
ಚಿತ್ರದುರ್ಗ. ಏ.24: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ ಶೇ.92.25 ರಷ್ಟು ಫಲಿತಾಂಶ ಲಭಿಸಿದೆ. ಜಿಲ್ಲೆಯಲ್ಲಿ ಒಟ್ಟು 21,054 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, ಈ ಪೈಕಿ 19,423 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10,336 ಬಾಲಕರ ಪೈಕಿ 9,234 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, 10,718 ಬಾಲಕಿಯರ ಪೈಕಿ 10,189 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಬಾಲಕಿಯರು ಮೈಲುಗೈ ಸಾಧಿಸಿದ್ದಾರೆ.
2024-25ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ ಜಿಲ್ಲೆಗೆ ಶೇ.63.21 ಫಲಿತಾಂಶ ದೊರಕಿತ್ತು. ನಂತರ ಜರುಗಿದ 2 ಮತ್ತು 3ನೇ ವಾರ್ಷಿಕ ಪರೀಕ್ಷೆಗಳ ನಂತರ ಜಿಲ್ಲೆಯ ಶೇಡವಾರು ಪ್ರಮಾಣ ಶೇ.70.45ಕ್ಕೆ ಏರಿಕೆಯಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ 2025-26ನೇ ಸಾಲಿನಲ್ಲಿ ಶೇ.21.8 ರಷ್ಟು ಫಲಿತಾಂಶ ಹೆಚ್ಚಳ ಕಂಡಿದೆ. ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ 27ನೇ ಸ್ಥಾನ ಪಡೆದಿದೆ.
ಜಿಲ್ಲೆಯ ತಾಲ್ಲೂಕುಗಳ ಪೈಕಿ ಚಳ್ಳಕೆರೆ ತಾಲ್ಲೂಕು ಶೇ.95.15, ಹೊಳಲ್ಕೆರೆ ಶೇ.94.26, ಮೊಳಕಾಲ್ಮೂರು ಶೇ.93.12, ಹಿರಿಯೂರು ಶೇ.93.06, ಹೊಸದುರ್ಗ ಶೇ.91.23, ಚಿತ್ರದುರ್ಗ 88.90, ರಷ್ಟು ಫಲಿತಾಂಶ ಪಡೆದಿವೆ.
ಸರ್ಕಾರಿ ಶಾಲೆಗಳು ಶೇ.92.81, ಅನುದಾನಿತ ಶಾಲೆಗಳು ಶೇ.90.08 ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಶೇ.94.46 ರಷ್ಟು ಫಲಿತಾಂಶ ದಾಖಲಿಸಿವೆ. ಗ್ರಾಮೀಣ ಪ್ರದೇಶದ ಶಾಲೆಗಳ ಮಕ್ಕಳು ಶೇ.92.93, ನಗರ ಪ್ರದೇಶದ ಮಕ್ಕಳು ಶೇ.90.68 ರಷ್ಟು ಉತ್ತೀರ್ಣಗೊಂಡಿದ್ದು, ನಗರ ಪ್ರದೇಶಕ್ಕೆ ಹೊಲಿಸಿದರೆ ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ಸಾಧನೆ ತೋರಿದ್ದಾರೆ. ಜಿಲ್ಲೆಯ ಒಟ್ಟು 134 ಶಾಲೆಗಳು ಶೇ.100 ರಷ್ಟು ಉತ್ತೀರ್ಣ ಫಲಿತಾಂಶ ದಾಖಲಿಸಿವೆ.
ಒಟ್ಟು 247 ವಿದ್ಯಾರ್ಥಿಗಳು 625ಕ್ಕೆ 600 ಹೆಚ್ಚು ಅಂಕಗಳನ್ನು ಪಡೆದಿದ್ದು, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನ ಶ್ರೀ ಶಾರದಾ ನ್ಯಾಷಿನಲ್ ಹೈಸ್ಕೂಲ್ ವಿದ್ಯಾರ್ಥಿನಿ ದರ್ಶಿನಿ.ಕೆ.ಆರ್ 652ಕ್ಕೆ 621 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಹಿರಿಯೂರು ನಗರದ ರಾಷ್ಟಿçÃಯ ಅಕಾಡೆಮಿ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಾದ ಸಮನ್ವಿತ.ಎಸ್.ಆರ್, ಪತ್ರೀಕ್ಷಾ.ಎನ್ ಸಜ್ಜನ್ ಹಾಗೂ ಸೂರಜ್.ಎನ್ 625ಕ್ಕೆ 620 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹೊಸದುರ್ಗ ಕುವೆಂಪು ನಗರದ ಎಂ.ಪಿ.ಪ್ರಕಾಶ್ ಹೈಸ್ಕೂಲ್ ವಿದ್ಯಾರ್ಥಿ ಸೃಜನ್.ಎಸ್.ವಿ ಹಾಗೂ ಮೊಳಕಾಲ್ಮೂರಿನ ಪಟ್ಟಣದ ಆದರ್ಶ ವಿದ್ಯಾಲಯದ ಚೈತನ್ಯ.ಎಸ್.ಆರ್ 625ಕ್ಕೆ 619 ಅಂಕಗಳಿಸುವ ಮೂಲಕ ಜಿಲ್ಲೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಚಿತ್ರದುರ್ಗ ನಗರದ ಮೆದೆಹಳ್ಳಿಯ ಶ್ರೀ ಸಿದ್ದೇಶ್ವರ ಪ್ರೌಢಶಾಲೆ ಶೂನ್ಯ ಫಲಿತಾಂಶ ದಾಖಲಿಸಿದ್ದು, ಶಾಲೆಯಿಂದ ಪರೀಕ್ಷೆ ಹಾಜರಾದ 16 ವಿದ್ಯಾರ್ಥಿಗಳು ಅನುತ್ತೀರ್ಣ ಹೊಂದಿದ್ದಾರೆ.
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷಾ ವೇಳೆ ವೆಬ್ ಕಾಸ್ಟಿಂಗ್ ಮಾಡಲಾಗಿದೆ. ವಿದ್ಯಾರ್ಥಿಯು ಆಂತರಿಕ ಅಂಕ ಮತ್ತು ಬಾಹ್ಯ ಅಂಕಗಳು ಸೇರಿ ಶೇ.33 ರಷ್ಟು ಅಂಕಗಳಿಸಿದರೆ ಉತ್ತೀರ್ಣ ಎಂದು ಘೋಷಿಸಲಾಗಿದೆ. 625ಕ್ಕೆ 206.25 ಅಂಕ ಗಳಿಸಿದ ಎಲ್ಲರೂ ಉತ್ತೀರ್ಣರಾಗುತ್ತಾರೆ. ರಾಜ್ಯದಲ್ಲಿ ಕಳೆದ ವರ್ಷದ ಫಲಿತಾಂಶಕ್ಕಿAತ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾದ ಜಿಲ್ಲೆಗಳ ಪೈಕಿ ಚಿತ್ರದುರ್ಗ 3ನೇ ಸ್ಥಾನದಲ್ಲಿದೆ. ಜಿಲ್ಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ ಕಂಡಿದೆ. ಗ್ರಾಮೀಣ ಪ್ರದೇಶ ಮಕ್ಕಳು ಹಾಗೂ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿರುವುದು ಸಂತೋಷದ ವಿಷಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶ ಕುಸಿದಿದ್ದಕ್ಕೆ ಸಾಕಷ್ಟು ಆಕ್ಷೇಪಗಳು ಕೇಳಿ ಬಂದಿದ್ದವು. ಫಲಿತಾಂಶ ಸುಧಾರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಮುಖ್ಯವಾಗಿ ಪೋಷಕರು ಹಾಗೂ ಶಿಕ್ಷಕರ ಮಹಾಸಭೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಉತ್ತೇಜಿಸಲಾಗಿದೆ. ಶಿಕ್ಷಕರ ಹುದ್ದೆ ಖಾಲಿಯಿರುವ ಕಡೆ ಅತಿಥಿ ಶಿಕ್ಷಕರನ್ನು ನೇಮಿಸಿ ಶಿಕ್ಷಕರ ಕೊರತೆ ಹೋಗಲಾಡಿಸಲಾಗಿದೆ. ರಾಜ್ಯದ ವಿವಿಧ ಸ್ಥಳಗಳಿಂದ ವಿಷಯವಾರು ಸಂಪನ್ಮೂಲ ಶಿಕ್ಷಕರನ್ನು ಕರೆಸಿ, ಬೋಧನೆ ತಂತ್ರಗಳ ಕುರಿತು ಪ್ರೌಢಶಾಲೆ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿತ್ತು. ಇದರ ಪರಿಣಾಮ ಜಿಲ್ಲೆಯಲ್ಲಿ ಉತ್ತೀರ್ಣರಾದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರೊಂದಿಗೆ ಪರೀಕ್ಷೆ ಎದುರಿಸಿದ 94 ವಿಶೇಷ ಚೇತನ ವಿದ್ಯಾರ್ಥಿಗಳ ಪೈಕಿ 77 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ವಿಶೇಷ ಎನಿಸಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್ ತಿಳಿಸಿದ್ದಾರೆ.
ಈ ಬಾರಿಯ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ ಫಲಿತಾಂಶದಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ 27ನೇ ಸ್ಥಾನ ಗಳಿಸಿದೆ. 2024-25ನೇ ಸಾಲಿನ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.70.45 ರಷ್ಟು ಇತ್ತು. ಈ ಬಾರಿ ಶೇ.92.25ಕ್ಕೆ ಹೆಚ್ಚಳವಾಗಿದೆ. ವಾರ್ಷಿಕ ಪರೀಕ್ಷೆ-2 ಮೇ.18 ರಿಂದ 25 ವರೆಗೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ತಿಳಿಸಿದ್ದಾರೆ.
==============



















