ಬೆಂಗಳೂರು.ಜುಲೈ.02: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಆಘಾತಕಾರಿ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಸಾಕ್ಷಿಗೆ ನೇರವಾಗಿ ಜೀವ ಬೆದರಿಕೆ ಒಡ್ಡಿದ ಆರೋಪದ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಲ್ಲಿ ದರ್ಶನ್ ಅವರ ಸಾಮಾಜಿಕ ಜಾಲತಾಣದ ಅಭಿಮಾನಿ ಪುಟದ (ಡಿ ಕಂಪನಿ ಫ್ಯಾನ್ ಪೇಜ್) ಅಡ್ಮಿನ್ ಕೂಡ ಸೇರಿರುವುದು ಸಂಚಲನ ಮೂಡಿಸಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವವರೇ ಈ ಬೆದರಿಕೆಗೆ ಒಳಗಾದವರು. ಇತ್ತೀಚೆಗೆ ಆರೋಪಿಗಳು ಸಂದೀಪ್ ಅವರನ್ನು ಮಾತನಾಡಿಸುವ ನೆಪದಲ್ಲಿ ಬಲವಂತವಾಗಿ ಕಾರಿಗೆ ಹತ್ತಿಸಿಕೊಂಡು ನಗರದಾದ್ಯಂತ ಸುತ್ತಾಡಿಸಿದ್ದಾರೆ. ಈ ವೇಳೆ, ಯಾವುದೇ ಕಾರಣಕ್ಕೂ ಕೋರ್ಟ್ನಲ್ಲಿ ದರ್ಶನ್ ವಿರುದ್ಧ ಸಾಕ್ಷಿ ಹೇಳಬಾರದು, ಒಂದು ವೇಳೆ ಬಾಯಿ ಬಿಟ್ಟರೆ ಜೀವ ಉಳಿಯಲ್ಲ ಎಂದು ನೇರವಾಗಿಯೇ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಈ ಆಘಾತಕಾರಿ ಘಟನೆಯ ಬಗ್ಗೆ ಧೈರ್ಯವಾಗಿ ಸಾಕ್ಷಿದಾರ ಸಂದೀಪ್ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ್ದರು. ವಿಷಯದ ಗಂಭೀರತೆಯನ್ನು ಅರಿತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಾಕ್ಷಿಗೆ ಸೂಕ್ತ ರಕ್ಷಣೆ ಒದಗಿಸಿದ್ದರು. ತದನಂತರ ವಿಶೇಷ ಕಾರ್ಯಾಚರಣೆ ನಡೆಸಿ ತುಮಕೂರು ಮೂಲದ ವೇಣು, ಸುಹಾಸ್ ಮತ್ತು ದರ್ಶನ್ ಫ್ಯಾನ್ ಪೇಜ್ ನಡೆಸುತ್ತಿದ್ದ ಪುನೀತ್ ಎಂಬ ಮೂವರನ್ನು ಜೈಲಿಗಟ್ಟಿದ್ದಾರೆ. ಬಂಧಿತರಲ್ಲಿ ಉಳಿದಿಬ್ಬರು ತುಮಕೂರಿನ ದರ್ಶನ್ ಅಭಿಮಾನಿಗಳ ಸಂಘದ ಸಕ್ರಿಯ ಸದಸ್ಯರೆಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಈ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ಸಂಚಿನ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಕೋನದಲ್ಲೂ ತನಿಖೆ ಚುರುಕುಗೊಳಿಸಿದ್ದಾರೆ.





















