ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕಾಳಗ ದೊಡ್ಡ ಮಟ್ಟಕ್ಕೆ ನಡೆಯುತ್ತಲೆ ಇದೆ. ಅದರಲ್ಲೂ ನಾನು ಕೊಡೆ ನೀನು ಬಿಡೆ ಎಂಬ ಮಟ್ಟಕ್ಕೆ ಹೋಗಿದೆ. ಹೀಗಿರುವಾಗ ಇದರ ನಡುವೆ ಸಂಧಾನ, ಸಮಾಧಾನದ ವಿಚಾರಗಳು ನಡೆಯುತ್ತಿವೆ. ಇದೀಗ ಸಿ.ಎಂ ಇಬ್ರಾಹಿಂ ಕೂಡ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಇಬ್ರಾಹಿಂ ಅವರು, ಸಿದ್ದರಾಮಯ್ಯ ಅವರು ದೇವೇಗೌಡರಿಂದ ಹೊರಗೆ ತಂದು ಮೈಸೂರಿನಲ್ಲಿ 225 ವೋಟ್ ನಿಂದ ಗೆಲ್ಲಿಸಿ. ಮತ್ತೆ ಚಾಮುಂಡಿಯಲ್ಲಿ ಸೋತವ್ರೆ ಅಂತ ಗೊತ್ತಾದಾಗ ಬಾದಾಮಿಗೆ ಕರೆದುಕೊಂಡು ಹೋದರು. ಅಂದು ಅವರು ಗೆಲ್ಲಿಸಿ ಇಂದು ಮುಖ್ಯಮಂತ್ರಿ ಆಗಿದ್ದಾರೆ. ನಾವೂ ಮನೆ ಕಟ್ಟುತ್ತಾ ಇದ್ದೀವಿ. ಮನೆ ಕಟ್ಟಿದ ಮೇಲೆ ಕಟ್ಟಿದವರು ಹೊರಗೆ ಹೊರಗಿನವರು ಒಳಗೆ.
ಇವತ್ತು ಈ ರಾಜ್ಯದಲ್ಲಿ ಒಬ್ಬ ದಲಿತ, ಒಬ್ಬ ಮುಸಲ್ಮಾನ ಮುಖ್ಯಮಂತ್ರಿ ಆಗಬೇಕು ಅಂತ ಯಾವುದೇ ರಾಜಕೀಯ ಪಕ್ಷ ಬಾಯ್ಬಿಟ್ಟು ಹೇಳುವುದಕ್ಕೂ ತಯಾರಿಲ್ಲ. ಮಾಡದೆ ಇದ್ದರು ಪರವಾಗಿಲ್ಲ ಸ್ಯಾಂಪಲ್ ಆದರೂ ಹೇಳ್ಬೇಕು ಅಲ್ವಾ. ಆಮೇಲೆ ಅವರ ಶೋಕೇಸ್ ನಲ್ಲಿ ಇಡುವ ಪೀಸ್ ಗಳನ್ನ ನೋಡಿದ್ರೆ ಹೆಸರಿಗೆ ಮಾತ್ರ ಆ ಜಾತಿ. ಇವತ್ತು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಕೂಡ ಹಂಚಿಕೊಂಡಂತೆ ಕಾಣಿಸ್ತಾ ಇದೆ. ಐದು ವರ್ಷ ನಮಗೆ ಐದು ವರ್ಷ ನಿಮಗೆ ಅಂತ. ನಾನು ಹೊಡೆದಂಗೆ ಮಾಡ್ತೀನಿ ನೀನ್ ಅತ್ತಂಗೆ ಮಾಡು ಎಂಬಂತೆ. ಸಮರ್ಥವಾದಂತ ವಿರೋಧ ಪಕ್ಷವೂ ಇಲ್ಲ, ಸಮರ್ಥವಾದಂತ ಆಡಳಿತ ಪಕ್ಷವೂ ಇಲ್ಲ. ಈ ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿ ನಾನಾಗಬೇಕಾ..? ನೀನಾಗಬೇಕಾ..? ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಪಾಂಚಾಲಿ ಥರ ಆಗಿದೆ. ಯಾರು ಗಂಡ ಅಂತ ಹೇಳುವುದಕ್ಕೆ ಆಗ್ತಿಲ್ಲ. ಹೈಕಮಾಂಡ್ ಹೇಳಿಬಿಟ್ರು ನೀನು ನೀನು ಅಂತ ಎಂದು ವ್ಯಂಗ್ಯವಾಡಿದ್ದಾರೆ.





