ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ರೈತ ಸಹಕಾರಿ ಸಂಸ್ಥೆಯಾದ ಕೆ.ಓ.ಎಫ್ ಒಕ್ಕೂಟದಲ್ಲಿ 35ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ಮಹಾ ಸಭೆಯು ಇತ್ತೀಚೆಗೆ ನಡೆಯಿತು.
ಒಕ್ಕೂಟದ ಅಧ್ಯಕ್ಷರಾದ ಜಿ.ವಿ ಉದಯಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಮತ್ತು ಕೆ.ಒ.ಎಫ್-ಬೆಂಗಳೂರಿನ ಹಾಲಿ ಅಧ್ಯಕ್ಷರಾದ ವೆಂಕಟರಾವ್ ನಾಡಗೌಡರು ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಎಣ್ಣೆಬೀಜ ಬೆಳೆಯುವ ರೈತರಿಗೆ ಸಹಕಾರ ತತ್ವದ ಆದಾರದಲ್ಲಿ ಪ್ರಾಥಮಿಕ ಎಣ್ಣೆಬೀಜ ಸಹಕಾರ ಸಂಘಗಳ ಮತ್ತು ರೈತರ ಸರ್ವತೋಮುಖ ಅಭಿವೃದ್ದಿಯ ಬಗ್ಗೆ ಮಾರ್ಗದರ್ಶನ ನೀಡಿದರು.

ಸುರೇಶರೆಡ್ಡಿ, ಅಧ್ಯಕ್ಷರು ಕೆ.ಒ.ಎಫ್-ರಾಯಚೂರು, ಬಿ.ಟಿ.ಬೆನಕಟ್ಟೆ, ನಿರ್ದೇಶಕರು, ಕೆ.ಒ.ಎಫ್-ಹುಬ್ಬಳ್ಳಿ, ಡಾ. ಬಿ.ಮಂಜುನಾಥ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಚಿತ್ರದುರ್ಗ ಇವರನ್ನು ಸಭೆಗೆ ವಿಶೇಷ ಅಥಿತಿಗಳಾಗಿ ಆಹ್ವಾನಿಸಲಾಗಿತು. ಇವರು ಎಣ್ಣೆಕಾಳು ಬೆಳೆಯುವ ರೈತರಿಗೆ ಹೊಸ ಹೊಸ ತಳಿಗಳ (ಶೇಂಗಾ, ಸೂರ್ಯಕಾಂತಿ, ಔಡಲ/ಹರಳು, ತೊಗರಿ, ಇತ್ಯಾದಿ) ಬೀಜೋತ್ಪಾದನೆ ಮಾಡಿ ರೈತರು ಕೃಷಿಯಿಂದ ಹೇಗೆ ಲಾಭ ಪಡೆಯಬಹುದೆಂದು ವಿವರಿಸಿದರು.
ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಂ.ಜಯಕೃಷ್ಣ ಇವರು ಒಕ್ಕೂಟದ ಕಾರ್ಯಕ್ರಮ, ಸಾಧನೆ, ವ್ಯವಹಾರ, ಮುಂದಿನ ಯೋಜನೆ, ಆರ್ಥಿಕ ತಖ್ತೆಗಳ ಬಗ್ಗೆ ವಿವರಿಸಿದರು. ಒಕ್ಕೂಟ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು ಸಭೆಯ ಎಲ್ಲಾ ಜವಾದ್ದಾರಿ ವಹಿಸಿಕೊಂಡು ಸಭೆಯು ಸುಸೂತ್ರವಾಗಿ ನಡೆಯಲು ಸಹಕರಿಸಿದರು.
ಚಿತ್ರದುರ್ಗ ಒಕ್ಕೂಟದ ಕಾರ್ಯವ್ಯಾಪ್ತಿ 05 ಜಿಲ್ಲೆಗಳು (ಚಿತ್ರದುರ್ಗ, ತುಮಕೂರು, ದಾವಣಗೆರೆ, ವಿಜಯನಗರ ಮತ್ತು ಬಳ್ಳಾರಿ) 35 ತಾಲೂಕುಗಳು, 73 ಪ್ರಾಥಮಿಕ ಸಹಕಾರ ಸಂಘಗಳು, ಸುಮಾರು 5000 ಹಳ್ಳಿಗಳು, ಸುಮಾರು 40000 ಎಣ್ಣೆಕಾಳು ಬೆಳೆಯುವ ರೈತ ಸದಸ್ಯರನ್ನು ಒಳಗೊಂಡಿದೆ.



















