ಬೆಂಗಳೂರು.ಜುಲೈ.02: ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಸಿಹಿಸುದ್ದಿ ನೀಡಿದ್ದು. ಕೆಎಸ್ ಆರ್ ಟಿಸಿ, ಬಿಎಂಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ ಹಾಗೂ ಕೆಕೆಆರ್ ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸಿಬ್ಬಂದಿಯ ಮೂಲ ವೇತನವನ್ನು ಶೇ. 12.5 ರಷ್ಟು ಹೆಚ್ಚಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ವಿಶೇಷವೆಂದರೆ, ಈ ಪರಿಷ್ಕೃತ ವೇತನವು 2025ರ ಏಪ್ರಿಲ್ 1ರಿಂದಲೇ ಪೂರ್ವಾನ್ವಯವಾಗಲಿದ್ದು, ಈ ಜುಲೈ ತಿಂಗಳ ಸಂಬಳದಲ್ಲೇ ನೌಕರರ ಕೈಸೇರಲಿದೆ. ಇಷ್ಟು ದಿನ ಬಾಕಿ ಉಳಿದಿದ್ದ ವೇತನದ ಹಿಂಬಾಕಿಯ (Arrears) ಮೊದಲ ಕಂತಿನ ಹಣವನ್ನು ಸಹ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ.
ಮಾಜಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅವಧಿಯಲ್ಲಿ ಈ ವೇತನ ಹೆಚ್ಚಳಕ್ಕೆ ಚಾಲನೆ ಸಿಕ್ಕಿತ್ತು, ಇದೀಗ ಅದು ಅಧಿಕೃತವಾಗಿ ಜಾರಿಗೆ ಬಂದಿದೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಸುಮಾರು 1.05 ಲಕ್ಷ ಸಾರಿಗೆ ನೌಕರರು ಆರ್ಥಿಕ ಲಾಭ ಪಡೆಯಲಿದ್ದಾರೆ. ನೌಕರರ ಹಿತದೃಷ್ಟಿಯಿಂದ ಕೈಗೊಂಡ ಈ ಕ್ರಮದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 72.80 ಕೋಟಿ ರೂ. ಹೊರೆ ಬೀಳಲಿದೆ. ಆದಾಗ್ಯೂ, ಸಾರಿಗೆ ನೌಕರರ ಹಿತರಕ್ಷಣೆಗಾಗಿ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದೆ.





















