Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬರ ನಿರ್ವಹಣೆಗೆ ಸರ್ಕಾರದ ಆದ್ಯತೆ: ಬಿತ್ತನೆ ವೈಫಲ್ಯದಡಿ ರೂ. 167 ಕೋಟಿ ಬೆಳೆ ವಿಮೆ ಪರಿಹಾರಕ್ಕೆ ವರದಿ : ಸಚಿವ ಟಿ. ರಘುಮೂರ್ತಿ

---Advertisement---

 

ಚಿತ್ರದುರ್ಗ.ಆ.15 : ರಾಜ್ಯದಲ್ಲಿ ಬರಗಾಲದ ಛಾಯೆಯು ಆವರಿಸಿದೆ. ಸರ್ಕಾರ ಬರ ನಿರ್ವಹಣೆಗೆ ಆದ್ಯತೆ ನೀಡಿದೆ. ಜಿಲ್ಲೆಯ ರೈತರ ಅನುಕೂಲಕ್ಕಾಗಿ ಬಿತ್ತನೆ ವೈಫಲ್ಯ (Prevented sowing) ಅಡಿಯಲ್ಲಿ ಸುಮಾರು ರೂ.167 ಕೋಟಿ ಬೆಳೆ ವಿಮೆ ನೀಡುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಘುಮೂರ್ತಿ.ಟಿ ಹೇಳಿದರು.

ನಗರದ ಮರುಘರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸಚಿವನಾಗಿ ನಿಯುಕ್ತಿಯಾದ ನಂತರ ಜಿಲ್ಲೆಯ 6 ತಾಲ್ಲೂಕಿನಲ್ಲಿ ಖುದ್ದು ಬೆಳೆಗಳ ಕುರಿತು ಪರಿಶಿಲನೆ ನಡೆಸಿದ್ದೇನೆ. ಸಕಾಲದಲ್ಲಿ ಮಳೆಯಾಗದೇ ಇರುವುದರಿಂದ, ಬಿತ್ತನೆ ಕುಂಠಿತವಾಗಿರುವುದನ್ನು ಮನಗಂಡು ಬಿತ್ತನೆ ವೈಫಲ್ಯದಡಿ ವಿಮೆ ಸೌಲಭ್ಯಕ್ಕೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಕೈಗೊಂಡ ಕಾರಣ ಈ ಬಾರಿ 1.96 ಲಕ್ಷ ಅಧಿಕ ರೈತರು ಬೆಳೆ ವಿಮೆಯಡಿ ನೊಂದಣಿ ಮಾಡಿಸಿರುತ್ತಾರೆ ಎಂದು ಸಚಿವ ಟಿ.ರಘುಮೂರ್ತಿ ತಿಳಿಸಿದರು.

ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಘೋಷಣೆ ಮಾಡಿದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿಯೋಜನೆ, ಗೃಹಜ್ಯೋತಿ, ಯುವನಿಧಿ ಯೋಜನೆಗಳನ್ನು ಬರಗಾಲದ ಸಂದರ್ಭದಲ್ಲಿ ಜನರಿಗೆ ಆಸರೆಯಾಗಿವೆ.

ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿಯೋಜನೆ, ಯವನಿಧಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಜುಲೈ-2025 ರಿಂದ ಜುಲೈ-2026 ರ ವರೆಗೆ 1,82,95,863 ರಷ್ಟು ಫಲಾನುಭವಿಗಳಿಗೆ 81457.000 ಮೆಟ್ರಿಕ್ ಟನ್ ಅಕ್ಕಿಯನ್ನು ವಿತರಣೆ ಮಾಡಲಾಗಿರುತ್ತದೆ.

ಗೃಹ ಜ್ಯೋತಿ ಯೋಜನೆಯಡಿ ಇದುವರೆಗೂ 3,76,241 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದು ರೂ.592.32 ರೂಪಾಯಿ ವ್ಯಯ ಮಾಡಲಾಗಿದೆ.

ಗೃಹಲಕ್ಷ್ಮೀ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 4,03,786 ಫಲಾನುಭವಿಗಳು ನೋಂದಣಿಯಾಗಿರುತ್ತಾರೆ.ಯೋಜನೆಡಿ ಒಟ್ಟು 32 ಕಂತುಗಳಲ್ಲಿ ಪ್ರತಿ ತಿಂಗಳು ರೂ.2000 ದಂತೆ ಫಲಾನುಭವಿಗಳಿಗೆ, ಜೂನ್-2026 ರವರೆಗೆ ಒಟ್ಟು ರೂ.2,400 ಕೋಟಿಗೂ ಅಧಿಕ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆ ಮೂಲಕ ಪಾವತಿಸಲಾಗಿರುತ್ತದೆ.

ಯುವನಿಧಿ ಯೋಜನೆಯಡಿ ಜೂನ್-2026 ರ ಅಂತ್ಯದವರೆಗೂ 11,022 ಫಲಾನುಭವಿಗಳಿಗೆ ರೂ.34.11ಕೋಟಿ ಗಳನ್ನು ಹಣ ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಶಕ್ತಿಯೋಜನೆಯಡಿ ಜುಲೈ-2026 ರವರೆಗೆ 6,89,00,000 ಜನ ಮಹಿಳೆಯರು ಈ ಜಿಲ್ಲೆಯಲ್ಲಿ ಉಚಿತವಾಗಿ ಪ್ರಯಾಣಿಸಿರುತ್ತಾರೆ. ಇದಕ್ಕೆ ಒಟ್ಟು ರೂ.299 ಕೋಟಿಗೂ ಅಧಿಕ ಮೊತ್ತವನ್ನು ಖರ್ಚುಮಾಡಲಾಗಿದೆ ಎಂದು ಸಚಿವ ರಘುಮೂರ್ತಿ.ಟಿ ತಿಳಿಸಿದರು.

ತುರುನೂರಿನಲ್ಲಿ ಸ್ವಾತಂತ್ರ್ಯ ಇತಿಹಾಸ ಬಿಂಬಿಸುವ ಉದ್ಯಾನವ ನಿರ್ಮಾಣ

ತುರವನೂರು ಸ್ವಾತಂತ್ರ್ಯ ಹೋರಾಟದ ಈ ನೆನಪನ್ನು ಹಚ್ಚಹಸಿರಾಗಿ ಇರಿಸಿ,ಮುಂದಿನ ಪೀಳಿಗೆ ಹೋರಾಟಗಾರರ ಕೊಡುಗೆ ತಿಳಿಸುವ ನಿಟ್ಟಿನಲ್ಲಿ, ತುರವನೂರು ಗ್ರಾಮದಲ್ಲಿ ಸ್ವಾತಂತ್ರ್ಯ ಉದ್ಯಾನವನ ಸ್ಥಾಪಿಸಲಾಗುತ್ತಿದೆ. ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಉದ್ಯಾನವನ್ನು ಸಾರ್ವಜನರಿಗೆ ಮುಕ್ತಗೊಳಿಸಲಾಗುವುದು ಎಂದ ಸಚಿವ ಟಿ.ರಘುಮೂರ್ತಿ ಹೇಳಿದರು.

ಜಿಲ್ಲೆಯ ತುರವನೂರಿಗೂ ಗಾಂಧೀಜಿಯವರಿಗೂ ಭಾವನಾತ್ಮಕ ಸಂಬಂಧವಿತ್ತು. ಊರಿನ ಪ್ರತಿ ಮನೆಗೂ ಗಾಂಧೀಜಿವರು ಪ್ರೇರಣೆಯಾಗಿದ್ದರು. ಈಚಲು ಮರದ ಸತ್ಯಾಗ್ರಕ್ಕೆ ತುರುವನೂರು ಕೇಂದ್ರ ಬಿಂದುವಾಗಿತ್ತು.ರಾಜ್ಯದ ಪ್ರಮುಖ ನಾಯಕರು ಈ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು. ಈ ಹೋರಾಟದಲ್ಲಿ ಪ್ರತಿ ಮನೆಯಿಂದಲೂ ಯುವಕರು, ಮಹಿಳೆಯರೆಂಬ ಬೇಧವಿಲ್ಲದೆ ಸರ್ವರೂ ಕೆಚ್ಚೆದೆಯ ಹೋರಾಟ ನಡೆಸಿದರು. ರಾತ್ರೋರಾತ್ರಿ ಸಾವಿರಾರು ಈಚಲು ಮರಗಳನ್ನು ಕಡಿದು ಹಾಕಲಾಯಿತು.

ಈ ಹೋರಾಟದ ಮಾಹಿತಿ ಮಹಾತ್ಮ ಗಾಂಧೀಜಿಯವರಿಗೆ ಮುಟ್ಟಿತು. ಈ ಸಮಯದಲ್ಲಿ ಅವರೂ ಇಲ್ಲಿಗೆ ಬಂದು ಹೋರಾಟದಲ್ಲಿ ಭಾಗವಹಿಸುವ ಹಂಬಲ ವ್ಯಕ್ತ ಪಡಿಸಿದ್ದರು. ಕೊನೆಗಳಿಗೆಯಲ್ಲಿ ಅವರ ಸಹಚರರಾದ ಮಹದೇವ್ ದೇಸಾಯಿಯವರು ಇಲ್ಲಿಗೆ ಬಂದು ಗಾಂಧೀಜಿಯವರ ಪರವಾಗಿ ತುರವನೂರಿಗೆ ಬಂದು ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಸಚಿವ ಟಿ.ರಘುಮೂರ್ತಿ ಸ್ಮರಿಸಿದರು.

ರೈಲ್ವೆ ಯೋಜನೆಗೆಗಳಿಗೆ ವೇಗ : ಚಿತ್ರದುರ್ಗ ಜಿಲ್ಲೆಯಲ್ಲಿನ್ನು ರೈಲ್ವೆ ಯೋಜನೆಗಳಿಗೆ ವೇಗ ಸಿಕ್ಕಿದ್ದು, ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರದ ಸಂಯುಕ್ತಶ್ರಯ್ರದಲ್ಲಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ನೇರ ರೈಲ್ವೆ ಮಾರ್ಗದ 101 ಕಿ.ಮೀ ಜಿಲ್ಲೆಯಲ್ಲಿ ಹಾದು ಹೋಗಿದೆ. ಇದಕ್ಕಾಗಿ 1,211 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು, ರೈಲ್ವೇ ಇಲಾಖೆ ಹಸ್ತಾಂತರಿಸಲಾಗಿದೆ. 2028ರ ವೇಳೆಗೆ ರೈಲ್ವೇ ಯೋಜನೆಗೆ ಪೂರ್ಣ ಪ್ರಮಾಣದ ಚಾಲನೆ ಸಿಗಲಿದೆ.

ಚಿಕ್ಕಜಾಜೂರು-ಬಳ್ಳಾರಿ ರೈಲ್ವೆ ಡಬ್ಲಿಂಗ್ ಯೋಜನೆ ಸುಮಾರು 130 ಕಿ.ಮೀ ಉದ್ದದ ರೈಲ್ವೆ ಮಾರ್ಗವು ಹೊಳಲ್ಕೆರೆ, ಚಿತ್ರದುರ್ಗ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಹಾದು ಹೋಗಲಿದ್ದು, ಒಟ್ಟು 300 ಎಕರೆ ಜಮೀನು ಭೂಸ್ವಾಧೀನಕ್ಕೆ ಒಳಪಡಲಿದ್ದು, ಜಿಲ್ಲೆಯಲ್ಲಿನ ಗಣಿಗಾರಿಕೆಗೆ, ವಾಣಿಜ್ಯೋದ್ಯಮ, ಹೈನುಗಾರಿಕೆ, ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ.

ಮುಂದಿನ ವರ್ಷದ ವೇಳೆ ಗೋನುರು ಅಕ್ವಾಡೆಕ್ಟ ಕಾಮಗಾರಿ ಪೂರ್ಣ : ಜಿಲ್ಲೆಯ ಜೀವನಾಡಿ ಎನಿಸಿರುವ ಭದ್ರಾ ಯೋಜನೆಯ ಸಾಕಾರಕ್ಕೆ ಜಿಲ್ಲೆಯ ಬಹಳಷ್ಟು ಹೋರಾಟಗಾರ ಪ್ರಯತ್ನದ ಫಲವಾಗಿ, ಯೋಜನೆ ಇಂದು ಸಕಾರಗೊಳ್ಳುತ್ತಿದೆ.ಭದ್ರಾ ಮೇಲ್ದಂಡೆ ಯೋಜನೆಯಡಿ ಒಟ್ಟು 29.90 ಟಿ ಎಮ್ ಸಿ ನೀರನ್ನು ಬಳಸಿಕೊಂಡು ಮದ್ಯ ಕರ್ನಾಟಕ ಜಿಲ್ಲೆಗಳಾದ ಚಿತ್ರದುರ್ಗ ಚಿಕ್ಕಮಗಳೂರು, ತುಮಕೂರು ಹಾಗೂ ದಾವಣೆಗೆರೆ ಜಿಲ್ಲೆಗಳಲ್ಲಿನ 767 ಗ್ರಾಮಗಳ ಸುಮಾರು 22 ಸಾವಿರಕ್ಕೂ ಅಧಿಕ ಹೆಕ್ಟೆರ್ ಭೂ ಪ್ರದೇಶಕ್ಕೆ ನೀರಾವರಿ ಪದ್ದತಿ ಮತ್ತು ನೀರಾವರಿ ಸೌಲಭ್ಯ ಕಲ್ಪಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಒಟ್ಟು 367 ಸಣ್ಣ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇಕಡಾ 50 ರಷ್ಟು ನೀರು ತುಂಬಿಸಲು ಯೋಜಿಸಿದ್ದು ಹಾಗೂ ಪ್ರತ್ಯೇಕವಾಗಿ 2 ಟಿ ಎಮ್ ಸಿ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸಲು ಪ್ರಾರಂಭಿಸಲಾಗಿದೆ ಎಂದು ಸಚಿವ ಟಿ.ರಘುಮೂರ್ತಿ ತಿಳಿಸಿದರು.

ಚಿತ್ರದುರ್ಗ ಶಾಖಾ ಕಾಲುವೆ ಯೋಜನೆ :  ಪೂರ್ಣಗೊಳ್ಳುವುದರಿಂದ ಜಿಲ್ಲೆಯ 6 ತಾಲ್ಲೂಕು, ದಾವಣಗೆರೆ ಜಿಲ್ಲೆಯ ಜಗಳೂರು, ತುಮಕೂರಿನ ಪಾವಗಡ ಜನರಿಗೆ ಅನುಕೂಲವಾಗಲಿದೆ.

ಚಿತ್ರದುರ್ಗ ಶಾಖಾ ಕಾಲುವೆ ಒಟ್ಟು 134.5 ಕಿ ಮೀ ಉದ್ದವಾದ ಯೊಜನೆಯಾಗಿದ್ದು, 12 ಸಾವಿರಕ್ಕೂ ಅಧಿಕ ಹೆಕ್ಟೆರ್ ಕೃಷಿ ಭೂಪ್ರದೇಶಕ್ಕೆ ನೀರನ್ನು ಒದಗಿಸುವ ಹಾಗೂ 157 ಕೆರೆಗಳಿಗೆ ನೀರನ್ನು ಭರ್ತಿ ಮಾಡುವ ಮಹಾತ್ವಾಕಾಂಕ್ಷೆ ಯೋಜನೆಯಾಗಿದೆ. ಇದರಲ್ಲಿ ಈಗಾಗಲೇ 114 ಕಿ ಮೀ ಗಳಷ್ಟು ಕಾಮಗಾರಿ ಪೂರ್ಣಗೊಂಡಿರುತ್ತದೆ ಹಾಗೂ ಜುಲೈ 2026 ರ ಅಂತ್ಯಕ್ಕೆ 12,186 ಕೋಟಿಗಳ ವೆಚ್ಚ ಮಾಡಲಾಗಿರುತ್ತದೆ.

ಮುಂಬರುವ ತಿಂಗಳಿನ ವೇಳೆ ಗೂನುರೂ ಕೆರೆವರೆಗೆ ಭದ್ರಾ ನೀರು ಹರಿಯಲಿದೆ. ಈ ಕಾರ್ಯಕ್ರಮದ ಚಾಲನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು. ಮುಂದಿನ ವರ್ಷದ ವೇಳೆ ಗೋನೂರು ಅಕ್ವಾಡೆಕ್ಟ್ ಕಾಮಗಾರಿ ಪೂರ್ಣಗೊಳಲಿದ್ದು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿ‌ನ ಕೆರೆ ನೀರು ಹರಿಸಲಾಗುವುದು.

ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರ ಯೋಜನೆ ಘೋಷಿಸಿದ ರೂ.5300 ಕೋಟಿ ಬಿಡುಗಡೆ ಒತ್ತಾಯಿಸಲಾಗುತ್ತಿದೆ. ಪಕ್ಷ ಭೇದ ಮರೆತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಇದಕ್ಕೆ ಪ್ರಯತ್ನಿಸುತ್ತಿದ್ದಾರೆ. ಸಿರಿಗೆರೆ ಮಠದ ಶಿವಾಚಾರ್ಯ ಶ್ರೀಗಳು ಕೇಂದ್ರಕ್ಕೆ ಅನುದಾನ ಬಿಡುಗಡೆ ಒತ್ತಾಯಿಸಿದ್ದಾರೆ ಎಂದು ಸಚಿವ ಟಿ.ರಘುಮೂರ್ತಿ ತಿಳಿಸಿದರು.

ಸರ್ಕಾರ 100 ದಿನಗಳ ಗುರಿ ಸಾಧನೆ ಪಥದ ಅನಾವರಣ: ಇದೇ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಭಿವೃದ್ದಿಯ ದೂರದೃಷ್ಟಿಯ ಮುನ್ನುಡಿಯಾಗಿ ರೂಪಿಸಿರುವ 100 ದಿನಗಳ ಅಭಿವೃದ್ದಿ ಮತ್ತು ಕಾರ್ಯಸೂಚಿ ಗಳನ್ನು ಉಲ್ಲೇಖಿಸಿದ ಸಚಿವ ಟಿ.ರಘುಮೂರ್ತಿ, ಅಧಿಕಾರ ವರ್ಗದ ಸಹಕಾರದಿಂದ ಅಭಿವೃದ್ದಿ ಪಢದಲ್ಲಿ ನಡೆಯಲು ನಮ್ಮ ಸರ್ಕಾರವು ಬದ್ದವಾಗಿರುತ್ತದೆಂದು ತಿಳಿಸಿದರು.

ಆಕರ್ಷಕ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ : ಸಶಸ್ತ್ರ ಮೀಸಲು ಪಡೆ , ನಾಗರೀಕ ಪೊಲೀಸ್, ಗೃಹ ರಕ್ಷಕ, ಅರಣ್ಯ ಇಲಾಖೆ ತುಕಡಿಗಳು ಎನ್‌ಸಿಸಿ, ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ತಂಡ, ಪೊಲೀಸ್ ಬ್ಯಾಂಡ್ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ದೇಶ ಭಕ್ತಿ ಗೀತೆಗಳ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು.

ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಎಂ ಕಾರಜೋಳ, ಶಾಸಕ ಕೆ.ಎಸ್.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರಿದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಓ ಡಾ.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now