ರಾಯಚೂರು: ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನ ಪಡ್ತಾ ಇದ್ದಾರೆ. ಅದಕ್ಕಾಗಿ ಓಡಾಟ ಕೂಡ ಹೆಚ್ಚಾಗಿದೆ. ದೆಹಲಿಯಲ್ಲೂ ಬೀಡು ಬಿಟ್ಟಿದ್ದರು. ಆದರೆ ಐದು ವರ್ಣಗಳ ಕಾಲ ನಮ್ಮ ತಂದೆಯೇ ಸಿಎಂ ಎಂದು ಹೇಳುವ ಯತೀಂದ್ರ ಸಿದ್ದರಾಮಯ್ಯ ಅವರು ಈ ಬಗ್ಗೆ ಹೇಳಿದ್ದು ಹೀಗೆ, ಪ್ರತಿಯೊಂದು ಪಕ್ಷದಲ್ಲೂ ಕೂಡ ಲೀಡರ್ಸ್ ಹೈಕಮಾಂಡ್ ನ ಭೇಟಿ ಮಾಡಿನೇ ಮಾಡ್ತಾರೆ. ಮಾಡಿ ಅವರ ಸ್ವಂತ ಹಿತಾಸಕ್ತಿಯ ಬಗ್ಗೆ ಮಾತಾಡ್ತಾರೆ. ಅದೇನು ಬರೀ ನಮ್ಮ ಸರ್ಕಾರದಲ್ಲಿ ಮಾತ್ರ ನಡೆಯೋದು ಅಲ್ಲ ಎಂದಿದ್ದಾರೆ.
ಸಚಿವ ಸ್ಥಾನ ಬದಲಾವಣೆಯ ಬಗ್ಗೆ ಮಾತನ್ನಾಡಿ, ಯಾರು ಈ ಬಗ್ಗೆ ಹೇಳಿದ್ದಾರೆ ಅವರನ್ನೇ ಕೇಳ್ಬೇಕು. ಯಾಕಂದ್ರೆ ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳು ಈಗಾಗಲೇ ಅಸೆಂಬ್ಲಿಯಲ್ಲಿಯೇ ಆ ಬಗ್ಗೆ ಮಾತನ್ನಾಡಿದ್ದಾರೆ. ನಮ್ಮ ಸರ್ಕಾರ ಬಂದು ಎರಡೂವರೆ ವರ್ಷ ಮೇಲಾಗಿದೆ. ಸಂಪುಟ ಪುನರ್ ರಚನೆಯಾದಾಗ ಸಚಿವ ಸ್ಥಾನ ಸಿಗಬೇಕು ಅನ್ನೋದು ಎಲ್ಲಾ ಶಾಸಕರ ಆಸೆಯಾಗಿರುತ್ತೆ.

ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಮ್ಮ ರಾಯಚೂರಲ್ಲೂ ಉತ್ತಮವಾದ ಎಂಎಲ್ಎಗಳು ಇದಾರೆ. ಆದರೆ ಯಾರನ್ನ ಆಯ್ಕೆ ಮಾಡಬೇಕು ಎಂಬುದು ಹೈಕಮಾಂಡ್ ಗೆ ಬಿಟ್ಟಿದ್ದು. ನಮ್ಮ ಕಡೆಯಿಂದ ಏನು ಬೇಡಿಕೆ ಇಡಬೇಕು ಅದನ್ನ ಇಡುತ್ತೇವೆ ಎಂದಿದ್ದಾರೆ.

ಸಿಎಂ ವೀಕ್ ಆಗಿದ್ದಾರೆ ಎಂಬ ಪ್ರಶ್ನೆಗೆ, ಸಿಎಂ ವೀಕ್ ಆಗಿದ್ದಾರೆ ಅಂತ ಯಾರು ಹೇಳಿದ್ದು. ಅಡ್ಮಿನಿಸ್ಟ್ರೇಷನ್ ಚೆನ್ನಾಗಿನೇ ಕೊಡ್ತಾ ಇದ್ದಾರೆ. ಜನರಿಗೆ ಏನೇನೋ ಪ್ರಾಮೀಸ್ ಮಾಡಿದ್ದರೋ ಅದೆಲ್ಲವನ್ನು ಒಂದೊಂದಾಗಿ ಈಡೇರಿಸಿಕೊಂಡು ಬರ್ತಾ ಇದ್ದಾರೆ. ಇತ್ತೀಚೆಗೆ ಒಳ ಮೀಸಲಾತಿಯ ವಿಚಾರಕ್ಕೂ ಗಮನಹರಿಸಿದ್ದಾರೆ. ಹಾಗಾಗಿ ಯಾವುದೇ ರೀತಿಯಲ್ಲೂ ಸಿಎಂ ವೀಕ್ ಆಗಿಲ್ಲ ಎಂದಿದ್ದಾರೆ.

















