ಬೆಂಗಳೂರು; ಕಳೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದೆ. ಆದರೆ ಈ ಸೋಲನ್ನ ಅದ್ಯಾಕೋ ಏನೋ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ಸೋಲಾಗಿ ಒಂದು ವರ್ಷವಾದರು ಈಗಲೂ ರಾಜ್ಯ ನಾಯಕರ ಮೇಲೆ ಅಸಮಾಧಾನ ಹಿರ ಹಾಕಿದ್ದಾರೆ. ನಿಮ್ಮ ಆಂತರಿಕ ಕಚ್ಚಾಟದ ಫಲವಾಗಿಯೇ ಕಾಂಗ್ರೆಸ್ ಗೆ ಗೆಲುವಾಗಿರುವುದು ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.
ಬೆಂಗಳೂರಿಗೆ ಬಂದ ಅಮಿತ್ ಶಾ ಅವರನ್ನು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಹಲವರು ಭೇಟಿಯಾಗಿದ್ದಾರೆ. ಈ ವೇಳೆ ಬಿಜೆಪಿ ಸಂಘಟನೆಯ ವೈಫಲ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನೀವೂ ಸರಿಯಾಗಿ ಕೆಲಸ ಮಾಡಿದ್ದರೆ ಶಾಮನೂರು ಶಿವಶಂಕರಪ್ಪ ಮನೆತನದ ರಾಜಕೀಯ ಪಾರಮ್ಯ ಮುಗಿದು ಹೋಗುತ್ತಿತ್ತು. ನಿಮ್ಮ ಮೇಲಾಟದಿಂದ ಆ ಕುಟುಂಬಕ್ಕೆ ರಾಜಕೀಯ ಪುನರ್ಜನ್ಮ ಸಿಕ್ಕಿತು. ಪ್ರಭಾ ಮಲ್ಲಿಕಾರ್ಜುನ ಅವರಿಗೆ ರಾಜಕೀಯ ಜಾಣ್ಮೆ ಇದೆ. ಸುಮಲತಾ ಅವರಂತೆ ಅವರಿಗೂ ರಾಜಕೀಯ ಲೆಕ್ಕಾಚಾರ ಗೊತ್ತು. ನಿಮ್ಮೆಲ್ಲರ ಕಿತ್ತಾಟದ ಫಲವಾಗಿ ಕಾಂಗ್ರೆಸ್ ನಲ್ಲಿ ಮತ್ತೊಂದು ಲಿಂಗಾಯತ ನಾಯಕತ್ವ ಸೃಷ್ಟಿಯಾಗುವುದಕ್ಕೆ ಕೊಡುಗೆ ನೀಡಿದ್ದೀರಿ. ಇದರ ಹೊಣೆಯನ್ನು ನೀವೇ ಹೊರಬೇಕಾಗುತ್ತದೆ ಎಂದಿದ್ದಾರೆ ಎನ್ನಲಾಗಿದೆ.
ಜೊತೆಗೆ ರೇಣುಕಾಚಾರ್ಯ ಏನು ಮಾಡ್ತಾ ಇದ್ದಾರೆ ಎಂದು ಕೂಡ ಕೇಳಿದ್ದಾರೆ ಎನ್ನಲಾಗಿದೆ. ಯತ್ನಾಳ್ ವಿಚಾರವೂ ಈ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ. ಒಟ್ಟಾರೆ ಚುನಾವಣೆ ಕಳೆದು ವರ್ಷವಾಗಿದ್ದರು ಸೋಲಿನ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ.

