ಬೆಂಗಳೂರು; ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಅಮಾಯಕರ ಮೃತದೇಹಗಳು ಬೆಂಗಳೂರಿನ ಏರ್ಪೋರ್ಟ್ ತಲುಪಿವೆ. ಶಿವಮೊಗ್ಗದ ಮಂಜುನಾಥ್ ಹಾಗೂ ಹಾವೇರಿಯ ಭರತ್ ಭೂಷಣ್ ಮೃತದೇಹಗಳು ಬೆಂಗಳೂರಿನ ಏರ್ಪೋರ್ಟ್ ತಲುಪಿವೆ. ಕೆಂಪೇಗೌಡ ಏರ್ಪೋರ್ಟ್ ನಲ್ಲಿಯೇ ಕೇಂದ್ರ ಸಚುವ ವಿ.ಸೋಮಣ್ಣ ಸಂಸದ ತೇಜಸ್ವಿ ಸೂರ್ಯ ಅಂತಿಮ ನಮನ ಸಲ್ಲಿಸಿದ್ದಾರೆ. ಕಾರ್ಗೋ ವಿಮಾನದಲ್ಲಿ ಬಂದ ಮೃತದೇಹಗಳನ್ನ ಆಂಬುಲೆನ್ಸ್ ಮೂಲಕ ಊರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆಯಾಗಿದೆ. ಉಗ್ರರು ಅಮಾಯಕರ ಜೀವವನ್ನು ಬಲಿ ಪಡೆದಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯಾಗಲಿದೆ. ಈ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ಕುಟುಂಬಸ್ಥರಿಗೆ ನೀಡಲಿ ಎಂದು ಸಾಂತ್ವಾನ ಹೇಳಿದ್ದಾರೆ.
ಶಿವಮೊಗ್ಗದ ಮಂಜುನಾಥ್ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಕಳುಹಿಸಲಾಗಿದೆ. ಸುಮಾರು 9 ಗಂಟೆಯ ವೇಳೆಗೆ ಶಿವಮೊಗ್ಗ ತಲುಪಬಹುದು. ಮಂಜುನಾಥ್ ಪಾರ್ಥಿವ ಶರೀರ ದರ್ಶನಕ್ಕೆ ಬರುವ ಎಲ್ಲರಿಗೂ ಸರಿಯಾದ ವ್ಯವಸ್ಥೆ ಮಾಡಲಾಗಿದೆ. ಅರ್ಧ ದಿನ ಹೊಟೇಲ್, ಜ್ಯುವೆಲ್ಲರಿ ಶಾಪ್, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಮಾಲೀಕರು ನಿರ್ಧಾರ ಮಾಡಿದ್ದಾರೆ. ಸ್ವಯಂಪ್ರೇರಿತ ಬಂದ್ ಮಾಡಲು ನಿರ್ಧರಿಸಿದ್ದಾರೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದ್ದಾರೆ.
ಹಾವೇರಿಯ ಭರತ್ ಭೂಷಣ್ ಎಂಬುವವರು ಕೂಡ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಅವರ ಮೃತದೇಹವನ್ನು ತರಲಾಗಿದ್ದು, ಊರಿಗೆ ಕಳುಹಿಸಿಕೊಡುವ ವ್ಯವಸ್ಥೆಯಾಗಿದೆ. ಕಾಶ್ಮೀರವನ್ನು ನೋಡಬೇಕು, ಪಹಲ್ಗಾಮ್ ಅಂದವನ್ನು ಕಣ್ತುಂಬಿಕೊಳ್ಳಬೇಕೆಂದುಕೊಂಡು ಹೋಗಿದ್ದ ಮುಗ್ಧ ಜೀವಗಳು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಜೊತೆಗೆ ಹೋಗಿದ್ದ ಪುರುಷರನ್ನು ಮಾತ್ರ ಕೊಂದ ಉಗ್ರರು ಮೋದಿಗೆ ಹೋಗಿ ಹೇಳುವಂತೆ ತಾಕೀತು ಮಾಡಿದ್ದಾರೆ. ಹಿಂದೂ ಎಂದು ಗೊತ್ತಾದವರನ್ನೆಲ್ಲ ಗುಂಡಿಟ್ಟು ನೆಲಕ್ಕುರುಳಿಸಿದ್ದಾರೆ.











