ಸುದ್ದಿಒನ್, ಚಿತ್ರದುರ್ಗ, ಜುಲೈ. 12 : ಕರ್ನಾಟಕ ರಾಜಕಾರಣದ ಸೌಮ್ಯ ಹಾಗೂ ಸರಳ ಸಜ್ಜನಿಕೆಯ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ಎಚ್. ಹನುಮಂತಪ್ಪ ಅವರು ವಯೋಸಹಜ ಅನಾರೋಗ್ಯದಿಂದ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಅವರ ಪಾರ್ಥಿವ ಶರೀರವನ್ನು ಇಂದು ರಾತ್ರಿ ವೇಳೆಗೆ ಚಿತ್ರದುರ್ಗಕ್ಕೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದ ಧೀಮಂತ ಮುಖಂಡರಾಗಿದ್ದ ಹನುಮಂತಪ್ಪ ಅವರು ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ದಲಿತರು, ಹಿಂದುಳಿದವರು ಹಾಗೂ ಸಮಾಜದ ವಂಚಿತ ವರ್ಗಗಳ ಹಕ್ಕುಗಳಿಗಾಗಿ ಸದಾ ಧ್ವನಿಯಾಗಿದ್ದರು. 1982 ರಿಂದ 2000 ರವರೆಗೆ ಸತತ ಮೂರು ಬಾರಿ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದ ಅವರು, ಸಂಸತ್ತಿನಲ್ಲಿ ನಡೆಸುತ್ತಿದ್ದ ವಿಚಾರಪೂರ್ಣ ಭಾಷಣಗಳ ಮೂಲಕ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರು. ಒಂದು ಹಂತದಲ್ಲಿ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯ ರೇಸ್ನಲ್ಲೂ ಇವರ ಹೆಸರು ಕೇಳಿಬಂದಿದ್ದು ಇವರ ರಾಜಕೀಯ ಪ್ರಭಾವಕ್ಕೆ ಸಾಕ್ಷಿಯಾಗಿದೆ.
ಸಕ್ರಿಯ ರಾಜಕಾರಣದ ಬಳಿಕ ‘ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್’ ಅಧ್ಯಕ್ಷರಾಗಿ, ಸರಸ್ವತಿ ವಿದ್ಯಾ ಸಂಸ್ಥೆ ಚಿತ್ರದುರ್ಗ ಮತ್ತು ಸರಸ್ವತಿ ಕಾನೂನು ಕಾಲೇಜು, ಚಿತ್ರದುರ್ಗ ಇದರ ಅಧ್ಯಕ್ಷರಾಗಿ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕೊನೆಯವರೆಗೂ ಸಮಾಜಮುಖಿ ಕೆಲಸಗಳನ್ನು ಮುಂದುವರಿಸಿದ್ದರು. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಾಳೆ ಅಂತ್ಯಕ್ರಿಯೆ:
ಮೃತರ ಪುತ್ರ ಹಾಗೂ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ಎಚ್. ಮೋಹನ್ ಅವರು ನೀಡಿರುವ ಮಾಹಿತಿ ಪ್ರಕಾರ, ಹನುಮಂತಪ್ಪ ಅವರ ಅಂತ್ಯಕ್ರಿಯೆಯು ನಾಳೆ (ಸೋಮವಾರ) ಸಂಜೆ 4:00 ಗಂಟೆಗೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ನೆರವೇರಲಿದೆ.





