ಸುದ್ದಿಒನ್, ಬೆಂಗಳೂರು, ಸೆಪ್ಟೆಂಬರ್. 21 : ಹಿಂದೂ ಕ್ಯಾಲೆಂಡರ್ ಪ್ರಕಾರ, ಇಂದು ಭಾದ್ರಪದ ಮಾಸದ ಅಮಾವಾಸ್ಯೆಯ ದಿನ ಇಂದು. ಈ ದಿನವನ್ನು ಮಹಾಲಯ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ. ಈ ದಿನದಂದು ಪೂರ್ವಜರಿಗೆ ತರ್ಪಣ (ನೈವೇದ್ಯ), ಶ್ರಾರ್ದ್ಧ ಆಚರಣೆಗಳು ಮತ್ತು ಪಿಂಡ ಪ್ರದಾನದಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಅಮಾವಾಸ್ಯೆಯ ದಿನದಂದು ಈ ಆಚರಣೆಗಳನ್ನು ಮಾಡುವುದರಿಂದ ಪೂರ್ವಜರು ಸಂತೋಷಪಡುತ್ತಾರೆ. ಪಿತೃ ದೋಷದ ಸಮಸ್ಯೆ ನಿವಾರಣೆಯಾಗುತ್ತದೆ. ಈ ದಿನದಂದು ಮತ್ತೊಂದು ವಿಶೇಷ ಲಕ್ಷಣವಿದೆ. ಈ ವರ್ಷದ ಕೊನೆಯ ಸೂರ್ಯಗ್ರಹಣವು ಸರ್ವ ಪಿತೃ ಅಮಾವಾಸ್ಯೆಯಂದು ಸಂಭವಿಸುತ್ತದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ರಕ್ತ ಚಂದ್ರಗ್ರಹಣವನ್ನು ಕಣ್ತುಂಬಿಕೊಂಡಿದ್ದೆವು. ಇಂದು ಸೂರ್ಯ ಗ್ರಹಣ ಇರಲಿದೆ. ಜೊತೆಗೆ ಮಹಾಲಯ ಅಮಾವಾಸ್ಯೆಯೂ ಬಂದಿದೆ. ಅದರಲ್ಲೂ ಇಂದಿನ ಸೂರ್ಯಗ್ರಹಣ ಈ ವರ್ಷದ ಕೊನೆಯ ಸೂರ್ಯಗ್ರಹಣವಾಗಿದೆ. ಕೇತು ಗ್ರಸ್ತ ಸೂರ್ಯಗ್ರಹಣ ಇದಾಗಿದೆ. ಮಹಾಲಯ ಅಮಾವಾಸ್ಯೆಯ ದಿನ ಸಂಭವಿಸುತ್ತಿರುವ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗುತ್ತಿಲ್ಲ.
ಭಾರತೀಯ ಕಾಲಮಾನ 21ರ ರಾತ್ರಿ 10 ಗಂಟೆ 59 ನಿಮಿಷದಿಂದ ಸೆಪ್ಟೆಂಬರ್ 22ರ ಬೆಳಗಿನ ಜಾವ 3.23 ನಿಮಿಚಗಳವರೆಗೆ ಗ್ರಹಣ ಸಂಭವಿಸಲಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಈ ಅಪರೂಪದ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ಬಾರಿಯ ಸೂರ್ಯ ಗ್ರಹಣ ವಿಜ್ಞಾನಿಗಳಿಗೆ ಹಾಗೂ ಆಸಕ್ತರಿಗೆ ವಿಶೇಷವಾಗಿದೆ. ಈ ಸೂರ್ಯಗ್ರಹಣದ ಸೂತಕ ಕಾಲವು ಭಾರತದಲ್ಲಿ ಮಾನ್ಯವಾಗುವುದಿಲ್ಲ. ಹೀಗಾಗಿ ಪೂಜೆ ಅಥವಾ ಇತರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದಿಲ್ಲ.
ಸಾಮಾನ್ಯವಾಗಿ ಗ್ರಹಣಗಳು, ಅಮಾವಾಸ್ಯೆ ಎಂದರೆ ಜನರಿಗೆ ಸ್ವಲ್ಪ ಆತಂಕ. ಅದರಲ್ಲೂ ಗ್ರಹಣದ ಸಮಯ ಮುಗಿದ ಮೇಲೆ ಜನ ತಮ್ಮ ಮನೆಗಳನ್ನ ಸ್ವಚ್ಛ ಮಾಡಿ, ದೇವರಿಗೆ ಪೂಜೆ ಮಾಡುತ್ತಾರೆ. ಗ್ರಹಣದ ಸಮಯದಲ್ಲಿ ಸಾಕಷ್ಟು ಜನ ಊಟ ಮಾಡುವುದಾಗಲಿ, ಏನಾದ್ರು ತಿನ್ನುವುದಾಗಲಿ ಮಾಡಲ್ಲ. ಅಷ್ಟೇ ಯಾಕೆ ನೀರು ಸಹ ಕುಡಿಯಲ್ಲ. ಆ ರೀತಿಯಾಗಿ ಸಂಪ್ರದಾಯ ಪಾಲಿಸುತ್ತಾರೆ. ದೇವಸ್ಥಾನಗಳಲ್ಲೂ ಗ್ರಹಣ ಮುಗಿದ ಮೇಲೆ ಸ್ವಚ್ಚತಾ ಕಾರ್ಯಕ್ರಮಗಳು ಇರುತ್ತವೆ. ಅಂಥದ್ರಲ್ಲಿ ಇಂದು ಅಮಾವಾಸ್ಯೆಯೂ ಇರುವ ಕಾರಣ ಜನ ಕೊಂಚ ಆತಂಕದಲ್ಲಿಯೇ ಇದ್ದಾರೆ. ಈ ಆತಂಕಕ್ಕೆ ವಿಜ್ಞಾನಿಗಳು ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಯಾಕಂದ್ರೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ.


