ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮೇ. 19 : ಹಿಂದುಳಿದ ವರ್ಗಗಳು ಪಕ್ಷದಲ್ಲಿ ಗಟ್ಟಿಯಾಗಿದ್ದರೆ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ. ಛಿದ್ರವಾದರೆ ಏನು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯಬೇಕೆಂದು ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಅವರು ಹಿಂದುಳಿದ ವರ್ಗಗಳ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತ ಪಕ್ಷ ನಿಮ್ಮನ್ನು ಗಮನಿಸುತ್ತಿರುತ್ತದೆ. ಆಶಾಭಾವನೆಯನ್ನಿಟ್ಟುಕೊಂಡಿದೆ. ಪಕ್ಷಕ್ಕೆ ಬೆನ್ನೆಲುಬಾಗಿರುವವರನ್ನು ಗೌರವದಿಂದ ನಡೆಸಿಕೊಳ್ಳುತ್ತೇನೆ. ನಿಜವಾಗಿಯೂ ಪಕ್ಷವನ್ನು ನೆಚ್ಚಿಕೊಂಡಿರುವವರು ಅಧಿಕಾರ ಇಲ್ಲದಾಗಲೂ ಪಕ್ಷದ ಜೊತೆ ಇರುತ್ತಾರೆ. ಪಕ್ಷದಲ್ಲಿ ಎಲ್ಲಾ ಅಧಿಕಾರ ಅನುಭವಿಸಿದವರು ಅಧಿಕಾರ ಕಳೆದುಕೊಂಡಾಗ ಪಕ್ಷದಿಂದ ದೂರ ಸರಿಯುತ್ತಾರೆ. ಒಂದೊಂದು ಬೂತ್ನಲ್ಲಿ ಹನ್ನೊಂದರಿಂದ ಹದಿನೈದು ಮಂದಿಯನ್ನು ಗುರುತಿಸಿ ನನ್ನ ಬೂತು ನಾವು ಹನ್ನೊಂದು ಘೋಷಣೆಯೊಂದಿಗೆ ಸಾಗಬೇಕಿದೆ. ಅದರಲ್ಲಿ ಮೂರರಿಂದ ನಾಲ್ವರು ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಬೇಕು. ತಾಲ್ಲೂಕು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಪಟ್ಟಿ ಮಾಡಿ ಕಳಿಸಬೇಕು. ಜಿಲ್ಲೆಯಲ್ಲಿ ಯಾರು ಕ್ರಿಯಾಶೀಲರಾಗಿರುತ್ತಾರೆನ್ನುವುದು ನನಗೆ ಗೊತ್ತಾಗಬೇಕು. ಹದಿನೈದು ದಿನಗಳಲ್ಲಿ ಒಂದು ಸುತ್ತು ರಾಜ್ಯ ಪ್ರವಾಸ ಮಾಡುತ್ತೇನೆಂದು ಹೇಳಿದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ಯ ಅಪ ಪ್ರಚಾರ, ಸುಳ್ಳು, ಟೀಕೆಗಳಿಗೆ ಕಾಂಗ್ರೆಸ್ನವರು ಪ್ರತಿಕ್ರಿಯಿಸುವುದನ್ನು ಕಲಿಯಬೇಕು. 2029 ರಲ್ಲಿ ಬಿಜೆಪಿ.ಯನ್ನು ಕಿತ್ತೆಸೆದು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ನನಗೆ ಸಿಕ್ಕಿರುವುದು ಯಾವ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವಲ್ಲ. ಕಾರು ಬಂಗಲೆಯನ್ನು ಕೊಟ್ಟಿಲ್ಲ. ಪಕ್ಷ ಕಟ್ಟುವ ಜವಾಬ್ದಾರಿಯನ್ನು ಹೈಕಮಾಂಡ್ ನನಗೆ ವಹಿಸಿದೆ. ಎಲ್ಲಾ ಉಪ ಜಾತಿಗಳನ್ನು ಜೊತೆಗೆ ಕರೆದುಕೊಂಡು ಸಂಘಟಿಸಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.
ಎಂಟು ವರ್ಷಗಳ ಹಿಂದೆ ಹೋರಾಟ ಆರಂಭಿಸಿದೆ. ತಮಿಳುನಾಡು, ಆಂಧ್ರದಲ್ಲಿ ಅತ್ಯಂತ ಹಿಂದುಳಿದ ವರ್ಗಗಳನ್ನು ಗುರುತಿಸಿ ಪ್ರತ್ಯೇಕ ಬಜೆಟ್ ಮೀಸಲಿರಿಸುತ್ತದೆ. ಕರ್ನಾಟಕದಲ್ಲಿಯೂ ಆ ರೀತಿ ಆಗಬೇಕು. ದೆಹಲಿಗೆ ಹೋಗಿ ಸುರ್ಜೆವಾಲಾರವರ ಜೊತೆ ಮಾತಾಡಿದ್ದೇನೆ. ಪ್ರವರ್ಗ ಜಾತಿಗಳ ಒಕ್ಕೂಟ ಮಾಡಿಕೊಂಡು ರಾಜ್ಯ ಸುತ್ತಾಡಿ ಹತ್ತು ಲಕ್ಷ ಸದಸ್ಯತ್ವ ನೊಂದಾಯಿಸಿದ್ದೇನೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮೂರರಿಂದ ನಾಲ್ಕು ಸಾವಿರ ಜನ ಹಿಂದುಳಿದ ವರ್ಗಗಳ ವಿಭಾಗಕ್ಕೆ ಬರಬೇಕು. ಓಬಿಸಿ.ಯಲ್ಲಿ ಒಡಕಾಗುತ್ತಿದೆ. ಯಾವ ಸಮಾಜ ಗಟ್ಟಿಯಾಗುತ್ತಿದೆಯೋ ಅದನ್ನು ಛಿದ್ರಗೊಳಿಸುವ ಕೆಲಸವಾಗುತ್ತದೆ. ಹಿಂದುಳಿದ ವರ್ಗಗಳ ಪದಾಧಿಕಾರಿಗಳು ಒಗ್ಗಟ್ಟಿನಿಂದ ಇರಬೇಕೆಂದು ಕಿವಿಮಾತು ಹೇಳಿದರು.
ದೇಶಕ್ಕೆ ಸಂವಿಧಾನವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್, ದೇವರಾಜಅರಸ್, ವೀರಪ್ಪಮೊಯ್ಲಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರುಗಳನ್ನು ನೆನಪಿಸಿಕೊಳ್ಳಲೇಬೇಕು. ತಳ ಹಂತದಲ್ಲಿರುವವರನ್ನು ಮೇಲಕ್ಕೆತ್ತುವ ಕೆಲಸ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಹತ್ತು ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಜನತೆಗೆ ಕೊಟ್ಟಿದೆ. ಅವಕಾಶ ವಂಚಿತ ಸಮಾಜವನ್ನು ಮುಂದೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಓಬಿಸಿ. ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಪ್ರಾಮಾಣಿಕವಾಗಿ ಪಕ್ಷದ ಕೆಲಸ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಉಪಾಧ್ಯಕ್ಷ ಡಿ.ಟಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್ಕುಮಾರ್, ಡಿ.ಎನ್.ಮೈಲಾರಪ್ಪ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್, ಮುದಾಸಿರ್ ನವಾಜ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತ ನಂದಿನಿಗೌಡ, ಜಿ.ವಿ.ಮಧುಗೌಡ ಗಂಜಿಗಟ್ಟೆ, ಲಕ್ಷ್ಮಿಕಾಂತ್, ನ್ಯಾಯವಾದಿ ಸುದರ್ಶನ್, ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಆರ್.ಶಿವಣ್ಣ, ಓಬಿಸಿ. ರಾಜ್ಯ ಉಪಾಧ್ಯಕ್ಷರುಗಳಾದ ಕೃಷ್ಣಮೂರ್ತಿ, ಟಿ.ಸ್ವಾಮಿ, ಕಾರ್ಯದರ್ಶಿ ಜೆ.ಎನ್.ಜಗದೀಶ್, ಡಾ.ವಿಜಯರಾಘವೇಂದ್ರ ಇವರುಗಳು ಈ ಸಂದರ್ಭದಲ್ಲಿದ್ದರು.


















