ಚಳ್ಳಕೆರೆ : ಮುಂಗಾರು ಮಳೆ ಕೈಕೊಟ್ಟು ಬರದ ಛಾಯೆ ಆವರಿಸುತ್ತಿರುವ ಹಿನ್ನೆಲೆಯಲ್ಲಿ, ಮಳೆರಾಯನ ಕೃಪೆಗಾಗಿ ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ದಲ್ಲಾಲರ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ರೈತರು ಒಗೂಡಿ ನಗರದ ಶ್ರೀರಾಮ ಮಂದಿರದ ಎದುರಿನಲ್ಲಿರುವ ಗುಡ್ಡೆ ಕಲ್ಲಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ನಗರದ ಶ್ರೀರಾಮ ಮಂದಿರದ ಆವರಣದಲ್ಲಿ 108 ಮಂತ್ರಗಳನ್ನು ಜಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಮುಂಭಾಗದ ಪವಿತ್ರ ಗುಡ್ಡೆ ಕಲ್ಲಿಗೆ 108 ಬಿಂದಿಗೆ ನೀರು, 108 ನಿಂಬೆಹಣ್ಣು ಹಾಗೂ 108 ಹೂವುಗಳನ್ನು ಸಮರ್ಪಿಸುವ ಮೂಲಕ ವರುಣ ದೇವನಿಗೆ ವಿಶಿಷ್ಟವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಮುಂಗಾರು ಮಳೆ ಕೈಕೊಟ್ಟಾಗ ಪ್ರಕೃತಿಗೆ ವಿಶೇಷ ಪೂಜೆ ಮಾಡುವುದು ನಮ್ಮ ಹಿರಿಯರು ಬೆಳೆಸಿಕೊಂಡು ಬಂದ ಸಂಪ್ರದಾಯ. ಈ ಬಾರಿ ಮಳೆ ಕೊರತೆಯಿಂದಾಗಿ ಬಿತ್ತನೆ ಕಾರ್ಯ ಕುಂಠಿತವಾಗುತ್ತಿದೆ. ಹೀಗಾಗಿ ವರುಣನ ಕೃಪೆಗಾಗಿ ಈ ಸಾಂಪ್ರದಾಯಿಕ ಮತ್ತು ನಂಬಿಕೆಯ ಆಚರಣೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಎಪಿಎಂಸಿ ದಲ್ಲಾಲರ ಸಂಘದ ಅಧ್ಯಕ್ಷ ಡಿ.ಎಂ. ತಿಪ್ಪೇಸ್ವಾಮಿ ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ಕೆ.ಓ. ಶಿವಕುಮಾರ್ ಮಾತನಾಡಿ, “ಬಂಡೆಗಲ್ಲಿಗೆ ನೀರು ಎರೆಚುವುದರಿಂದ ಪ್ರಕೃತಿಯಲ್ಲಿರುವ ಮಳೆ ದೇವರು ಹಾಗೂ ಭೂಮಿ ತಾಯಿ ತಂಪಾಗಿ, ಮಳೆ ಸುರಿಯುತ್ತದೆ ಎಂಬುದು ಜನರ ಪ್ರಬಲ ನಂಬಿಕೆಯಾಗಿದೆ. ಪ್ರಕೃತಿಯನ್ನು ದೇವರೆಂದು ಭಾವಿಸಿ ಪೂಜಿಸುವುದು ನಮ್ಮ ಜನಪದೀಯ ಸಂಸ್ಕೃತಿ. ಉತ್ತಮವಾಗಿ ಮಳೆ ಬಂದರೆ ಮಾತ್ರ ರೈತರು ಬೆಳೆ ಬೆಳೆಯಲು ಸಾಧ್ಯ. ಇಲ್ಲದಿದ್ದರೆ ಮಾರುಕಟ್ಟೆಗೆ ಬೆಳೆ ಬಾರದೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಈ ವಿಶೇಷ ಪ್ರಾರ್ಥನಾ ಸಂದರ್ಭದಲ್ಲಿ ಎಪಿಎಂಸಿ ದಲ್ಲಾಲರ ಸಂಘದ ಮಾಜಿ ಅಧ್ಯಕ್ಷ ಅರವಿಂದ್, ಉಪಾಧ್ಯಕ್ಷ ಸಿದ್ದರಾಮಪ್ಪ, ಕಾರ್ಯದರ್ಶಿ ಟಿ. ರವೀಂದ್ರ, ಸಹ ಕಾರ್ಯದರ್ಶಿ ಓ. ರಾಘವೇಂದ್ರ ಕುಂಚುಂ, ಖಜಾಂಚಿ ಹೆಚ್. ಪ್ರಕಾಶ್, ಪ್ರಮುಖರಾದ ಎಸ್. ಶ್ರೀನಿವಾಸ್, ಕೆ.ಟಿ. ಬಾಬು ಉಪಸ್ಥಿತರಿದ್ದರು.
ಹಾಗೂ ಸಂಘದ ನಿರ್ದೇಶಕರುಗಳಾದ ಮಲ್ಲಿಕಾರ್ಜುನ್, ಬಸವರಾಜ, ಪಿ.ಎಸ್. ಮಂಜುನಾಥ್, ಟಿ. ಮಲ್ಲೇಶ್ವರ, ಮಂಜುನಾಥ್, ಡಿ.ಎ. ಶ್ರೀನಿವಾಸ್, ತಿರುಮಲ್ವೇಶ, ಕೋಟೆ ಚಂದ್ರಣ್ಣ ಸೇರಿದಂತೆ ಹಲವಾರು ರೈತರು ಮತ್ತು ಸಾರ್ವಜನಿಕರು ಭಾಗವಹಿಸಿ ಮಳೆಗಾಗಿ ಪ್ರಾರ್ಥಿಸಿದರು.

















