ಸುದ್ದಿಒನ್, ಚಿತ್ರದುರ್ಗ, ಜುಲೈ. 29 : ಚಿತ್ರದುರ್ಗದ ಕಲ್ಲಿನ ಕೋಟೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಕೋಟೆಯನ್ನು ವೀಕ್ಷಿಸಲು ಬಂದ ಪ್ರವಾಸಿಗರು ಕೋಟೆಯ ರಮಣೀಯ ದೃಶ್ಯಗಳನ್ನು ಕಂಡು ಮೈಮರೆಯುತ್ತಾರೆ. ಆದರೆ ಕೆಲವೊಮ್ಮೆ ಪ್ರವಾಸಿಗರ ಅಜಾಗರೂಕತೆಯಿಂದ ಅಥವಾ ಆಯತಪ್ಪಿ ಬೆಟ್ಟದ ಮೇಲಿಂದ ಬಿದ್ದು ಸಣ್ಣಪುಟ್ಟ ಗಾಯಗಳಾಗುತ್ತವೆ.
ಇಂತಹುದೇ ಘಟನೆ ಇಂದು ಕೋಟೆಯಲ್ಲಿ ನಡೆದಿದೆ. ಸಂಜೆ 6 ಗಂಟೆ ಸಮಯದಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕ್ಕಟಾನೂರು ಗ್ರಾಮದ ಧರೆಯಪ್ಪ ಕುಮಟಗಿ (21 ವರ್ಷ) ಎಂಬ ಪ್ರವಾಸಿರೊಬ್ಬರು ಕೋಟೆಯ ಸೌಂದರ್ಯವನ್ನು ಸವಿಯುತ್ತಾ ಕಾಲುಜಾರಿ ಬಿದ್ದಿದ್ದಾರೆ. ತುಪ್ಪದ ಕೊಳ ಹತ್ತುವ ಸಂದರ್ಭದಲ್ಲಿ ಕಾಲು ಜಾರಿ ಸುಮಾರು 20 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಪ್ರವಾಸಿ ಮಿತ್ರರು ಮತ್ತು sis ಸೆಕ್ಯೂರಿಟಿಗಳು ಪ್ರವಾಸಿಗನನ್ನು ರಕ್ಷಣೆ ಮಾಡಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆರೋಗ್ಯವಾಗಿದ್ದಾರೆಂದು ಪ್ರವಾಸಿ ಮಿತ್ರರು ಸುದ್ದಿಒನ್ ಗೆ ತಿಳಿಸಿದ್ದಾರೆ.
ಕಾಲುಜಾರಿ ಬಿದ್ದ ಪ್ರವಾಸಿಗ ಧರೆಯಪ್ಪ ಕುಮಟಗಿ ಅವರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ sis ಸೆಕ್ಯೂರಿಟಿಗಳಾದ ಚಿದಾನಂದ, ಸುರೇಶ, ಹನುಮಂತ, ಸುನಿಲ್ ಕುಮಾರ್, ಆನಂದ, ನವೀನ್, ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿಗಳಾದ
ಆರ್ ಮಹೇಶ್, ಎಂ ಜಿ ಅಭಿಲಾಶ್, ತಿಪ್ಪೇಸ್ವಾಮಿ, ದಾದಾಪೀರ್, ನವೀನ್ ಕುಮಾರ್, ಡಿ.ಶಂಕರ್ ಹಾಗೂ ಎಸ್, ಮಂಜುನಾಥ ಅವರು ಶ್ರಮಿಸಿದ್ದಾರೆ.

