ಚಳ್ಳಕೆರೆ | ಆಸ್ಪತ್ರೆಯಲ್ಲಿ ವೈದ್ಯರ ಕೊರೆತೆ ಬಡ ರೋಗಿಗಳಿಗೆ ಸಿಗುವುದೆ ಸರಿಯಾದ ಚಿಕಿತ್ಸೆ…?

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ : ಗ್ರಾಮೀಣ ಭಾಗದ ಬಡವರು ತುರ್ತು ಸಂದರ್ಭಗಳ ಸಮಯದಲ್ಲಿ ಸಕಾಲಕ್ಕೆ ಚಿಕಿತ್ಸೆ ಪಡೆಯಲು ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ನೆಚ್ಚಿಕೊಂಡಿರುತ್ತಾರೆ. ಆದರೆ ಇಲ್ಲಿನ ತಾಲೂಕು ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ನೀಡಲು ಕೆಲ ಮುಖ್ಯ ವೈದ್ಯರು ಇಲ್ಲದ ಕಾರಣದಿಂದ, ಚಿಕಿತ್ಸೆ ಹರಸಿ ಬರುವ ನೂರಾರು ರೋಗಿಗಳನ್ನು ತಾಲೂಕು ಆಸ್ಪತ್ರೆ ಸಿಬ್ಬಂದಿಗಳು ಆಸ್ಪತ್ರೆ ಹೊರಗಿನಿಂದಲೇ ಜಿಲ್ಲಾಸ್ಪತ್ರೆಗೆ ಕಳಿಸುವಂಥ ದುಸ್ಥಿತಿ ಬಂದೊದಗಿದೆ.

ಸುಮಾರು ಮೂರು ವರ್ಷಗಳಿಂದ ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರು, ಅರವಳಿಕೆ ತಜ್ಞರು, ತುರ್ತು ಚಿಕಿತ್ಸಾ ವೈದ್ಯರು , ಚರ್ಮರೋಗ ವೈದ್ಯರು ಇಲ್ಲದ ಕಾರಣ ಆಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತ್ತಾಗಿದೆ

ದಿನನಿತ್ಯ ಆಸ್ಪತ್ರೆಗೆ 700 ರಿಂದ 1000 ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಇದರಲ್ಲಿ ಬರುವ ಸುಮಾರು 150 ರೋಗಿಗಳು ಜನರಲ್ ಸರ್ಜರಿಗೆಂದು ಬರುತ್ತಿದ್ದು, ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಇಲ್ಲದ ಕಾರಣದಿಂದಾಗಿ ಸಣ್ಣ ಪುಟ್ಟ ಸರ್ಜರಿಗೆ ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸುವ ಕೆಲಸ ಆಗುತ್ತಿದೆ.

ಆಪರೇಷನ್ ಗೆ ಬರುವ ರೋಗಿಗಳಿಗೆ ಅರವಳಿಕೆ ನೀಡಬೇಕಾದರೆ ಬೇರೆ ತಾಲೂಕಿನಿಂದ ವೈದ್ಯರನ್ನು ಕರೆಸಬೇಕು. ಆ ವೈದ್ಯರು ಬಾರದೆ ಹೋದರೆ ಇಡೀ ದಿನ ಕಾಯಬೇಕು ಇಲ್ಲದೆ ಹೋದರೆ ಜಿಲ್ಲಾಸ್ಪತ್ರೆಯತ್ತಾ ಅಥವಾ ಖಾಸಗಿ ಆಸ್ಪತ್ರೆಗಳತ್ತಾ ಮುಖ ಮಾಡಬೇಕು. ಕಣ್ಣಿನ ತಜ್ಞರು, ಚರ್ಮರೋಗ ತಜ್ಞರು, ತುರ್ತು ಚಿಕಿತ್ಸಾ ವೈದ್ಯರು ಇಲ್ಲದಿರುವುದನ್ನೇ ನೆಪ ಮಾಡಿಕೊಂಡಿರುವ ಇಲ್ಲಿನ ಸಿಬ್ಬಂದಿಗಳು ಹಾಗೂ ಕೆಲ ವೈದ್ಯರು ಆಸ್ಪತ್ರೆಗೆ ಬರುವ ರೋಗಿಗಳ ಸಮಸ್ಯೆ ಏನು ಎಂದು ಕೇಳುವ ಮೊದಲೇ ಇಲ್ಲಿ ಆಗಲ್ಲ ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಚೀಟಿ ಬರೆದುಕೊಟ್ಟು ಕೈತೊಳೆದುಕೊಳ್ಳುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿ 8 ಮಂದಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದು, ಇದರಿಂದಾಗಿ ನಮಗೂ ಒತ್ತಡ ಹೆಚ್ಚಾಗುತ್ತಿದ್ದು ಬರುವ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲು ಆಗದೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ..

ವೈದ್ಯರು ವರ್ಗಾವಣೆಗೊಂಡು ಇಷ್ಟು ವರ್ಷಗಳಾದರೂ ಕೌನ್ಸಿಲಿಂಗ್ ಮಾಡಿ ವೈದ್ಯರನ್ನು ನೇಮಕ ಮಾಡಿಸುವ ಕೆಲಸಕ್ಕೆ ಜನಪ್ರತಿನಿಧಿಗಳಾಗಲಿ, ಸಂಬಂಧಪಟ್ಟ ಆರೋಗ್ಯಾಧಿಕಾರಿಗಳಲಾಗಲಿ ಮುಂದಾಗಿಲ್ಲ ಅನ್ನೋದೇ ವಿಪರ್ಯಾಸ.

Share This Article
Enable Notifications OK No thanks