Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯುವಜನರು ಮತದಾನ ಮಾಡುವ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ : ಜಿ.ಎನ್.ಮಲ್ಲಿಕಾರ್ಜುನ

---Advertisement---

ಸುದ್ದಿಒನ್, ಏಪ್ರಿಲ್. 14 :  ಯುವಜನರನ್ನು ಮತದಾನದ ಕಡೆಗೆ ಸೆಳೆಯುವ ಅಗತ್ಯವಿದೆ ಎಂದು ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನ ಹೇಳಿದರು.

ಅವರು ಭಾನುವಾರ ಚಿತ್ರದುರ್ಗ ನಗರದ ರೋಟರಿ ಬಾಲಭವನದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರೋಟರಿ ಕ್ಲಬ್ ವತಿಯಿಂದ ಏರ್ಪಡಿಸಿದ್ದ  ಮತದಾನ ಮತ್ತು ಮತದಾರರ ಜಾಗೃತಿ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಜನಸಂಖ್ಯೆಯಲ್ಲಿ ಶೇ 40 ಕ್ಕೂ ಹೆಚ್ಚು ಯುವ ಜನರಿದ್ದಾರೆ. ಆದರೆ ಇವರು ಮತದಾನ ಮಾಡುವ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ. ಪ್ರಜಾಪ್ರಭುತ್ವವನ್ನು ಮುನ್ನೆಡೆಸುವ ಜವಾಬ್ದಾರಿ ಹೊಂದಿರುವ ಯುವಜನರು ಚುನಾವಣೆ ಮತ್ತು ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು. ಮತದಾನ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.

ಯುವಜನರು ಹಿಂಜರಿಯುವುದಕ್ಕೆ ಕಾರಣಗಳನ್ನು ತಿಳಿದು, ಅವರುಗಳಿಗೆ ಪ್ರೇರೇಪಣೆಯನ್ನು ನೀಡುವುದು ಅಗತ್ಯ. ಕವಿಗಳಿಗೆ ಸಾಮಾಜಿಕ ಹೊಣೆಗಾರಿಕೆಯಿದೆ. ಕಾವ್ಯದ ಮೂಲಕ ಜನರಿಗೆ ಜಾಗೃತಿ ಮೂಡಿಸುವುದು ಸಾಧ್ಯವಿದೆ. ಜಾಗೃತಿ ಕಾರ್ಯಕ್ರಮಗಳಿಗೆ ಸ್ಪಂದನೆ ಕಡಿಮೆ ಆದರೆ ಅಮಲಿನ ಕಾರ್ಯಕ್ರಮಗಳಿಗೆ ಹೆಚ್ಚಿನ ಸ್ಪಂದನೆ ದೊರೆಯುತ್ತದೆ. ಹೀಗಾಗಿ ಜಾಗೃತಿಯನ್ನು ರುಚಿಕಟ್ಟಾಗಿ ನೀಡಬೇಕಾದ ಅನಿವಾರ್ಯತೆ ಇದೆ ಎಂದರು.


ತಾಪಂ ಇಒ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎಸ್.ಅನಂತರಾಜು ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಸಂವಿಧಾನ ತಳಹದಿಯಾಗಿದೆ. ಮತದಾನ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಸ್ವೀಪ್ ಸಮಿತಿಯಿಂದ ರಂಗೋಲಿ ಸ್ಪರ್ಧೇ, ಕವಿಗೋಷ್ಠಿ, ಜಾಥಾ ಸೇರಿದಂತೆ ನಾನಾ ಕಾಯಾಕ್ರಮಗಳನ್ನು ಆಯೋಜಿಸಲಾಗಿದೆ. 18 ತುಂಬಿದ ಎಲ್ಲ ಜನರು ಕಡ್ಡಾಯವಾಗಿ ಮತ ಚಲಾಯಿಸಬೇಕು. ವೃದ್ಧರಿಗೆ, ವಿಕಲಚೇತನರಿಗೆ ಮತದಾನಕ್ಕೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ಪ್ರಜಾಪ್ರಭುತ್ವಕ್ಕೆ ತಳಹದಿಯಾಗಿರುವ ಮತದಾನ ಕಾರ್ಯದಲ್ಲಿ ಎಲ್ಲರೂ ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದು ಹೇಳಿದರು.

 

ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ.ಪರಮೇಶ್ವರಪ್ಪ ಮಾತನಾಡಿ, ಸ್ವಂತ ಮನೆಯೂ ಇಲ್ಲದ, ವಾಹನವೂ ಇಲ್ಲದ ಆಟೋದಲ್ಲಿ ಮತ್ತು ಸೈಕಲ್ ನಲ್ಲಿ ಓಡಾಡುವ ಕೇಂದ್ರ ಸರಕಾರದ ಸಚಿವರನ್ನು ನೋಡಿದ್ದೇವೆ. ಇಂಥಹ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಮಾದರಿಯಾಗಿರಬೇಕು. ಕೋಟಿಗಟ್ಟಲೆ ಆಸ್ತಿ ಹೊಂದಿರುವವರು ಮಾತ್ರ ನಾಮಪತ್ರ ಸಲ್ಲಿಸುತ್ತಿರುವುದು ನೋಡುತ್ತಿದ್ದೇವೆ. ಯುವಜನರು ಭ್ರಷ್ಟತೆಯನ್ನು ಪ್ರತಿರೋಧಿಸುವ ಹಾಗೂ ಪ್ರಶ್ನಿಸುವ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು ಎಂದರು.

 

ಟಿ.ವಿ.ಸುರೇಶ್ ಗುಪ್ತಾ, ಧನಂಜಯ ಮೆಂಗಸಂದ್ರ, ಶೈಲಜಾ ಬಾಬು, ಮೀರಾ ನಾಡಿಗ್, ನೇತ್ರಾವತಿ ನೆಲ್ಲಿಕಟ್ಟೆ, ಎ. ಅಂಬರೀಶ್, ಶಿವಪ್ಪ ಕ್ಯಾದಿಗುಂಟೆ, ರಜನಿ ಸೇರಿದಂತೆ ಜಿಲ್ಲೆಯ 30 ಕವಿಗಳು ಕವನ ವಾಚಿಸಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಇ.ಲಕ್ಷ್ಮೀಕಾಂತ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ, ಸಾಹಿತಿ ಟೀಕಾ ಸುರೇಶ್ ಗುಪ್ತ , ಸಂಚಾಲಕ ಶ್ರೀನಿವಾಸ್ ಮಳಲಿ, ಕೋಶಾಧ್ಯಕ್ಷ ಸಿ.ಲೋಕೇಶ, ಸಂಘಟನಾ ಕಾರ್ಯದರ್ಶಿ ವಿ.ಧನಂಜಯ ಮತ್ತಿತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment