ಚಿತ್ರದುರ್ಗ | ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ | ಪರಸ್ಪರ ಮೊಳಗಿದ ಘೋಷಣೆ

2 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆಬ್ರವರಿ. 28 : ನಿನ್ನೆ ನಡೆದ ರಾಜ್ಯ ಸಭಾ ಚುನಾವಣೆಯ ನಂತರ ಡಾ.ಸೈಯದ್ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದನ್ನು ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು ಇಂದು ಕಾಂಗ್ರೆಸ್ ಕಚೇರಿಯನ್ನು ಮುತ್ತಿಗೆ ಹಾಕುವ ಯತ್ನವನ್ನು ನಡೆಸಿದರು ಮತ್ತು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಗರದ ಓಬವ್ವ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಕಾಂಗ್ರಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು.

ಈ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷದ ವಿರುದ್ದ ಘೋಷಣೆಗಳನ್ನು ಕೂಗಿ, ದೇಶ ದ್ರೋಹಿಗಳಿಗೆ ಬೆಂಬಲ ನೀಡುತ್ತಿದೆ. ನಮ್ಮ ದೇಶದ ಒಳಗಡೆ ಅವರಿಗೆ ಸಹಕಾರ ನೀಡುತ್ತಿದೆ ಎಂದು ಕೂಗಿದರು.

ರಸ್ತೆಯಲ್ಲಿ ಕೂಗುತ್ತಿದ್ದವರು ಈಗ ವಿಧಾನಸೌಧದಲ್ಲಿ ಇದ್ದಾರೆ. ಪಾಕಿಸ್ತಾನಿಯರು ವಿಧಾನಸೌಧ ಒಳಗೆ ಸೇರಿಕೊಂಡ ಕೀರ್ತೀ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಬಿಟ್ಟಿ ಗ್ಯಾರೆಂಟಿ ಭಾಗ್ಯಕ್ಕೆ ಮತ ನೀಡಿದ ಮಹಾನ್ ಮತದಾರರಿಗೆ ಸಲ್ಲುತ್ತದೆ ಕಾಂಗ್ರೆಸ್ ಸರ್ಕಾರದ ಹಿಂದೂ ನೀತಿಯನ್ನು ವಿರೋಧಿಸಿದರು. ಕಾಂಗ್ರೆಸ್ ಪಕ್ಷ ಈ ರೀತಿಯಾದ ಹಲವಾರು ವಿಷ ಜಂತುಳನ್ನು ಸಾಕಿಕೊಂಡಿದೆ. ಸೈಯದ್ ನಾಸೀರ್ ಹುಸೇನ್ ರವರ ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿತ ಉಗ್ರರೇ ಇರಬೇಕು ಎಂದು ದೂರಿದರು.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ಬಿಜೆಪಿ ವಿರುದ್ದ ಘೋಷಣೆಯನ್ನು ಕೂಗಿದರು.  ಭಾರತ್ ಮಾತಾ ಕೀ ಜೈ, ಕೋಮುವಾದಿ ಬಿಜೆಪಿಗೆ ಧಿಕ್ಕಾರ, ಮನುವಾದಿ ಬಿಜೆಪಿ ಪಕ್ಷಕ್ಕೆ ಧಿಕ್ಕಾರ ಎಂದರು. ಗಾಂಧೀಜಿಯವರನ್ನು ಕೊಂದ ಗೂಡ್ಸ್ ವಂಶದವರು ನೀವು ಭಯೋತ್ಸಾದಕರನ್ನು ಕಂದಹಾರನಲ್ಲಿ ಬಿಡುಗಡೆ ಮಾಡಿದವರು ನೀವು, ಪಾಕಿಸ್ತಾನದ ಪ್ರಧಾನ ಮಂತ್ರಿ ನಿವಾಸಕ್ಕೆ ಹೋಗಿ ಆಹಾರವನ್ನು ಸೇವನೆ ಮಾಡಿದವರು ನೀವು ಎಂದು ಬಿಜೆಪಿ ವಿರುದ್ದ ಪ್ರತಿದಾಳಿ ನಡೆಸಿದರು.

ಒಂದು ಹಂತದಲ್ಲಿ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿತು.
ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಅವರನ್ನು ತಳ್ಳಲು ಮುಂದಾದರು. ಈ ವೇಳೆ ಮಹಿಳಾ ಪೊಲೀಸ್ ಪೇದೆಯೊಬ್ಬರು ಕಾರ್ಯಕರ್ತರನ್ನು ಚದುರಿಸುವ ಬರದಲ್ಲಿ ಪ್ರತಿಭಟನಾಕಾರರನ್ನು ತಳ್ಳಿದ್ದರಿಂದ ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ನೆಲಕ್ಕೆ ಬಿದ್ದರು. ನೆಲಕ್ಕೆ ಬಿದ್ದ ಭಾರ್ಗವಿ ಕ್ಷಣ ಕಾಲ ಮೇಲೆ ಏಳಲಿಲ್ಲ. ಆನಂತರ ಅವರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ನರೇಂದ್ರ ಹೊನ್ನಾಳ್, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಯುವಮೋರ್ಚಾ ಮಂಡಲ ಅಧ್ಯಕ್ಷ ರಾಮು, ನವೀನ್, ವೀಣಾ, ಶೀಲಾ, ಶೈಲಜಾ ರೆಡ್ಡಿ, ಪವನ, ಪರಶುರಾಮ್, ಪಲ್ಲವಿ ಪ್ರಸನ್ನ, ರವಿ ಪೈಲೆಟ್, ಪ್ರಭು ಮತ್ತಿತರರಿದ್ದರು.

ಕಾಂಗ್ರೆಸ್ ಪಕ್ಷದಿಂದ ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಪ್ರಕಾಶ್ ಮೂರ್ತಿ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಮುದಸಿರ್, ನೇತಾಜಿ, ಲಕ್ಷ್ಮೀಕಾಂತ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *