ಕಲಬುರಗಿಜುಲೈ.07: ರಾಜ್ಯದಲ್ಲಿ ದೀರ್ಘಾವಧಿಯಿಂದ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವ ಬಂದಿಖಾನೆ ಹಾಗೂ ಗೃಹ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆಯನ್ನು ನಿಯಮಾನುಸಾರ ನಡೆಸಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ದಿಢೀರ್ ವರ್ಗಾವಣೆ ಪ್ರಕ್ರಿಯೆ ಕೈಗೊಂಡರೆ ಸಿಬ್ಬಂದಿಗಳು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇರುವುದರಿಂದ, ಈ ತಿಂಗಳ ಅಂತ್ಯದೊಳಗೆ ಹೊಸ ನಿಯಮಾವಳಿಗಳನ್ನು ರೂಪಿಸಿ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು ತಿಳಿಸಿದ್ದಾರೆ.
ಹಲವು ಪೊಲೀಸ್ ಸಿಬ್ಬಂದಿ ಎಕ್ಸಿಕ್ಯೂಟಿವ್ ಹಾಗೂ ನಾನ್-ಎಕ್ಸಿಕ್ಯೂಟಿವ್ ವಿಭಾಗಗಳಲ್ಲಿ ಬಹಳ ದಿನಗಳಿಂದ ಮುಂದುವರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಸಿಯಿಂದ ಐಪಿಎಸ್ ದರ್ಜೆಯವರೆಗಿನ ಅಧಿಕಾರಿಗಳ ವರ್ಗಾವಣೆ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ ಕುರಿತು ಮಾತನಾಡಿದ ಸಚಿವರು, ಕೇವಲ ಭೌಗೋಳಿಕ ವ್ಯಾಪ್ತಿಯನ್ನು ಪರಿಗಣಿಸದೇ ಆಯಾ ಪ್ರದೇಶಗಳಲ್ಲಿನ ಅಪರಾಧಗಳ ಪ್ರಮಾಣವನ್ನು ಆಧರಿಸಿ ಹೊಸ ಠಾಣೆಗಳನ್ನು ಮಂಜೂರು ಮಾಡಲಾಗುವುದು ಎಂದರು.
ಕಮಿಷನರೇಟ್ ವ್ಯಾಪ್ತಿಯಲ್ಲೂ ಇದೇ ನಿಯಮದಡಿ ಹೊಸ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇನ್ನು ಮಂತ್ರಿಮಂಡಲದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಹೈಕಮಾಂಡ್ ಮುಂದೆ ಸದಾ ಬೇಡಿಕೆ ಇರುತ್ತದೆ. ನಮ್ಮ ಭಾಗದಿಂದ ಯಾರೇ ಸಚಿವರಾದರೂ ಅದು ಈ ಭಾಗದ ಹೆಚ್ಚಿನ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
















