ಸುದ್ದಿಒನ್, ಚಿತ್ರದುರ್ಗ, ಸೆ. 08 : ಜಿಲ್ಲೆಯ ಜನರು, ಜನಪ್ರತಿನಿಧಿಗಳು, ಎಲ್ಲ ಪಕ್ಷಗಳ ಪ್ರಮುಖರು ನಡೆಸಿದ ಪರಿಣಾಮ ಭದ್ರಾ ನೀರು ಜಿಲ್ಲೆ ಪ್ರವೇಶಿಸಿದ್ದು, ಈ ಹಿನ್ನೆಲೆಯಲ್ಲಿ ತಾಯಿ ಭದ್ರೆಯನ್ನು ಸ್ವಾಗತಿಸಲು ಸೆ.10ರ ಗುರುವಾರ ಬೆಳಗ್ಗೆ 10 ಗಂಟೆಗೆ ಗೋನೂರು ಬಳಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕ ಮಂಡಳಿ ತಿಳಿಸಿದೆ.
ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ನೀರಾವರಿ ಹೋರಾಟದಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡಿದ್ದ ಜಿಲ್ಲೆಯ ಮಠಾಧೀಶರು, ರೈತ, ಕನ್ನಡ, ಕಾರ್ಮಿಕ, ಅಸಂಘಟಿತ, ಆಟೋ, ಟ್ಯಾಕ್ಸಿ, ಕಾರು, ವಿದ್ಯಾರ್ಥಿ ಸಂಘಟನೆ, ವಿವಿಧ ಪಕ್ಷಗಳ ಪದಾಧಿಕಾರಿಗಳು, ಮುಖಂಡರುಗಳು,
ಜನಪ್ರತಿನಿಧಿಗಳು, ರಾಜಕಾರಣಿಗಳು ಪಾಲ್ಗೊಳ್ಳಲಿದ್ದಾರೆ.
ತಾಯಿ ಭದ್ರೆಯನ್ನು ಸ್ವಾಗತಿಸುವ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಕೈಬಿಟ್ಟಿರುವ ಮೊಳಕಾಲ್ಮೂರು, ಹೊಳಲ್ಕೆರೆ ಹಾಗೂ ವಿವಿಧ ತಾಲ್ಲೂಕುಗಳಲ್ಲಿನ ಹಳ್ಳಿಗಳ
ಕೆರೆಗಳನ್ನು ಸೇರಿಸಬೇಕು ಹಾಗೂ ಯಾವುದೇ ಒಂದು ಕೆರೆ ಭದ್ರೆ ನೀರಿನಿಂದ ವಂಚಿತವಾಗದಂತೆ ಸಮಗ್ರ ನೀರಾವರಿ ಯೋಜನೆ ಕಲ್ಪಿಸಬೇಕೆಂಬ ಎರಡನೇ ಹಂತದ ಹೋರಾಟ ಆರಂಭಿಸಬೇಕಿದೆ. ಒಂದೆಡೆ ತಾಯಿ ಭದ್ರೆಯನ್ನು ಸ್ವಾಗತಿಸುತ್ತಲೇ ಮತ್ತೊಂದೆಡೆ ಜಿಲ್ಲೆಯ ಎಲ್ಲ
ಕೆರೆ-ಕಟ್ಟೆಗಳನ್ನು ತುಂಬಿಸುವ ಮೂಲಕ ಸಮಗ್ರ ನೀರಾವರಿ ಯೋಜನೆ ಕಲ್ಪಿಸಬೇಕೆಂಬ ಕೂಗು ಮಾರ್ಧನಿಸಬೇಕಿದೆ.
ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆ ಹೋರಾಟ ಮುನ್ನಡೆಸಿ ನಮ್ಮನ್ನು ಅಗಲಿರುವ ಸಮಿತಿ
ಅಧ್ಯಕ್ಷರು, ಪದಾಧಿಕಾರಿಗಳು, ಸಂಚಾಲಕರು, ಹೋರಾಟಗಾರರು, ರೈತ, ಕಾರ್ಮಿ ಸೇರಿ ವಿವಿಧ
ಸಂಘಟನೆ, ಪಕ್ಷಗಳ ಮುಂಚೂಣಿ ನಾಯಕರನ್ನು ಸ್ಮರಿಸಬೇಕಿದೆ. ಸಂಭ್ರಮ, ಸ್ಮರಣೆ, ಹೋರಾಟದ
ಕಹಳೆ ಮೂರು ಸಮ್ಮಿಲನದ ಸಮಾರಂಭದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಾಯಿ ಭದ್ರೆ ಹಾಗೂ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕೆಂದು ಸಮಿತಿ ಸಂಚಾಲಕ ಜೋಗಿಮಟ್ಟಿ ಮಹೇಶ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










