ಗುಬ್ಬಿ, ಜೂನ್. 26 : ರೈತರು ಯಾರು ಸಹ ಆತಂಕ ಪಡುವುದು ಬೇಡ ನೀರು ಹರಿಸುವುದು ನಮ್ಮ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ತಾಲೂಕಿನ ಮಠದ ಹಳ್ಳಕೆರೆಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಮೊದಲು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಾವೇರಿ ಕೃಪೆಯಿಂದ ಎಲ್ಲ ಡ್ಯಾಮ್ ಗಳು ತುಂಬಿವೆ. ರಾಜ್ಯದ ಎಲ್ಲಾ ಮಂತ್ರಿಗಳಿಗೆ ಡ್ಯಾಮ್ ಭದ್ರತೆ ಬಗ್ಗೆ ಗಮನುಹರಿಸಲು ತಿಳಿಸಲಾಗಿದೆ. ಯಾರೇ ವಿರೋಧ ಮಾಡಿದರು ರೈತರಿಗೆ ಅನುಕೂಲ ಮಾಡುವುದು ನಮ್ಮ ಕೆಲಸ. ಕೋಲಾರ ತುಮಕೂರು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೆಲವು ಭಾಗಗಳಲ್ಲಿ ಅರಣ್ಯ ಭೂಮಿ ಸಮಸ್ಯೆ ಇದೆ. ತುಮಕೂರು ಮತ್ತು ಹಾಸನ ಡಿಸಿ ಅವರು ಜಾಗವನ್ನು ನೀಡಿದ್ದಾರೆ. ಆದಷ್ಟು ಬೇಗ ಕೆಲಸವನ್ನು ಪೂರ್ಣಗೊಳಿಸುತ್ತೇವೆ.
ಕೆಲವರು ಟೀಕೆ ಮಾಡುತ್ತಾರೆ ರೈತರ ಕಷ್ಟ ಏನು ಎಂಬುದು ಗೊತ್ತಿದೆ. ಭೂಮಿ ಪೂಜೆಯನ್ನು ಬಹಳ ಸಂತೋಷದಿಂದ ಮಾಡಿದ್ದೇನೆ. ಈ ಹಿಂದೆ ಕುಮಾರಸ್ವಾಮಿ ಅವರು ಎತ್ತಿನಹೊಳೆಯನ್ನು ಯಾವುದೇ ಕಾರಣಕ್ಕೂ ತರುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದರು. ಕೆಲಸ ಮಾಡಿ ತೋರಿಸಿದ್ದೇವೆ ಎಂದರು.
ಶಾಸಕ ಎಸ್ಆರ್ ಶ್ರೀನಿವಾಸ್ ಮಾತನಾಡಿ ಈ ಭಾಗದ ಜನರು ಸುಮಾರು 25 ವರ್ಷಗಳಿಂದ ನೀರಿಗಾಗಿ ಹೋರಾಟ ಮಾಡಿದ್ದಾರೆ. ಅನೇಕ ಬಾರಿ ಚುನಾವಣೆಗಳನ್ನು ಬಹಿಷ್ಕರಿಸಿದ್ದಾರೆ. ಇಂದು ರೈತರ ಹೋರಾಟಕ್ಕೆ ಫಲಸಿಕ್ಕಂತಾಗಿದೆ. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಿ ಮಠದ ಹಳ್ಳದ ಕೆರೆಗೆ ನೀರಹರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿಬಿ ಜಯಚಂದ್ರ ಮಾತನಾಡಿ ಸುಮಾರು 20 ವರ್ಷಗಳ ಮಂಜೂರಾತಿ ಯೋಜನೆಗೆ ಇಂದು ಚಾಲನೆ ಸಿಗುತ್ತಿರುವುದು ಬಹಳ ಸಂತೋಷದ ವಿಚಾರ. ತುಮಕೂರು ಜಿಲ್ಲೆಗೆ 24 ರಿಂದ 25 ಟಿಎಂಸಿ ನೀರು ಬೇಕಾಗಿದೆ. ಆದರೆ ಇಂದಿನವರೆಗೂ ಸಹ 20 ಟಿಎಂಸಿ ಮೇಲೆ ನೀರು ಹರಿದಿಲ್ಲ. ನಮ್ಮ ಜಿಲ್ಲೆಗೆ ಸಂಪೂರ್ಣ ನೀರು ಬಂದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಿರಣ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಉಪಾಧ್ಯಕ್ಷ ಶಂಕರನಂದ್, ತಾಲೂಕು ಅಧ್ಯಕ್ಷ ಕೆಆರ್ ವೆಂಕಟೇಶ್, ನಲ್ಲೂರು ಗ್ರಾ ಪಂ ಅಧ್ಯಕ್ಷ ಜಯಮ್ಮ ಶಿವಣ್ಣ, ಪಿಡಿಒ ರಾಜೇಂದ್ರ ಪ್ರಸಾದ್, ಮುಖಂಡರಾದ ಗುರು ರೇಣುಕಾರದ್ಯ, ಹೊಸಕೆರೆ ಬಾಬು, ಮಂಚಲದೊರೆ ರಮೇಶ್, ಸಾತೇನಹಳ್ಳಿ ರಮೇಶ್, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಆಜು ಬಾಜು ಗ್ರಾಮಸ್ಥರು ಹಾಜರಿದ್ದರು.











