ ಇಲ್ಲದಂತಾಗಿದೆ.
















