ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 29 : ಭರತ ನಾಟ್ಯ ಕ್ಷೇತ್ರದಲ್ಲಿ ಕಳೆದ 42 ವರ್ಷಗಳಿಂದಲೂ ಅಮೋಘ ಸಾಧನೆಗೈಯುತ್ತಿರುವ ಚಿತ್ರದುರ್ಗದ ಅಂಜನಾ ನೃತ್ಯ ಕಲಾ ಕೇಂದ್ರದ ವಿದ್ವಾನ್ ಸಿ.ಆರ್.ಶಿವಪ್ರಕಾಶ್ರವರಿಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಏ.30 ರಂದು ಸಂಜೆ ಆರು ಗಂಟೆಗೆ ಕರ್ನಾಟಕ ನೃತ್ಯ ಮತ್ತು ಸಂಗೀತ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಚಿತ್ರದುರ್ಗದಲ್ಲಿ ಅಂಜನಾ ನೃತ್ಯ ಕಲಾ ಕೇಂದ್ರ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ನೃತ್ಯ ಕಲೆಯನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಸಿ.ಆರ್.ಶಿವಪ್ರಕಾಶ್ರವರ ಕಲಾ ಸಾಧನೆಯನ್ನು ಗುರುತಿಸಿ ಕರ್ನಾಟಕ ಕಲಾಶ್ರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಬಹುಮುಖ ಪ್ರತಿಭೆಯುಳ್ಳ ಇವರು ಶಾಸ್ತ್ರೀಯ ನೃತ್ಯ, ಭರತನಾಟ್ಯ, ಜೂನಿಯರ್ ಸೀನಿಯರ್ ಮತ್ತು ವಿದ್ವತ್ ಮಟ್ಟದ ಪರಿಣತಿ. ಸಂಗೀತ ; ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾವಗೀತೆ, ಜಾನಪದ ಮತ್ತು ಭಕ್ತಿಗೀತೆ ಗಾಯನ. ನೃತ್ಯ ಸಂಯೋಜನೆ : ಬೃಹತ್ ನೃತ್ಯ ರೂಪಕಗಳ ನಿರ್ದೇಶನ ಮತ್ತು ಪ್ರದರ್ಶನ. ಶೈಕ್ಷಣಿಕ ನಾಯಕತ್ವ : ನೃತ್ಯ ಶಾಲೆಯ ಆಡಳಿತ ಮತ್ತು ಪರೀಕ್ಷಾ ಮಂಡಳಿಗಳ ನಿರ್ವಹಣೆ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬಸವಶ್ರಿ ಪ್ರಶಸ್ತಿ ಮತ್ತು ಶಿವಾಜಿ ಮಹಾರಾಜ ಪ್ರಶಸ್ತಿ, ನಾಟ್ಯ ಚೂಡಾಮಣಿ, ನಾಟ್ಯ ಪ್ರವೀಣ ಸೇರಿದಂತೆ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸಿ.ಆರ್.ಶಿವಪ್ರಕಾಶ್ರವರು ಕರ್ನಾಟಕ ಕಲಾಶ್ರಿ ಪ್ರಶಸ್ತಿ ಸ್ವೀಕರಿಸುತ್ತಿರುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಕುಟುಂಬದವರು, ಬಂಧುಗಳು, ಅಭಿಮಾನಿಗಳು ಹಾಗೂ ಅಪಾರ ಶಿಷ್ಯ ವೃಂದದವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು.




















