ವಿದ್ಯುತ್ ಗುತ್ತಿಗೆದಾರರ ಸಮಸ್ಯೆಗಳ ನಿವಾರಣೆಗಾಗಿ ಮುಖ್ಯಮಂತ್ರಿ ಬಳಿ ನಿಯೋಗ : ಶಾಸಕಿ ಶ್ರೀಮತಿ ಪೂರ್ಣಿಮ ಶ್ರೀನಿವಾಸ್

suddionenews
2 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ,(ಜ.11) : ಎಲ್ಲಾ ಕಡೆ ಸಮಸ್ಯೆಗಳು ಇದ್ದೆ ಇರುತ್ತವೆ. ಹಾಗಾಗಿ ನಿಮ್ಮ ಕುಂದುಕೊರತೆ ಸಮಸ್ಯೆಗಳ ನಿವಾರಣೆಗಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರ ಬಳಿ ಬೇಕಾದರೆ ನಿಯೋಗ ಕರೆದುಕೊಂಡು ಹೋಗುತ್ತೇನೆಂದು ಹಿರಿಯೂರು ಶಾಸಕಿ ಶ್ರೀಮತಿ ಪೂರ್ಣಿಮ ಶ್ರೀನಿವಾಸ್ ವಿದ್ಯುತ್ ಗುತ್ತಿಗೆದಾರರಿಗೆ ಭರವಸೆ ನೀಡಿದರು.

ದಾವಣಗೆರೆ ರಸ್ತೆ ಹೊರವಲಯದಲ್ಲಿರುವ ಓಜಾಸ್ ಹೋಟೆಲ್‍ನಲ್ಲಿ ಬುಧವಾರ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಸಮಿತಿಯಿಂದ ನಡೆದ ಶತಮಾನೋತ್ಸವ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

ವಿದ್ಯುತ್ ಇಲಾಖೆ ಪಾತ್ರ ಅತ್ಯಂತ ಮಹತ್ವದ್ದು, ಸರ್ಕಾರ ಹೊರಡಿಸುವ ಆದೇಶಗಳನ್ನು ಅಧಿಕಾರಿಗಳು ಚಾಚು ತಪ್ಪದೆ ಪಾಲಿಸಬೇಕಾದರೆ ನೀವುಗಳು ಮೊದಲು ಸಂಘಟಿತರಾಗಿ ವಿದ್ಯುತ್ ಇಲಾಖೆ ಅಧಿಕಾರಿಗಳ ಬೆನ್ನ ಹಿಂದೆ ಬೀಳಬೇಕು. ಗುತ್ತಿಗೆದಾರರೆಂದೊಡನೆ ಸ್ಥಿತಿವಂತರು ಎನ್ನುವ ಮನೋಭಾವನೆ ಎಲ್ಲರಲ್ಲೂ ಮೂಡುವುದು ಸಹಜ. ಎಲ್ಲಾ ಕ್ಷೇತ್ರಗಳಲ್ಲೂ ಸಮಸ್ಯೆಗಳಿವೆ. ಆದರೆ ಪರಿಹಾರ ಕಂಡುಕೊಳ್ಳಲು ಕೂಡ ಅವಕಾಶವಿದೆ. ಸಂಘಟನೆಯ ಮೂಲಕ ಸರ್ಕಾರದಿಂದ ಕೆಲಸ ಮಾಡಿಸಿಕೊಳ್ಳಬಹುದು. ನಾನು ಎರಡು ಬಾರಿ ಬೆಂಗಳೂರು ಮಹಾನಗರಪಾಲಿಕೆ ಸದಸ್ಯಳಾಗಿ ಆಯ್ಕೆಯಾಗಿದ್ದೇನೆಂದರೆ ಅದಕ್ಕೆ ನಿಮ್ಮಗಳ ಪಾತ್ರವೂ ಇದೆ. ಅದಕ್ಕಾಗಿ ನಿಮ್ಮ ಕುಂದುಕೊರೆಗಳ ನಿವಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದು ಹೇಳಿದರು.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್ ಮಾತನಾಡಿ ಸಮಸ್ಯೆಗಳು ಬಂದಾಗ ಸಂಘಟಿತರಾಗಿ ಸರ್ಕಾರದಿಂದ ನಮ್ಮ ನ್ಯಾಯಯುತವಾದ ಹಕ್ಕುಗಳನ್ನು ಪಡೆಯುವ ಉದ್ದೇಶದಿಂದ ಸಂಘ 1922 ರಲ್ಲಿ ಸ್ಥಾಪನೆಯಾಯಿತು. ಕಳೆದ ಏಳು ವರ್ಷಗಳಿಂದ ಅನೇಕ ಸಮಸ್ಯೆಗಳಾಗುತ್ತಿದೆ. ರಾಜ್ಯದಲ್ಲಿ 29 ಸಾವಿರ ಗುತ್ತಿಗೆದಾರರಿದ್ದಾರೆ. ಇದರಲ್ಲಿ ಒಂದುವರೆಯಿಂದ ಎರಡು ಸಾವಿರ ದೊಡ್ಡ ಗುತ್ತಿಗೆದಾರರಿದ್ದಾರೆ. ಉಳಿದವರೆಲ್ಲಾ ಚಿಕ್ಕ ಚಿಕ್ಕ ಗುತ್ತಿಗೆ ಕೆಲಸಗಳನ್ನು ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಎಲ್ಲರಂತೆ ನಾವುಗಳು ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಬದುಕುವ ಅವಕಾಶ ಮಾಡಿಕೊಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಲೆ ಬರುತ್ತಿದ್ದೇವೆಂದು ತಿಳಿಸಿದರು.

1 ರಿಂದ ಐದು ಲಕ್ಷ ರೂ.ಗಳವರೆಗಿನ ಗುತ್ತಿಗೆಯನ್ನು ಸ್ಥಳೀಯರಿಗೆ ಕೊಡಬೇಕೆಂಬುದು ನಮ್ಮ ಬೇಡಿಕೆ. ಇದಕ್ಕೆ ಸರ್ಕಾರ ಸ್ಪಂದಿಸಿದೆ.

ವಿಪರ್ಯಾಸವೆಂದರೆ ಸರ್ಕಾರ ಹೊರಡಿಸುವ ಆದೇಶಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ಈ ಸಂಬಂಧ ಇಂಧನ ಸಚಿವರನ್ನು ಭೇಟಿಯಾಗಿದ್ದೇವೆ. ಸರ್ಕಾರ ಮತ್ತು ಕಂಪನಿಗಳು ಹೊರಡಿಸುವ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಇಡೀ ರಾಜ್ಯದಲ್ಲಿ 20 ಲಕ್ಷ ಮಂದಿ ವಿದ್ಯುತ್ ಗುತ್ತಿಗೆ ವೃತ್ತಿಯನ್ನು ನಂಬಿ ಬದುಕುತ್ತಿದ್ದಾರೆ. ನಮ್ಮ ಸಂಘಟನೆ ಯಾವುದೇ ರಾಜಕೀಯ ಪಕ್ಷದೊಡನೆ ಗುರುತಿಸಿಕೊಂಡಿಲ್ಲ. ಜ.21, 22 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಶತಮಾನೋತ್ಸವಕ್ಕೆ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸುತ್ತೇವೆ. ಅಲ್ಲಿ ವಿದ್ಯುತ್ ಗುತ್ತಿಗೆದಾರರ ಅಭಿವೃದ್ದಿ ನಿಗಮ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಜಯರಾಮಪ್ಪ, ಮುಖ್ಯ ಇಂಜಿನಿಯರ್ ಗೋವಿಂದಪ್ಪ, ಚಿತ್ರದುರ್ಗ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಜಯಣ್ಣ, ಇಂಜಿನಿಯರ್‍ಗಳಾದ ರಮೇಶ್, ನಿರಂಜನ್, ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಶ್ಯಾಂಸುಂದರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ಚಂದ್ರಬಾಬು, ಸಹ ಕಾರ್ಯದರ್ಶಿ ಅನ್ವರ್‍ಮಿಯ, ಶಿವಾನಂದ್, ಹರೀಶ್ ಪಾಟೀಲ್, ಮೆಹಬೂಬ್‍ಭಾಷ, ಕಾರ್ಯಕಾರಿ ಸಮಿತಿ ಸದಸ್ಯರುಗಳು ವೇದಿಕೆಯಲ್ಲಿದ್ದರು.
ಗಂಗಾಧರ್ ಮತ್ತು ತಂಡದವರು ಪ್ರಾರ್ಥಿಸಿದರು. ಖಾದಿ ಹೇಮಂತ್‍ ಕುಮಾರ್ ಸ್ವಾಗತಿಸಿದರು. ರಮೇಶ್ ಮಾಧುರಿ ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks