ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬರೋಬ್ಬರಿ ಎರಡೂವರೆ ವರ್ಷ ತುಂಬಿದೆ. ಹೀಗಾಗಿಯೇ ಸಿಎಂ ಸ್ಥಾನದ ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿದ್ದರೆ ರಾಜ್ಯದಲ್ಲೂ ಒಂದಷ್ಟು ಬದಲಾವಣೆಗಳು ಆಗ್ತಾ ಇತ್ತು. ಅದರಲ್ಲೂ ಸಿಎಂ ಸ್ಥಾನದ ಬದಲಾವಣೆ. ಇದೀಗ ಬಿಹಾರದ ಸೋಲಿನಿಂದ ಕರ್ನಾಟಕದ ರಾಜಕೀಯ ತಟಸ್ಥವಾದಂತೆ ಕಾಣಿಸ್ತಾ ಇದೆ. ಇದರ ನಡುವೆ ಸಿಎಂ ಆಸೆ ವರ್ಕೌಟ್ ಆಗೋದು ಅನುಮಾನವಾದಂತೆ ಆಗಿದೆ. ಹೀಗಾಗಿಯೇ ಒಕ್ಕಲಿಗ ಸಮುದಾಯದ ಶಾಸಕರು, ಸಚಿವರೆಲ್ಲ ತಮ್ಮ ನಾಯಕನಿಗಾಗಿ ದೆಹಲಿ ಫ್ಲೈಟ್ ಹತ್ತಿದ್ದಾರೆ.
ಕೃಷಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ದೆಹಲಿಗೆ ಹೊರಟಿದ್ದಾರೆ. ಅಷ್ಟೇ ಅಲ್ಲ ಈ ಬೇಡಿಕೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ದಲಿತ ಶಾಸಕರು ಕೂಡ ಬೆಂಬಲ ನೀಡಿದ್ದಾರೆ. ಮಾಗಡಿ ಶಾಸಕ ಬಾಲಕೃಷ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಅನೇಕಲ್ ಶಾಸಕ ಶಿವಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್, ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ದಾವಣಗೆರೆ ಜಿಲ್ಲೆಯ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗುವ ಕನಸ್ಸನ್ನು ಹಾಗೇ ಭದ್ರ ಮಾಡಿಕೊಂಡಿದ್ದಾರೆ. ಕೆಲವೊಂದು ಸಲ ಆ ಆಸೆ ಪರೋಕ್ಷವಾಗಿ ಹೊರಗೆ ಬಂದರು, ಹೈಕಮಾಂಡ್ ಮಾತಿಗೆ ಬೆಲೆ ಕೊಟ್ಟು, ತನ್ನ ಬೆಂಬಲಿಗರನ್ನು ಸುಮ್ಮನೆ ಮಾಡಿರುವ ಉದಾಹರಣೆಗಳಿದಾವೆ. ಈಗ ಒಕ್ಕಲಿಗ ಸಮುದಾಯದವರೆಲ್ಲ ಹೊಂದಾಗಿದ್ದು, ಮುಂದೆ ಯಾವ ಬೆಳವಣಿಗೆಯಾಗುತ್ತೆ ಎಂಬುದನ್ನ ನೋಡಬೇಕಿದೆ.
