ಧಾರವಾಡ: ಮಗನ ಅಗಲಿಕೆ ತಾಳಲಾರದೆ ಆಘಾತದಿಂದ ತಾಯಿಯೂ ಅಂತಿಮ ಉಸಿರೆಳೆದ ಕರುಳಕುಡಿಯ ಕರುಣಾಜನಕ ಘಟನೆಯೊಂದು ಧಾರವಾಡದ ತೇಜಸ್ವಿನಗರದಲ್ಲಿ ಸಂಭವಿಸಿದೆ.
ಇಲ್ಲಿನ ನಿವಾಸಿ ಮೆಹಬೂಬ್ ಸಾಬ್ ನದಾಫ್ (47) ಎಂಬುವವರು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಅನಾರೋಗ್ಯದ ಬೇಸರದಿಂದ ಬುಧವಾರ ಬೆಳಗಿನ ಜಾವ ರಾಜೀವ್ ಗಾಂಧಿನಗರದ ಬಳಿ ರೈಲಿಗೆ ಅಡ್ಡಬಿದ್ದು ಆತ್ಮಹತ್ಯೆಗೆ ಶರಣಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ರೈಲ್ವೆ ಪೊಲೀಸರು, ಸಂಜೆಯ ವೇಳೆಗೆ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದರು. ಆ ಬಳಿಕ ಸಂಜೆ ಸುಮಾರು 7 ಗಂಟೆಯ ಸುಮಾರಿಗೆ ಕುಟುಂಬಸ್ಥರು ಮೆಹಬೂಬ್ ಅವರ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಮಗನ ಅಂತಿಮ ಯಾತ್ರೆಗೆ ಮೃತದೇಹವನ್ನು ಮನೆಯಿಂದ ಹೊರಗೆ ತರುತ್ತಿದ್ದಂತೆಯೇ, ಈ ದುಃಖವನ್ನು ತಡೆಯಲಾಗದ ಅವರ ತಾಯಿ ಮುಗುಟಬಿ ನದಾಫ್ (68) ತೀವ್ರ ಆಘಾತದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಒಂದೇ ದಿನ ಒಂದೇ ಕುಟುಂಬದಲ್ಲಿ ಎರಡೆರಡು ಸಾವು ಸಂಭವಿಸಿರುವುದು ಇಡೀ ತೇಜಸ್ವಿನಗರದಲ್ಲಿ ಶೋಕಸಾಗರದಲ್ಲಿ ಮುಳುಗಿಸಿದೆ. ತಡರಾತ್ರಿ ಮಗನ ಅಂತ್ಯಕ್ರಿಯೆ ಮುಗಿಸಿ ಹಿಂತಿರುಗಿದ ಸಂಬಂಧಿಕರು ಹಾಗೂ ಸ್ಥಳೀಯರು, ತಾಯಿಯ ಅಂತಿಮ ಸಂಸ್ಕಾರವನ್ನೂ ನೆರವೇರಿಸಿದ್ದಾರೆ.









