ದೆಹಲಿ.ಜುಲೈ.30: ರಾಜ್ಯದಲ್ಲಿ ಮಳೆ ಅಭಾವ ತಾಂಡವವಾಡುತ್ತಿರುವ ಬೆನ್ನಲ್ಲೇ, ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತೆ ಬಿಗ್ ಶಾಕ್ ನೀಡಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಶುಕ್ರವಾರ ನಡೆದ ತುರ್ತು ಸಭೆಯಲ್ಲಿ ಪ್ರಾಧಿಕಾರ ಮಹತ್ವದ ನಿರ್ದೇಶನ ನೀಡಿದೆ.
ದೆಹಲಿಯಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎರಡೂ ರಾಜ್ಯಗಳ ಉನ್ನತಾಧಿಕಾರಿಗಳು ಭಾಗವಹಿಸಿ ಸುದೀರ್ಘ ವಾದ-ಪ್ರತಿವಾದ ಮಂಡಿಸಿದರು. ಕರ್ನಾಟಕದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು, CWRC ಶಿಫಾರಸನ್ನು ಪಾಲಿಸಲು ಸಾಧ್ಯವೇ ಇಲ್ಲ ಎಂದು ಖಡಕ್ಕಾಗಿ ಪ್ರತಿಪಾದಿಸಿದರು. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲದೆ ತೀವ್ರ ಅಭಾವ ಸೃಷ್ಟಿಯಾಗಿದೆ.
ಕಾವೇರಿ ಜಲಾಶಯಗಳಿಗೆ ಹರಿದುಬಂದಿರುವ ಒಟ್ಟು ಒಳಹರಿವು ಕೇವಲ 36 ಟಿಎಂಸಿ ಮಾತ್ರವಾಗಿದ್ದು, ಪ್ರಸ್ತುತ ಕೆಆರ್ಎಸ್ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ಬಸವಳಿದು ನಿಂತಿರುವುದು ಬರಿ 36.69 ಟಿಎಂಸಿ ನೀರು. ಜೂನ್ ಮತ್ತು ಜುಲೈ ಅವಧಿಯಲ್ಲಿ ಬಿಳಿಗುಂಡ್ಲು ಮೂಲಕ ಹರಿದಿರುವುದು ಕೇವಲ 3.55 ಟಿಎಂಸಿ ನೀರು. ಕಳೆದ ವರ್ಷ ಇದೇ ಸಮಯದಲ್ಲಿ 116.92 ಟಿಎಂಸಿ ನೀರು ಹರಿದು 30,784 ಕ್ಯೂಸೆಕ್ಸ್ ಹರಿವಿತ್ತು, ಆದರೆ ಈಗ ಕೇವಲ 178 ಕ್ಯೂಸೆಕ್ಸ್ ಹರಿವು ಮಾತ್ರ ಇದೆ ಎಂದು ಅಂಕಿ-ಅಂಶಗಳ ಸಮೇತ ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.
ಮತ್ತೊಂದೆಡೆ ತಮಿಳುನಾಡು ಅಧಿಕಾರಿಗಳು, ಸಾಮಾನ್ಯ ಮಳೆಯಾಗಿದ್ದರೆ ಈ ವೇಳೆಗೆ 40 ಟಿಎಂಸಿ ನೀರು ತಲುಪಬೇಕಿತ್ತು ಎಂದು ವಾದಿಸಿದರು. ಕರ್ನಾಟಕ ಸಂಕಷ್ಟ ಸೂತ್ರವನ್ನು ಸೂಕ್ತವಾಗಿ ಪಾಲಿಸುತ್ತಿಲ್ಲ ಹಾಗೂ ಬಾಕಿ ಉಳಿಸಿಕೊಂಡಿರುವ 9.46 ಟಿಎಂಸಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದರು. ಅಂತಿಮವಾಗಿ ಉಭಯ ರಾಜ್ಯಗಳ ವಾದ ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ಕರ್ನಾಟಕದ ನೀರಿಕ್ಷೆಯನ್ನು ಹುಸಿಗೊಳಿಸಿ ತಮಿಳುನಾಡಿನ ಪರವಾಗಿ ಅಂತಿಮ ಆದೇಶ ಹೊರಡಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











