ನೈರುತ್ಯ ರೈಲ್ವೆಯು ಹಿರೇಹಳ್ಳಿ ಯಾರ್ಡ್ನಲ್ಲಿ ಸುರಕ್ಷತೆ ಮತ್ತು ಸಿಗ್ನಲ್ ಸಂಬಂಧಿತ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಮೇ 20ರಂದು ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಪ್ರಕಟಿಸಿದೆ.
ಮೇ 20ರಂದು ಯಶವಂತಪುರ-ಶಿವಮೊಗ್ಗ ಟೌನ್ ದೈನಂದಿನ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (20689) ರೈಲು ಪರಿಷ್ಕೃತ ಮಾರ್ಗದಲ್ಲಿ ಸಂಚರಿಸಲಿದೆ. ಈ ರೈಲು ಯಶವಂತಪುರ, ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದ್ದು, ತುಮಕೂರು ಮತ್ತು ತಿಪಟೂರು ಮಾರ್ಗದಲ್ಲಿ ಸಂಚಾರ ಇರುವುದಿಲ್ಲ.

ಇದೇ ರೀತಿ ಮೈಸೂರು-ಬೆಳಗಾವಿ ವಿಶ್ವಮಾನವ ದೈನಂದಿನ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (20676) ರೈಲಿನ ಮಾರ್ಗದಲ್ಲೂ ಬದಲಾವಣೆ ಮಾಡಲಾಗಿದೆ. ಈ ರೈಲು ಮೈಸೂರು, ಹೊಳೆನರಸೀಪುರ, ಹಾಸನ ಮತ್ತು ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಪರಿಣಾಮವಾಗಿ ಪಾಂಡವಪುರ, ಬೆಂಗಳೂರು, ತುಮಕೂರು ಹಾಗೂ ತಿಪಟೂರು ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸುವುದಿಲ್ಲ.
ಮೇ 20ರಂದು ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ರೈಲು (66567) ದೊಡ್ಡಬೆಲೆ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ದೊಡ್ಡಬೆಲೆ ಮತ್ತು ತುಮಕೂರು ನಡುವಿನ ಸೇವೆ ರದ್ದುಗೊಂಡಿದೆ.
ಅದೇ ದಿನ ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು (66572) ದೊಡ್ಡಬೆಲೆ ನಿಲ್ದಾಣದಿಂದಲೇ ಸಂಚಾರ ಆರಂಭಿಸಲಿದ್ದು, ತುಮಕೂರು-ದೊಡ್ಡಬೆಲೆ ನಡುವಿನ ಸೇವೆ ಇರುವುದಿಲ್ಲ.
ಮೇ 19ರಂದು ವೇಲಂಕಣಿಯಿಂದ ಹೊರಡುವ ವೇಲಂಕಣಿ-ವಾಸ್ಕೊಡಗಾಮ ಸಾಪ್ತಾಹಿಕ ಎಕ್ಸ್ಪ್ರೆಸ್ (17316) ರೈಲು ಮಾರ್ಗ ಮಧ್ಯೆ ಸುಮಾರು 60 ನಿಮಿಷಗಳ ಕಾಲ ವಿಳಂಬವಾಗಿ ಸಂಚರಿಸಲಿದೆ.
ಇನ್ನೂ ಮೇ 20ರಂದು ಕೆಎಸ್ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (12725) ಹಾಗೂ ಯಶವಂತಪುರ-ಹಜರತ್ ನಿಜಾಮುದ್ದೀನ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (12649) ರೈಲುಗಳು ತಲಾ 30 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

















