Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಮಗ್ರ ನೀರಾವರಿ ಜಾರಿ ಹೋರಾಟ ಸಮಿತಿ ಗುರಿ : ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ

---Advertisement---

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 10 : ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಾಧ್ಯವೇ ಇಲ್ಲವೆಂಬ ಕಾಲಘಟ್ಟದಲ್ಲಿ ಹೋರಾಟ ಸಮಿತಿ ರಚಿಸಿಕೊಂಡು, ಸರ್ಕಾರಕ್ಕೆ ನೀರಿನ ಲಭ್ಯತೆ ಕುರಿತು ಮಾಹಿತಿ ನೀಡಿ ಅಸಾಧ್ಯವಾದದನ್ನು ಸಾಧಿಸಿದ ಈ ಕ್ಷಣ ನಿಜಕ್ಕೂ ರೋಮಾಂಚನವೆಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಹೇಳಿದರು.

ಗೋನೂರು ಬಳಿ ಭದ್ರೆ ನೀರು ಹರಿಯುವ ಸ್ಥಳದಲ್ಲಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಗುರುವಾರ ಆಯೋಜಿಸಿದ್ದ ಪೂಜಾ ಕಾರ್ಯಕ್ರಮ ಹಾಗೂ ಸಮಗ್ರ ನೀರಾವರಿ ಯೋಜನೆ ಜಾರಿ 2ನೇ ಹಂತದ ಹೋರಾಟದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದಲ್ಲಿಯೇ ಬೃಹತ್ ಮೊತ್ತದ್ದಾಗಿದೆ. ಅನೇಕ ಅಡ್ಡಿ ಆತಂಕಗಳ ಮಧ್ಯೆಯೂ ಯೋಜನೆ ಜಾರಿಗೊಂಡು ನೀರು ಹರಿಯುತ್ತಿರುವುದು ಅತ್ಯಂತ ಸಂತಸದ ಕ್ಷಣ. 5 ಲಕ್ಷ ಎಕರೆ ಭೂಮಿಗೆ ನೀರು ಉಣಿಸುವ ಯೋಜನೆ ಆಗಿದೆ. ಆದರೆ, ಇನ್ನಷ್ಟು
ಕೆರೆ-ಕಟ್ಟೆಗಳು, ತಾಲ್ಲೂಕುಗಳು ಯೋಜನೆ ವ್ಯಾಪ್ತಿಯಿಂದ ಕೈಬಿಟ್ಟಿದ್ದು ಈ ನಿಟ್ಟಿನಲ್ಲಿ ಮತ್ತೊಂದು ಹಂತದ ಹೋರಾಟ ಅಗತ್ಯವಿದೆ ಎಂದರು.

ಆಂಧ್ರ ಪ್ರದೇಶ ನೀರಾವರಿ ಯೋಜನೆ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಲೋಕಸಭೆಯಲ್ಲಿ ಭದ್ರಾ
ಯೋಜನೆ ಕುರಿತು ಧ್ವನಿಯೆತ್ತಿದ ಸಂದರ್ಭ ಆಂಧ್ರಪ್ರದೇಶದಲ್ಲಿ ಹುಟ್ಟಿದ ನೀವು ನಮ್ಮ ಪರ
ಧ್ವನಿಯೆತ್ತಬೇಕೆಂದು ಆಗ್ರಹಿಸಿದ್ದರು. ಆದರೆ, ನನ್ನ ಹುಟ್ಟು ಆಂಧ್ರವಾಗಿದ್ದರೂ ಕರ್ಮಭೂಮಿ ಕನ್ನಡವಾಗಿದೆ ಎಂದು ಹೇಳಿದ್ದೇ ಎಂದು ತಿಳಿಸಿದರು.

 

ಯೋಜನೆ ಜಾರಿಗೊಂಡು ನೀರು ಹರಿಯುತ್ತಿದ್ದರೂ ಇನ್ನಷ್ಟು ಕೆಲಸಗಳು ಆಗಬೇಕಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳು ಯೋಜನೆ ವ್ಯಾಪ್ತಿಗೆ ಸೇರಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ
ಮುಂದುವರಿಸಬೇಕಿದೆ ಎಂದರು. ರಾಜ್ಯ-ಕೇಂದ್ರ ಸರ್ಕಾರಗಳು ಯೋಜನೆ ವಿಷಯದಲ್ಲಿ ಬದ್ಧತೆ ಪ್ರದರ್ಶಿಸಬೇಕು. ಸಕಾಲಕ್ಕೆ
ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಿ, ಬಯಲುಸೀಮೆ ಪ್ರದೇಶವನ್ನು ಸಂಪೂರ್ಣ
ಹಸಿರನ್ನಾಗಿಸಲು ಮುಂದಾಗಬೇಕು. ಕೇಂದ್ರ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳಬೇಕೆಂದು
ಆಗ್ರಹಿಸಿದರು.

 

ಸಮಿತಿ ಹಿರಿಯ ಮುಖಂಡ ಬೇಡರರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಹೋರಾಟದ ಆರಂಭದಲ್ಲಿ ಜನಬೆಂಬಲ ದೊರೆಯಲಿಲ್ಲ. ಆದರೂ ಸುಧೀರ್ಘ ಚಳವಳಿ ಪರಿಣಾಮ ಯೋಜನೆ ಜಾರಿಗೊಂಡಿದೆ. ಮೊಳಕಾಲ್ಮೂರು ಸೇರಿ ಇನ್ನಷ್ಟು ತಾಲ್ಲೂಕುಗಳ ಕೆರೆಗೆ ನೀರು ಹರಿಯಬೇಕಿದೆ. ಈ ನಿಟ್ಟಿನಲ್ಲಿ ಮತ್ತೊಂದು ಹಂತದ ಚಳವಳಿ ಅಗತ್ಯವೆಂದು ಹೇಳಿದರು.
ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ನಾವು ಹೋರಾಟದಲ್ಲಿ ಇರಲಿಲ್ಲ. ಆದರೆ, ಚಳವಳಿಯಲ್ಲಿ ಪಾಲ್ಗೊಂಡು ಸಾರ್ಥಕತೆ ಕಂಡುವರನ್ನು ಗೌರವಿಸುವ ಗುಣ ಹೊಂದಿದ್ದೇವೆ. ಎಲ್ಲ ಚಳವಳಿಗಾರರನ್ನು ಪೀಠದ ವತಿಯಿಂದ ಗೌರವಿಸಲು ಶೀಘ್ರ
ಕ್ರಮಕೈಗೊಳ್ಳಲಾಗುವುದು ಎಂದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಎಂದಾಕ್ಷಣ ಅಸಾಧ್ಯವೆಂಬ ಮನೋಭಾವನೆ ಜನರಲ್ಲಿತ್ತು. ಅದನ್ನು ಅನುಷ್ಠಾನಕ್ಕೆ ತರುವಲ್ಲಿ
ಹೋರಾಟಗಾರರು, ಮಠಾಧೀಶರ ಬದ್ಧತೆ ಕಾರಣವಾಗಿದೆ ಎಂದು ತಿಳಿಸಿದರು.

ಹೋರಾಟದ ಹಾದಿಯಲಿ ಬದುಕನ್ನೇ ಸಮರ್ಪಿಸಿದವರನ್ನು ನಾವೆಲ್ಲರೂ ಸ್ಮರಿಸಬೇಕಾಗಿದೆ. ಮುಖ್ಯವಾಗಿ ರೈತರು ಕೃಷಿ ಭೂಮಿ ಗುತ್ತಿಗೆ ನೀಡುವ ಪದ್ಧತಿ, ಮಾರಾಟದ ಮನಸ್ಥಿಯಿಂದ
ಹೊರಬಂದು, ಸ್ವಂತ ಉಳುಮೆ ಮಾಡಲು ಮುಂದಾಗಬೇಕು ಎಂದರು.

ರ‍ಟ್ಟಿಹಳ್ಳಿ ರವಿಕುಮಾರ್, ಲಕ್ಷಿ್ಮೀಕಾಂತ್, ಮಲ್ಲಿಕಾರ್ಜುನ್,
ಕೆ.ಟಿ.ತಿಪ್ಪೇಸ್ವಾಮಿ, ಎಂ.ಡಿ.ರವಿ, ಜೆ.ಯಾದವರೆಡ್ಡಿ, ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಹೋರಾಟ ಸಮಿತಿ ಚಳವಳಿ ಹಾದಿ ಹಾಗೂ ಹೋರಾಟಗಾರರನ್ನು ಸದಾ ಸ್ಮರಿಸುವ ಗುಣ
ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಸಮಗ್ರ ನೀರಾವರಿ ಜಾರಿಗೆ ಹೋರಾಟ ಕೈಗೆತ್ತಿಕೊಳ್ಳಬೇಕೆಂದು ತಿಳಿಸಿದರು.

ಪಾದಗಳಿಗೆ ನಮನ :
ಬರಡು ನೆಲವನ್ನು ಹಸಿರುಗೊಳಿಸಲು ಹೋರಾಟ ನಡೆಸಿದವರ ಪಾದಗಳಿಗೆ ನಾವೆಲ್ಲರೂ ನಮಿಸಬೇಕು.
ಅವರ ಹೆಸರು ಹೇಳಿಕೊಂಡು ಕೃಷಿಚಟುವಟಿಕೆ ಕೈಗೊಂಡು ಉನ್ನತಿ ಸಾಧಿಸಬೇಕು ಎಂದು ಎಂಎಎಲ್ಸಿ ಕೆ.ಎಸ್.ನವೀನ್ ತಿಳಿಸಿದರು. ಮುಖ್ಯವಾಗಿ ಅಗಲಿದ ಚೇತರಿಗೆ ನಮನ
ಸಲ್ಲಿಸಬೇಕು. ಈಗ ಅರ್ಧ ಗೆಲುವು ಸಾಧಿಸಿದ್ದು, ಇನ್ನರ್ಧ ಸಾಧನೆಗೆ ನಾವೆಲ್ಲರೂ ಸಮಿತಿ ಜೊತೆಗೆ ಹೆಜ್ಜೆ ಹಾಕಬೇಕಿದೆ ಎಂದರು. ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ 5,300 ಕೋಟಿ
ರೂ. ಬಿಡುಗಡೆಗೆ ಅಗತ್ಯ ಕ್ರಮಕೈಗೊಳ್ಳುತ್ತಿದೆ ಹಾಗೂ ನೇರ ರೈಲ್ವೆ ಮಾರ್ಗ ಪ್ರಗತಿಯಲ್ಲಿದೆ. ಈ ಎರಡು ಯೋಜನೆಗಳು 2028ರೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.

 

ಈಗ ಜ್ಞಾನೋದಯ :
ಹೋರಾಟದ ಆರಂಭದಲ್ಲಿ ಬೀದಿಗಿಳಿಯದವರು ಜಿಲ್ಲೆಗೆ ಭದ್ರೆ ನೀರು ಹರಿಯುತ್ತಿದ್ದಂತೆ ನಮ್ಮೂರಿನ ಕೆರೆಗೆ ನೀರು ಬರುತ್ತಿಲ್ಲವೆಂದು ಚಳವಳಿ ನಡೆಸೋಣಾವೆಂದು
ಕರೆಯುತ್ತಿದ್ದಾರೆ. ಈ ಜ್ಞಾನೋದಯ ಆರಂಭದಲ್ಲಿದ್ದಿದ್ದರೇ ಸಮಗ್ರ ನೀರಾವರಿ ಕಲ್ಪನೆ ಸಾಕಾರಗೊಳ್ಳುತ್ತಿತ್ತು ಎಂದು ಸಮಿತಿಯ ಮುಖಂಡ ಈಚಘಟ್ಟ ಸಿದ್ದವೀರಪ್ಪ ಹೇಳಿದರು.

ಹೆಸರಿಡಿ : ನೀರಾವರಿ ಹೋರಾಟಕ್ಕಾಗಿ ಬದುಕನ್ನೇ ಮೀಸಲಿಟ್ಟ ಪಿ.ಕೋದಂಡರಾಮಯ್ಯ, ಎಂ.ಜಯಣ್ಣ, ಮುರುಘ ರಾಜೇಂದ್ರ ಒಡೆಯರ್ ಅವರ ಹೆಸರನ್ನು ಯೋಜನೆ ಹಾಗೂ ಕಾಲುವೆಗೆ ನಾಮಕರಣ ಮಾಡಲು ಸರ್ಕಾರ
ಮುಂದಾಗಬೇಕು. ಈ ಮೂಲಕ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕೆಲಸ ಆಗಬೇಕಿದೆ ಎಂದು ಬಸವರೆಡ್ಡಿ, ಎಸ್.ಕೆ.ಬಸವರಾಜನ್, ಎಂ.ಡಿ.ರವಿ ಸೇರಿ ಅನೇಕರು ಒತ್ತಾಯಿಸಿದರು.

ನೀರು ಬರುತ್ತೇಂಬುದು ಕನಸು ಇರಲಿಲ್ಲ. ಆದರೆ, ಈಗ ನಮ್ಮ ಕಣ್ಣೇದುರಿಗೆ ನೀರು ಧುಮ್ಮುಕ್ಕುತ್ತಿರುವುದು ಕಂಡರೇ ರೋಮಾಂಚನವಾಗುತ್ತದೆ. ಈ ಸಂದರ್ಭ ಎಂ.ಜಯಣ್ಣ, ಒಡೆಯರ್ ಸೇರಿ ಅನೇಕರು ಇರಬೇಕಿತ್ತು. ನೀರು ಹರಿಯುವ ಸುಂದರ ಕ್ಷಣ ಕಣ್ತುಂಬಿಕೊಳ್ಳುವ ಭಾಗ್ಯ ನಮ್ಮದಾಗಿದೆ ಎಂದು ಕಬೀರಾನಂದ ಮಠದ ಶ್ರೀ ಶಿವಾಲಿಂಗಾನಂದ ಸ್ವಾಮೀಜಿ ಹೇಳಿದರು.

ಸಮಿತಿ ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ಜೋಗಿಮಟ್ಟಿ ಮಹೇಶಬಾಬು, ಮುಖಂಡರಾದ ಪ್ರಸನ್ನ ಎಂ.ಜಯಣ್ಣ, ಬಾಗೇನಾಳ್ ಕೊಟ್ರಬಸಪ್ಪ, ವೆಂಕಟೇಶ್, ದಗ್ಗೆ ಶಿವಪ್ರಕಾಶ್, ಸಿ.ಶಿವುಯಾದವ್, ಕೂನಿಕೆರೆ ರಾಮಣ್ಣ, ಡಿ.ಸಿ.ನಾಗರಾಜ್,
ಮುದ್ದಪುರ ನಾಗರಾಜ್, ಹಂಪಯ್ಯನಮಾಳಿಗೆ ಬಸವರಾಜ್, ಎಚ್.ಲಕ್ಷ್ಮಣ್, ವೀರೇಂದ್ರ ಕೋಗುಂಡೆ ಮಠ, ಪಾಂಡುರಂಗಪ್ಪ, ಗೌನಹಳ್ಳಿ ಗೋವಿಂದಪ್ಪ, ಟಿ.ಎಂ.ಪ್ರದೀಪ್‌ಕುಮಾರ್, ಮಲ್ಲಿಕಾರ್ಜುನ್, ರೆಡ್ಡಿಹಳ್ಳಿ ವೀರಣ್ಣ, ಟಿ.ಮಂಜಣ್ಣ, ದಯಾನಂದ್, ರೇವಣ್ಣಸಿದ್ದಪ್ಪ,
ಮುಂಗಸವಳ್ಳಿ ಪ್ರಕಾಶ್, ಸಂಪತ್‌ಕುಮಾರ್, ಗುರುಮೂರ್ತಿ, ರಾಜಣ್ಣ, ಕೆಪಿಎಂ ಗಣೇಶಯ್ಯ, ಮಲ್ಲೇಶ್ ಇತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now